ರಾಯಚೂರು: ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದ್ದಂತೆ ರಾಜಕೀಯ (Politics) ನಾಯಕರ ನಡುವಿನ ವಾಕ್ ಸಮರ ಮಿತಿ ಮೀರುತ್ತಿದೆ. ಈ ನಡುವೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ನಾಲಿಗೆ ಹರಿಬಿಟ್ಟಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ (Shivanagouda Nayak), ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಜಾಲಹಳ್ಳಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿರುವ ದೇವದುರ್ಗ ಬಿಜೆಪಿ (BJP) ಶಾಸಕ ಶಿವನಗೌಡ ನಾಯಕ್ ಅವರು, ಕುಮಾರಸ್ವಾಮಿಗೆ ಒಬ್ಬರಲ್ಲ ಏಳು ಮಂದಿ ಹೆಂಡತಿಯರು (Wife). ತಮ್ಮ ಕುಟುಂಬದ ಸಮಸ್ಯೆಯನ್ನೇ ಸರಿಪಡಿಸಿಕೊಳ್ಳಲು ಆಗದ ಕುಮಾರಸ್ವಾಮಿ, ಶಿವನಗೌಡ ನಾಯಕ್ನನ್ನು ಸೋಲಿಸುತ್ತಾನಂತೆ ಅಂತ ವ್ಯಂಗ್ಯವಾಗಿ ಕಿಡಿಕಾರಿದ್ದಾರೆ.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಶಾಸಕ ಶಿವನಗೌಡ ನಾಯಕ್, ಅವನ್ಯಾವನೋ ಕುಮಾರಸ್ವಾಮಿಯಂತೆ. ಅವನಿಗೆ ಒಬ್ಬರಲ್ಲ 7 ಹೆಂಡತಿಯರು . ಪಾಪ ಇಲ್ಲಿಗೆ ಬಂದು ಶಿವನಗೌಡನನ್ನು ಬೇರೆ ಕಡೆ ಕಳುಹಿಸಿ ಅಂತಾರೆ. ಹೇ ಹುಚ್ಚ ನೀನೇ ಗೆಲ್ಲಲು ಆಗೋದಿಲ್ಲ. ನಿಮ್ಮ ಮನೆಯಲ್ಲೇ ಜಗಳ ನಡೆಯುತ್ತಿದೆ. ರೇವಣ್ಣನ ಹೆಂಡತಿಗೆ ಟಿಕೆಟ್ ಕೊಡಲು ನಿನಗೆ ಮನಸ್ಸಿಲ್ಲ. ಒಂದು ಕಡೆ ಮಗ, ಮತ್ತೊಂದು ಕಡೆ ಹೆಂಡತಿ, ಇನ್ನೊಂದು ಕಡೆ ಅಪ್ಪ. ಒಂದು ಕಡೆ ದೇವೇಗೌಡರು ಸೋತರು, ಇನ್ನೊಂದು ಕಡೆ ಮಗ ಸೋತ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: Roopa Shashidhar: ಯುಗಾದಿ ಗಿಫ್ಟ್ ಹೆಸರಲ್ಲಿ ಮತದಾರರಿಗೆ ಆಮಿಷ, ಕಾಂಗ್ರೆಸ್ ಶಾಸಕಿ ವಿರುದ್ಧ FIR
ಅಲ್ಲದೆ, ನೇರವಾಗಿ ಕುಮಾರಸ್ವಾಮಿ ಸವಾಲು ಹಾಕಿ ಗಂಡಸ್ತನದ ಹೇಳಿಕೆಯನ್ನು ಶಿವನಗೌಡ ನಾಯಕ್ ನೀಡಿದ್ದಾರೆ. ನಿಜವಾಗಿ ನಿನಗೆ ಗಂಡಸ್ತನ ಇದ್ದರೆ ಈ ವಿಧಾನಸಭಾ ಚುನಾವಣೆಯಲ್ಲಿ ನಿನ್ನ ಶಕ್ತಿ ಪ್ರೂವ್ ಮಾಡು. ಸವಾಲಿಗೆ ನಾನು ಸಿದ್ಧನಿದ್ದೀನಿ. ಕ್ಷೇತ್ರದಲ್ಲಿ ಒಂದು ಲಕ್ಷ ಐವತ್ತು ಸಾವಿರ ವೋಟ್ ತೆಗೆದುಕೊಳ್ಳಿಲ್ಲ ಎಂದರೆ ನಾನು ಚುನಾವಣೆಯಲ್ಲಿ ಗೆದ್ದರು ಕೂಡ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.
ಅಲ್ಲದೆ, ಇವರು ಜಿಲ್ಲೆಯ ತುಂಬಾ ಶಿವನಗೌಡನನ್ನು ಸೋಲಿಸ್ತೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಸಾಧ್ಯವಾದ ಮಾತು ನಾನಲ್ಲ, ಈ ಜಿಲ್ಲೆಯಲ್ಲಿ ನಾಲ್ಕು ಸೀಟನ್ನು ಗೆಲ್ಲಿಸಿಕೊಡುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದರು.
ನಾನು ಯಾವತ್ತು ಈ ಕ್ಷೇತ್ರದ ಜನರಿಗೆ ಮೋಸ ಮಾಡುವುದಿಲ್ಲ. ನಿಮ್ಮ ಮನೆಗೆ ಬಂದು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಯಾರಿಗೂ ಅನ್ಯಾಯ ಮಾಡುವುದಿಲ್ಲ, ಕೆಟ್ಟ ಕೆಲಸ ಮಾಡುವುದಿಲ್ಲ. ಎಂತ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದೇವೆ ಅಂತ ನೀವು ಖುಷಿ ಪಡಬೇಕು, ಅಂತಹ ಕೆಲಸ ಮಾಡುತ್ತೇನೆ.
ನನ್ನ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ಆಗುತ್ತಿದೆ. ಶಿವನಗೌಡ ಎಂದರೆ ಕೆಲವರಿಗೆ ನಿದ್ದೆ ಬರುತ್ತಿಲ್ಲ, ರಾತ್ರಿ ಎದ್ದು ಕೂರುತ್ತಾರೆ. ಅವನ್ಯಾರೋ ಕುಮಾರಸ್ವಾಮಿ ನನ್ನನ್ನು ಬೇರೆ ಕಡೆ ಕಳುಹಿಸಿ ಬಿಡಿ ಅಂತ ಹೇಳ್ತಾನೆ. ಆದರೆ ಅವರಿಗೆ ನಾನು ಸವಾಲು ಹಾಕುತ್ತಿದ್ದೀನಿ, ಕ್ಷೇತ್ರದಲ್ಲಿ ನಿನ್ನ ಶಕ್ತಿ ತೋರಿಸು. ನಾನು ಯಾವ ಕುಮಾರಸ್ವಾಮಿ, ರಾಹುಲ್ ಗಾಂಧಿಗೂ ಭಯ ಬೀಳುವುದಿಲ್ಲ. ಪ್ರಮಾಣಿಕವಾಗಿ ನಿಮ್ಮ ಕೆಲಸವನ್ನು ಮಾಡಿ, ಕ್ಷೇತ್ರದ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ