ಹುಬ್ಬಳ್ಳಿ: ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿ, ಬಳಿಕ ಬಿಜೆಪಿ (BJP) ಪಕ್ಷಕ್ಕೂ ಕೂಡ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಘೋಷಣೆ ಮಾಡಿದ್ದಾರೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲವಾದ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನನ್ನು ಬಿಜೆಪಿ ನಾಯಕರು ನಡೆಸಿಕೊಂಡಿರುವ ರೀತಿ ನನಗೆ ಶಾಕ್ ನೀಡಿದೆ. ಓರ್ವ ಹಿರಿಯ ನಾಯಕನಿಗೆ ಹೀಗೆ ಮಾಡಿದರೆ ಏನು ಹೇಳಬೇಕು ಅಂತ ಅರ್ಥವಾಗುತ್ತಿಲ್ಲ. ನನಗೆ ಯಾವುದೇ ಸಚಿವ (Minister) ಸ್ಥಾನ, ಸಿಎಂ ಸ್ಥಾನ, ಉನ್ನತ ಸ್ಥಾನವನ್ನು ಕೇಳುವುದಿಲ್ಲ. ನನಗೆ ಕ್ಷೇತ್ರದ ಜನರ ಸೇವೆ ಮಾಡಲು ಕೇವಲ ಶಾಸಕನಾಗಿ (MLA) ಇರುತ್ತೇನೆ ಎಂದು ಮನವಿ ಮಾಡಿದರು ಅವರು ಒಪ್ಪಿಗೆ ಸೂಚಿಸಿಲ್ಲ. ಇದರಿಂದ ನನ್ನ 40 ವರ್ಷಗಳ ರಾಜಕೀಯ (Politics) ದಿನದಲ್ಲಿ ಕರಾಳ ದಿನವಾಗಿದೆ. ನಾನು ಇಂದು ಚುನಾವಣೆಗೆ (Election) ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ನಾಳೆ ನಿಮಗೆ ಖಚಿತ ಮಾಹಿತಿ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ನನ್ನದು ಯಾವುದೇ ಸಿ.ಡಿ ಇಲ್ಲ
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ನೀವು ಕೇಳುತ್ತಿದ್ದ ಸಮಯ ಬಂದಿದೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಕಳೆದ ಮೂರು ನಾಲ್ಕು ತಿಂಗಳು ಅತ್ಯಂತ ಕೆಟ್ಟ ದಿನಗಳು. ನಾನು ರಾಜ್ಯಾಧ್ಯಕ್ಷನಾಗಿ, ವಿರೋಧ ಪಕ್ಷದ ನಾಯಕ, ಸಿಎಂ ಆಗಿ ಕೆಲಸ ಮಾಡಿದ್ದೇನೆ. ಪಕ್ಷ ಎಲ್ಲಾ ರೀತಿಯ ಗೌರವ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಪಕ್ಷವನ್ನು ಕೆಳ ಮಟ್ಟದಿಂದ ಕಟ್ಟಿದ್ದೇನೆ.
ಕಷ್ಟ ಕಾಲದಲ್ಲಿ ಬಿಜೆಪಿ ಸಂಘಟನೆ ಮಾಡಿದ್ದೇನೆ. ಜನಸಂಘ, ಆರ್.ಎಸ್.ಎಸ್ ಮೂಲ ಇಟ್ಟುಕೊಂಡು ಬಂದವರು ನಾವು. ದಕ್ಷಿಣ ಭಾರತದ ಮೊದಲ ಮೇಯರ್, ಮೊದಲ ಬಿಜೆಪಿ ಶಾಸಕರು ನಮ್ಮ ಕುಟುಂಬದವರು.
ಯಾವುದೇ ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ನನ್ನದು ಯಾವುದೇ ಸಿ.ಡಿ ಇಲ್ಲ ಆದರೂ ಹೀಗೆ ಮಾಡಿದ್ದಾರೆ. ಉತ್ತಮವಾದ ಆಡಳಿತ ಕೊಡಲು ಯತ್ನಿಸಿದೆ. ಕೆಲವೇ ತಿಂಗಳು ಸಿಎಂ ಸ್ಥಾನ ಸಿಕ್ಕರೂ ಉತ್ತಮ ಕೆಲಸ ಮಾಡಿದೆ. ಈಗ ಹೇಳುತ್ತಾರೆ ನೀವು ಚೆನ್ನಾಗಿ ಕೆಲಸ ಮಾಡಿದ್ದೀರಿ ಅಂತ ಎಂದು ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಟಿಕೆಟ್ ಯಾಕೆ ನೀಡಲ್ಲ ಎಂದರೆ ಉತ್ತರವಿಲ್ಲ
ನನಗೆ ಮೊದಲ ಲಿಸ್ಟ್ ನಲ್ಲಿ ಹೆಸರು ಬಾರದೇ ಇದ್ದಾಗ ಅಚ್ಚರಿ ಆಯ್ತು, ಟಿಕೆಟ್ ಕೊಡೋದಿಲ್ಲ ಎಂದಾಗ ಆಘಾತ ಆಯ್ತು. ನಾನು ಯಾವುದಾದರೂ ಸ್ಕ್ಯಾಂಡಲ್ನಲ್ಲಿದ್ದರೆ ಅಥವಾ ನನ್ನ ಕೆಲಸದಲ್ಲಿ ಲೋಪಗಳಿದೆ ಎಂದರೆ ಸರಿ. ಕ್ರಿಮಿನಲ್ ಹಿನ್ನೆಲೆ ಇದ್ದರೂ ಟಿಕೆಟ್ ಕೊಟ್ಟಿದ್ದಾರೆ. ಯಾವ ಕಾರಣಕ್ಕಾಗಿ ನನಗೆ ಟಿಕೆಟ್ ನಿರಾಕರಿಸಿದ್ದೀರಿ ಎಂದರೆ ಯಾರ ಬಳಿಯೂ ಉತ್ತರವಿಲ್ಲ.
ನನ್ನನ್ನು ಯೂಸ್ ಆ್ಯಂಡ್ ಥ್ರೋ ಮಾಡಿದ್ದಾರೆ
ಧರ್ಮೇಂದ್ರ ಪ್ರಧಾನ್ ಅವರನ್ನೇ ಇನ್ನೊಂದು ಬಾರಿ ಅವಕಾಶ ಕೊಡಿ ಅಂತ ಕೇಳಿದೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ, ಯಾಕೆ ಟಿಕೆಟ್ ಕೊಡಲಿಲ್ಲ ಅನ್ನೋ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲಯೂ ಉತ್ತರವಿಲ್ಲ. ಇವತ್ತಿನವರೆಗೂ ಹೈಕಮಾಂಡ್ ಕೂಡ ಇದಕ್ಕೆ ಉತ್ತರ ನೀಡಿಲ್ಲ. ಆದ್ದರಿಂದ ಬಹಳ ನೋವಾಗಿದೆ.
ಮೂರು ತಿಂಗಳ ಮುನ್ನವೇ ಮಾಹಿತಿ ನೀಡಿದ್ದರೆ ರಾಜಕೀಯದಿಂದ ನಿವೃತ್ತಿ ಆಗಿ ಸುಮ್ಮನಾಗುತ್ತಿದೆ. ಆದರೆ ಏನೂ ಇಲ್ಲದೆ ಸಂಕಟಪಡುವ ಸ್ಥಿತಿ ಎದುರಾಗಿದೆ. ಪಕ್ಷದಲ್ಲಿ ನನ್ನನ್ನು ಯೂಸ್ ಆ್ಯಂಡ್ ಥ್ರೋ ಮಾಡಿದ್ದಾರೆ ಕಿಡಿಕಾರಿದರು.
ಇದನ್ನೂ ಓದಿ: Laxman Savadi-Ramesh Jarkiholi: ಪೀಡೆ ತೊಲಗಿತು ಎಂದಿದ್ದ ಸಾಹುಕಾರ್ಗೆ ಸವದಿ ತಿರುಗೇಟು!
ನಾನು ಉನ್ನತ ಹುದ್ದೆ ಆಕಾಂಕ್ಷಿಯಾಗಬಹುದೆಂದು ಹುನ್ನಾರ
ಮುಂದೆ ನಮ್ಮ ಹಿತೈಷಿಗಳ ಸಭೆ ಮಾಡ್ತೇನೆ. ರಾಜೀನಾಮೆ ನಂತರ ಮುಂದಿನ ನಡೆ ನಿರ್ಧರಿಸ್ತೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದಾರೆ. ಈಗ ಉಳಿದಿರುವ ನಾಯಕರಲ್ಲಿ ನಾನೇ ಹಿರಿಯ, ಉನ್ನತ ಹುದ್ದೆ ಆಕಾಂಕ್ಷಿಯಾಗಬಹುದೆಂದು ಹುನ್ನಾರ ಮಾಡುತ್ತಿದ್ದಾರೆ. ನಾನು ಇಂದೂ ಹೇಳಿದೆ, ಬರೀ ಶಾಸಕನಾಗಿ ಉಳಿಯುತ್ತೇನೆ ಎಂದರೂ ಕೇಳಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ