ಹಾವೇರಿ: ಕರ್ನಾಟಕ ವಿಧಾನಸಭೆಯ ಚುನಾವಣಾ (Karnataka Election 2023) ಕಣ ರಂಗೇರುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ (Ticket Aspirants) ತಂತ್ರ-ಪ್ರತಿತಂತ್ರಗಳು ಜೋರಾಗುತ್ತಿದೆ. ಹಾವೇರಿ (Haveri) ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ (Hangal Constituency ) ಕಾಂಗ್ರೆಸ್ (Congress) ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ (Manohar Tahsildar) ಇಂದು ರೈತ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ತಾವು ಟಿಕೆಟ್ ಆಕಾಂಕ್ಷಿ ಮಾತ್ರವಲ್ಲದೆ ಜನರ ಬೆಂಬಲವೂ ತಮ್ಮೊಂದಿಗೆ ಎಂದು ರಾಜ್ಯ ನಾಯಕರಿಗೆ ಸಂದೇಶ ಕಳುಹಿಸುವ ಕಾರ್ಯವನ್ನು ಮಾಡಿದ್ದಾರೆ.
ಕ್ಷೇತ್ರದಲ್ಲಿ ಬಿರುಸುಗೊಂಡ ಮನೋಹರ್ ತಹಶೀಲ್ದಾರ್ ಚಟುವಟಿಕೆಗಳು
ಇಂದು ನಡೆದ ರೈತ ಸಮಾವೇಶದಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಹರ್ ತಹಶೀಲ್ದಾರ್ ಅವರು, ನಿಮ್ಮ ನಿಷ್ಠೆ ಹಾಗೂ 50 ವರ್ಷದ ಸೇವೆ ನಮಗೆ ತಿಳಿದಿದೆ. ಖಂಡಿತವಾಗಿ ನಿಮ್ಮನ್ನು ಪರಿಗಣಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆಂದು ಮಾಜಿ ಸಚಿವರು ತಿಳಿಸಿದರು. ಅಲ್ಲದೆ ಸ್ಥಳೀಯರಿಗೆ ಆದ್ಯತೆ ಕೊಡುತ್ತೇವೆ ಎಂದು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ರೈತರನ್ನು ಒಂದು ಮಾಡುವ ಕೆಲಸ
ಹೈಕಮಾಂಡ್ ನಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಮೇಲಿಂದ ಮೇಲೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂದು ತಾಲೂಕಿನ ಶಿವಪುರ ಹಾಗೂ ಬೊಮ್ಮನಹಳ್ಳಿ ಗ್ರಾಮದಲ್ಲಿ ರೈತ ಸಮಾವೇಶ ಆಯೋಜಿಸಿದ್ದಾರೆ. ತಾಲೂಕಿನ ಹೋಬಳಿ ಮಟ್ಟದಲ್ಲಿ ರೈತರನ್ನು ಒಂದು ಮಾಡುವ ಕೆಲಸವನ್ನು ಮಾಡಿದ್ದು, ಇಂದು ಸುಮಾರು ಸಾವಿರಕ್ಕೂ ಅಧಿಕ ರೈತರನ್ನು ಸೇರಿಸಿ ಸಂಘಟನೆ ಮಾಡಿದ್ದಾರೆ.
ತಹಶೀಲ್ದಾರ್ ಅವರ ಕಾರ್ಯ ಚಟುವಟಿಕೆಗಳು ಹಾಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆಗೆ ಹಿನ್ನಡೆ ಉಂಟು ಮಾಡಲಿದೆ ಎಂಬ ಮಾತು ಕೇಳಿ ಬಂದಿದೆ. ಇದರ ನಡುವೆಯೇ ಪಕ್ಷದ ಹೈಕಮಾಂಡ್ ಒಂದು ವೇಳೆ ಮಾತು ಕೊಟ್ಟು ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಲು ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ