ಬೆಂಗಳೂರು: ದೆಹಲಿಯಲ್ಲಿ (Delhi) ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ (Screening Committee) ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ನ (Congress) 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಮುದ್ರೆ ಬಿದ್ದಿದೆ. ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದ್ದು, ಮಾರ್ಚ್ ಕೊನೆಯ ವಾರದಲ್ಲಿ ಬಹುತೇಕ ಟಿಕೆಟ್ ಘೋಷಣೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 125 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲ ಮುಂದುವರಿದಿದ್ದು, ಈಗಾಗಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಸಮಯ ತೆಗೆದುಕೊಳ್ಳಲು ಹೈಕಮಾಂಡ್ (High Command) ನಿರ್ಧರಿಸಿದೆ ಎನ್ನಲಾಗಿದೆ.
ದೆಹಲಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನಿರ್ಣಯ
ಕರ್ನಾಟಕದಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಕಾಂಗ್ರೆಸ್ ಬಿದ್ದಿದೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಪ್ರಚಾರದ ವೇಗವನ್ನು ಕಾಂಗ್ರೆಸ್ ನಾಯಕರು ಜೋರು ಮಾಡಿದ್ದು, ಆಡಳಿತರೂಧ ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: BS Yediyurappa: ಮಹಿಳೆ ಧರಿಸಿದ್ದ ನೆಕ್ಲೇಸ್ ನೋಡಿ ಸೂಪರ್ ಎಂದ ಬಿಎಸ್ವೈ; ಮಾಜಿ ಸಿಎಂಗೆ ಮುಸ್ಲಿಮರಿಂದ ಜೈಕಾರ!
ಇದರ ನಡುವೆ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಹಲವು ಬಾರಿ ಸರ್ವೆ ಮಾಡಿಸಿ ಜನಾಭಿಪ್ರಾಯ ಸಂಗ್ರಹಿಸಿದೆ. ಯಾವ ಅಭ್ಯರ್ಥಿ ಸೂಕ್ತ, ಯಾರಪರ ಜನರ ಒಲವಿದೆ ಅಂತೆಲ್ಲಾ ಲೆಕ್ಕ ಹಾಕಿದೆ. ಜೊತೆಗೆ 3 ಸಲ ಖಾಸಗಿ ಸಮೀಕ್ಷೆನಡೆಸಿದ್ದ ವರದಿ ಹಿಡಿದು ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಭಿನ್ನಮತ, ಪಕ್ಷಾಂತರ, ಮೂಲ, ವಲಸಿಗ ಅನ್ನುವಂತಿಲ್ಲ. ಕುಟುಂಬ ರಾಜಕೀಯ ಅಪ್ಪ-ಮಕ್ಕಳು ಎನ್ನುವ ಬೇಧವಿಲ್ಲದೆವ ಗೆಲ್ಲುವವರಿಗೆ ಟಿಕೆಟ್ ಸಿಗುವುದು ಫೈನಲ್ ಆಗಿದೆ. ಟಿಕೆಟ್ ಸಿಗದರು ಕ್ಷೇತ್ರ ಪಕ್ಷದ ಪರ ಕೆಲಸ ಮಾಡಿ ಗೆಲ್ಲಿಸಿದರೆ, ಭವಿಷ್ಯದಲ್ಲಿ ಸ್ಥಾನಮಾನ ನೀಡುವ ನಿರ್ಣಯ ಮಾಡಲಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ದೆಹಲಿಯಲ್ಲಿ ನೀಡಿದ ಹೇಳಿಕೆ ಪುಷ್ಟಿ ಕೊಟ್ಟಿದೆ.
ಗೆಲುವೆ ಟಿಕೆಟ್ ನೀಡಲು ಮಾನದಂಡ
ಕಳೆದ ವರ್ಷ ಉದಯ್ಪುರದಲ್ಲಿ ನಡೆದಿದ್ದ ಎಐಸಿಸಿ ಮಹಾ ಅಧಿವೇಶನದಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸೂತ್ರ ನಿಯಮ ಮಾಡಿದ್ದರು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎನ್ನುವ ಏಕೈಕ ಉದ್ದೇಶದಿಂದ ಅಪ್ಪ-ಮಕ್ಕಳು, ಅಣ್ಣ-ತಮ್ಮ, ಬಂಧು-ಬಳಗ, ಮೂಲ-ವಲಸಿಗ ಎನ್ನುವ ಬೇಧವಿಲ್ಲದೆ ಟಿಕೆಟ್ ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸಿದೆ.
ಮಾರ್ಚ್ ಕೊನೆಯ ವಾರದಲ್ಲಿ ಬಹುತೇಕ ಟಿಕೆಟ್ ಘೋಷಣೆ ಆಗಲಿದೆ. ಮಾರ್ಚ್ 20ಕ್ಕೆ ರಾಹುಲ್ಗಾಂಧಿ ಬೆಳಗಾವಿಗೆ ಆಗಮಿಸುತ್ತಿದ್ದು, ಮಾರ್ಚ್ 22ಕ್ಕೆ ಯುಗಾದಿ ಹಬ್ಬ, ಬಳಿಕ ಅಮವಾಸ್ಯೆ ಇದೆ. ಇದರಿಂದ ಮಾರ್ಚ್ 24 ಕಳೆದುಕೊಂಡು ಶುಭದಿನ ನೋಡಿಕೊಂಡು ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಬರ್ತೀನಿ ಅಂದ್ರೆ ಸೋಮಣ್ಣ, ಯೋಗೇಶ್ವರ್ಗೂ ಕಾಂಗ್ರೆಸ್ ಟಿಕೆಟ್
ಇನ್ನು, ಬಿಜೆಪಿಯಲ್ಲಿ ರೆಬೆಲ್ ಆಗಿರುವ ವಿ ಸೋಮಣ್ಣ ಅವರು ಕಾಂಗ್ರೆಸ್ಗೆ ಆಗಮಿಸುವುದಾದರೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ವಿ ಸೋಮಣ್ಣ ಜೊತೆ ಅಂತಿಮ ಸುತ್ತಿನ ಮಾತುಕತೆಗೆ ನಡೆಸಲು ರಾಜ್ಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಳಿದಂತೆ ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ನಿರ್ಧಾರದ ಬಳಿಕ ಟಿಕೆಟ್ ಅಂತಿಮ ಮಾಡಲು ತೀರ್ಮಾನ ಮಾಡಲಾಗಿದ್ದು, ಕರೆತಂದು ಟಕೆಟ್ ನೀಡಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಮಾಜಿ ಸಚಿವ ಸಿಪಿವೈ ಜೊತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಕೋಲಾರ ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಸ್ಪರ್ಧೆಗೆ ನಿರಾಕರಣೆ
ಇನ್ನು, ರಾಜ್ಯ ರಾಜಕಾರಣಕ್ಕೆ ಆಗಮಿಸದಿರಲು ಮಾಜಿ ಸಂಸದ ಕೆಹೆಚ್ ಮುನಿಯಪ್ಪ ನಿರ್ಧಾರ ಮಾಡಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉಳಿದಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಅವರ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಜಿಸಲು ಮುಂದಾಗಿರುವ ಕಾಂಗ್ರೆಸ್ ಹೆಚ್.ಡಿ ತಮ್ಮಯ್ಯ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆಯಂತೆ.
125 ಕ್ಷೇತ್ರಗಳಲ್ಲಿ ಒಂದೇ ಹೆಸರು ಫೈನಲ್ ಆಗಿದ್ದರೂ ಕೆಲ ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವ ಬಗ್ಗೆ ಮುಂದಿನ ಅಂತಿಮ ಸಭೆಯಲ್ಲಿ ನಿರ್ಧಾರ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಉಳಿದಂತೆ ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದ ಮಾಜಿ ಸಂಸದ ಧ್ರುವನಾರಾಯಣ್ ಅವರ ಅಕಾಲಿಕ ನಿಧನದಿಂದ ಈ ಬಾರಿಗೆ ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲೇ ಅವರ ಹೆಸರು ಘೋಷಣೆ ಆಗಲಿದೆಯಂತೆ.
ಇದನ್ನೂ ಓದಿ: Chikkaballapur ಜನತೆಗೆ ಯುಗಾದಿ ಕೊಡುಗೆ; ಸಿಎಂಗೆ ಧನ್ಯವಾದ ಸಲ್ಲಿಸಿದ ಸಚಿವ ಸುಧಾಕರ್
ಸಿಎಂ ವಿರುದ್ಧ ಪ್ರಬಲ ಹುರಿಯಾಳು ಕಣಕ್ಕೆ
ಹೊಳಲ್ಕೆರೆ ಕ್ಷೇತ್ರದ್ಲಲಿ ಮಾಜಿ ಸಚಿವ ಹೆಚ್ ಆಂಜನೇಯ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸ್ಥಳೀಯರು ನಾಯಕರು ವಿರೋಧ ಮಾಡಿರುವುದನ್ನು ಹೈಕಮಾಂಡ್ ಗಮನಕ್ಕೆ ತೆಗೆದುಕೊಂಡಿದ್ದು, ಸರ್ವೇಯಲ್ಲಿ ವ್ಯತಿರಿಕ್ತ ವರದಿ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪುವ ಅವಕಾಶವಿದೆ ಎನ್ನಲಾಗಿದೆ.
ಬಿಜೆಪಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಮುಂದಾಗಿರುವ ಕಾರಣ, ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಸೂಚನೆಯನ್ನು ಹೈಕಮಾಂಡ್ ರಾಜ್ಯ ನಾಯಕರಿಗೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ