ನವದೆಹಲಿ (ನ.13): ತಮ್ಮ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ 17 ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಅವರು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಹೊಂದಿದ್ದಾರೆ ಎನ್ನುವ ಮೂಲಕ ಅನರ್ಹಶಾಸಕರಿಗೆ ಸರ್ವೋಚ್ಛ ನ್ಯಾಯಾಲ ದೊಡ್ಡ ರಿಲೀಫ್ ನೀಡಿದೆ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಅನರ್ಹ ಶಾಸಕರು ತೀರ್ಪನ್ನು ಸ್ವಾಗತಿಸಿದ್ದು, ತಮ್ಮ ಮುಂದಿನ ನಡೆ ಕುರಿತು ಸಂಜೆಯೊಳಗೆ ಚರ್ಚೆ ನಡೆಸಿ ನಿರ್ಧಾರ ಕೈಕೊಳ್ಳುತ್ತೇವೆ ಎಂದಿದ್ದಾರೆ.
ಈ ಕುರಿತು ನ್ಯೂಸ್ 18ನೊಂದಿಗೆ ಪ್ರತಿಕ್ರಿಯಿಸಿದ ಎಚ್ ವಿಶ್ವನಾಥ್. ತೀರ್ಪನ್ನು ಸ್ವಾಗತಿಸುತ್ತೇವೆ. ರಾಜೀನಾಮೆ ನೀಡಿದ ಬಳಿಕ ಸ್ಪೀಕರ್ ನಮ್ಮನ್ನು ಅನರ್ಹಗೊಳಿಸಿದ್ದರು. ಈ ಕ್ರಮ ಪ್ರಶ್ನಿಸಿ ನಾವು ಕೋರ್ಟ್ ಮೆಟ್ಟಿಲೇರಿದ್ಧೆವು. ಈಗ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಈ ಹಿನ್ನೆಲೆ ಈ ಕುರಿತು ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಇನ್ನು ತೀರ್ಪು ಸ್ವಾಗತಿಸಿ ಮಾತನಾಡಿದ ಮಸ್ಕಿ ಅನರ್ಹ ಶಾಸಕ ಪ್ರತಾಪ್ ಗೌಡ, ಬಿಜೆಪಿ ಸೇರುವ ಕುರಿತು ಎಲ್ಲಾ 17 ಜನ ಸ್ನೇಹಿತರು ಇಂದು ಕುಳಿತು ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ರಾಣೆಬೆನ್ನೂರು ಅನರ್ಹ ಶಾಸಕ ಶಂಕರ್ ಮಾತನಾಡಿ, ನಮ್ಮ ಅನರ್ಹತೆ ರದ್ದಾಗಬೇಕಿತ್ತು. ಬಿಜೆಪಿ ಸೇರುವ ಕುರಿತು ಎಲ್ಲಾರು ಒಟ್ಟಿಗೆ ಕುಳಿತು ನಿರ್ಧರಿಸುತ್ತೇವೆ ಎಂದರು.
ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಮಾತನಾಡಿ, ಸುಪ್ರೀಂ ಆದೇಶವನ್ನು ಗೌರವದಿಂದ ಸ್ವಾಗತಿಸುತ್ತೇವೆ. ನಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ 17 ಜನರು ಕುಳಿತು ಚರ್ಚೆ ನಡೆಸುತ್ತೇವೆ. 17 ಜನಕ್ಕೂ ಸ್ಪರ್ಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ . ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಇದನ್ನು ಓದಿ: ಅನರ್ಹರಿಗೆ ಟಿಕೆಟ್ ನೀಡುವ ಕುರಿತು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ; ನಳಿನ್ ಕುಮಾರ್ ಕಟೀಲ್
ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಶಿವಾಜಿನಗರ ಅನರ್ಹ ಶಾಸಕ ರೋಷನ್ ಬೇಗ್, ತೀರ್ಪಿನ ಕುರಿತು ಹರ್ಷ ವ್ಯಕ್ತಪಡಿಸಿದರು. ಇನ್ನು ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು. ನಾನಾ, ನನ್ನ ಮಗನ ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು
ಯಲ್ಲಾಪುರ ಅನರ್ಹಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, ಸುಪ್ರೀಂ ಆದೇಶವನ್ನು ನಾವು ಪಾಲಿಸುತ್ತೇವೆ ಇಂದು ಸಂಜೆಯೊಳಗೆ ನಮ್ಮ ಮುಂದಿನ ರಾಜಕೀಯ ನಿರ್ಧಾರ ಕುರಿತು ತೀರ್ಮಾನ ಮಾಡುತ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ