ಬೆಂಗಳೂರು: ಬಿಜೆಪಿ ಸರ್ಕಾರದ (40% commission ) ವಿರುದ್ಧ 40% ಕಮಿಷನ್ ಆರೋಪ ಮಾಡಿ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಕರ್ನಾಟಕ ಗುತ್ತಿಗೆದಾರ ಸಂಘ (Commission Contractors Association), ಇದೀಗ ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ (MLA Thippareddy) ಹಲವಾರು ಕಾಮಗಾರಿಗಳಲ್ಲಿ ಕಮಿಷನ್ ಪಡೆದುಕೊಂಡಿದ್ದಾರೆ ಎಂದು ಗುತ್ತಿಗೆಗಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ (Manjunath) ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕ ವಿರುದ್ಧ ನೇರ ಆರೋಪ ಮಾಡಿದ್ದು, ತಾವೋಬ್ಬರೆ ₹ 90 ಲಕ್ಷ ನೀಡಿರುವುದಾಗಿ ಆರೋಪ ಮಾಡಿದ್ದಾರೆ.
ಶಾಸಕರ ವಿರುದ್ಧ ಗಂಭೀರ ಆರೋಪ
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಕೂಡ ಅಷ್ಟೇ ಸತ್ಯ ಅಂತ ಮಂಜುನಾಥ್ ಹೇಳಿದ್ದಾರೆ. ಈಶ್ವರಪ್ಪ ವಿರುದ್ಧ ಎನ್ಬಿಡ್ಲ್ಯೂ ಜಾರಿಯಾದರೂ ಅವರನ್ನು ಬಂಧಿಸಲಿಲ್ಲ. ಆದರೆ ನಮ್ಮ ಅಧ್ಯಕ್ಷರಿಗೆ 88 ವರ್ಷವಾಗಿದ್ದರು ಅವ ರನ್ನು ಬಂಧಿಸಿದ್ದರು. ಆದರೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಬಿ ರಿಪೋರ್ಟ್ ಬಂದಿದ್ದು ನಿಮಗೆ ಗೊತ್ತೇ ಇದೆ. ನನ್ನ ಬಳಿ ಶಾಸಕ ತಿಪ್ಪಾರೆಡ್ಡಿ ಲಂಚ ಪಡೆದಿರುವ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಅದಕ್ಕಾಗಿ ಅವರ ಆಪ್ತ ಸಹಾಯಕ ಈಗಾಗಲೇ ನನ್ನನ್ನು ಕರೆಸಿ ಮಾತನಾಡಿ, ಭ್ರಷ್ಟಾಚಾರವನ್ನು ಆರೋಪ ಮಾಡುತ್ತಿರುವುದನ್ನ ಪ್ರಶ್ನಿಸಿದ್ದಾರೆ ಎಂದು ಆರೋಪಿಸಿದ ಮಂಜುನಾಥ್ ಕೆಲವು ಆಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
90 ರೂಪಾಯಿ ಲಕ್ಷ ಲಂಚ
ಶಾಸಕ ತಿಪ್ಪಾರೆಡ್ಡಿಯವರಿಗೆ ಹಲವು ಕಾಮಗಾರಿಗಳಿಗೆ ಕಳೆದ ಒಂದು ವರ್ಷದಲ್ಲಿ ₹ 90 ಲಕ್ಷ ಕಮಿಷನ್ ನೀಡಿದ್ದೇನೆ. ಇಷ್ಟೂ ಹಣವನ್ನು ನಗದು ರೂಪದಲ್ಲೇ ನೀಡಿದ್ದೇನೆ. ಒಂದು ಕೋಟಿ ಕಾಮಗಾರಿಗೆ 10 ಲಕ್ಷ ರೂಪಾಯಿ ನಂತರ ಕಮಿಷನ್ ಕೊಡಲಾಗಿದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಯಾವ ಕಾಮಗಾರಿಗೆ ಎಷ್ಟು ಲಂಚ
ಚಿತ್ರದುರ್ಗದಲ್ಲಿ 700 ರಿಂದ 800 ಕೋಟಿ ರೂ ಕಾಮಗಾರಿ ನಡೆದಿವೆ. ಪಿಡಬ್ಲ್ಯೂಡಿ ಹಾಗೂ ಸಿಸಿ ರೋಡ್ ಕಾಮಗಾರಿಗೆ 15 % , ಕಟ್ಟಡ ಕಾಮಗಾರಿಗಳಿಗೆ 10% ಕೊಡಬೇಕಾಗಿದೆ. ಎಂಜಿಪಿಎಸ್ ಕಾಮಗಾರಿಗೆ 15 ಲಕ್ಷ ರೂ. ನೀರಾವರಿ ಇಲಾಖೆ ಕಾಮಗಾರಿಗಳಿಗೆ ಶೇ. 25 ಕಮಿಷನ್, ಪಿಡಬ್ಲ್ಯೂಡಿ ಕಾಮಗಾರಿಗೆ ಶೇ.15 % ಕಮಿಷನ್ ನೀಡಿದ್ದೇನೆ. ಚಿತ್ರದುರ್ಗದಲ್ಲಿ ಪಿಡಬ್ಲ್ಯೂ ಕಟ್ಟಡ ನಾನೇ ಕಟ್ಟಿದ್ದು, ಮೂರು ವರ್ಷಗಳಾದರೂ ಬಿಲ್ ಬಿಡುಗಡೆ ಮಾಡಿಲ್ಲ ಎಂದು ಮಂಜುನಾಥ್ ಆರೋಪಿಸಿದರು.
ಶಾಸಕ ತಿಪ್ಪಾರೆಡ್ಡಿಗೆ ನೀಡಿರುವ ಕಮಿಷನ್
ಮಂಜುನಾಥ್ ಆರೋಪದಂತೆ ಪಿಡಬ್ಲ್ಯೂಡಿ ಕಾಮಗಾರಿಗೆ 12.5 ಲಕ್ಷ ರೂ, ಆಸ್ಪತ್ರೆ ಕಾಮಗಾರಿಗೆ 12.5 ಲಕ್ಷ ರೂ, ಕೋವಿಡ್ ಮೊದಲ ಅಲೆ ಯಲ್ಲಿ 10 ಲಕ್ಷ ರೂ, ಕೋವಿಡ್ 2ನೇ ಅಲೆಯಲ್ಲಿ 12 ಲಕ್ಷ ರೂ, ಎಂಜಿಪಿಎಸ್ 4 ಲಕ್ಷ ರೂ, ಲೇಔಟ್ ನಿರ್ಮಾಣಕ್ಕೆ 4 ಲಕ್ಷ ರೂ, ಲೇಔಟ್ಗೆ ಅನುಮತಿ ನೀಡಲು 18 ಲಕ್ಷ ರೂ. ಲಂಚ ನೀಡಿರುವುದಾಗಿ ಮಂಜುನಾಥ್ ಹೇಳಿದ್ದಾರೆ.
50ಕ್ಕೂ ಹೆಚ್ಚಿನ ಗುತ್ತಿಗೆದಾರರಿಂದ ಕಮಿಷನ್
ಶಾಸಕ ತಿಪ್ಪಾರೆಡ್ಡಿಗೆ ನಾನೊಬ್ಬನೇ ಅಲ್ಲ, 50ಕ್ಕೂ ಹೆಚ್ಚು ಗುತ್ತಿಗೆದಾರರು ಕಮಿಷನ್ ನೀಡಿದ್ದಾರೆ. ಶೇಕಡಾ 25% ಕಮಿಷನ್ ನೀಡಿದ್ದು, ಅವರ ವಿರುದ್ಧ 100ಕ್ಕೂ ಹೆಚ್ಚು ಆಡಿಯೋ ದಾಖಲೆ ಗಳಿವೆ. ನನ್ನ ಮೇಲಿನ ಕೋಪಕ್ಕೆ ಕಾಂಕ್ರೀಟ್ ರೋಡ್ ಮಾಡಿಸಲು ಬಿಡುತ್ತಿಲ್ಲ. ಕಮಿಷನ್ ಕೊಡುವವರೆಗೂ ಅವರು ಕಾಮಗಾರಿಗೆ ಅವಕಾಶ ಕೊಡುವುದಿಲ್ಲ. ಕಾಮಗಾರಿ ಕೊಡಬೇಕು ಅಂದರೆ ಅವರಿಗೆ ಅಡ್ವಾನ್ಸ್ ಆಗಿ ಲಂಚ ಕೊಡಬೇಕು. ನನ್ನೊಬ್ಬನಿಂದಲೇ 90 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ. ಅವರು ಯಾವುದೇ ಕಾನೂನು ಹೋರಾಟ ಮಾಡಿದರೂ ನಾನು ಸಿದ್ಧನಿದ್ದೇನೆ. ನನ್ನ ಬಳಿ ಸಾಕ್ಷಿಗಳಿವೆ. ನಾನು ಈಗಾಗಲೇ ನನ್ನ ಕುಟುಂಬದವರ ಜೊತೆ ಮಾತಾಡಿದ್ದೇನೆ. ನನಗೆ ಯಾವುದೇ ಭಯವಿಲ್ಲ, ನಾನು ಎಲ್ಲದ್ದಕ್ಕೂ ಸಿದ್ಧವಾಗಿದ್ದೇನೆ ಎಂದು ನ್ಯೂಸ್ 18 ಕನ್ನಡಕ್ಕೆ ಮಂಜುನಾಥ್ ತಿಳಿಸಿದ್ದಾರೆ.
ಜನವರಿ 18ರಂದು ಪ್ರತಿಭಟನೆ
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಟಣ್ಣ ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ, ಭ್ರಷ್ಟಾಚಾರ ನಿಯಂತ್ರಣ, ಜಿಎಸ್ಟಿ ಗೊಂದಲ ಸರಿಪಡಿಸಬೇಕು, ಬಾಕಿ ಉಳಿದಿರುವ 25 ಸಾವಿರ ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು, ಲೋಕೋಪಯೋಗಿ ಇಲಾಖೆಯಲ್ಲಿ ಬಾಕಿ ಉಳಿದಿರುವ 4 ಸಾವಿರ ಕೋಟಿ ಬಿಲ್ ಬಿಡುಗಡೆ ಮಾಡಬೇಕು.
ನಮ್ಮ ಹಣ ಬಾರದಿರುವ ಹಿನ್ನೆಲೆಯಲ್ಲಿ ಬೇಸತ್ತು ಜನವರಿ 18ರಂದು ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಲು ತೀರ್ಮಾನ ಮಾಡಿದ್ದೇವೆ ಹಾಗೂ ಫ್ರೀಡಂ ಪಾರ್ಕ್ನಲ್ಲಿ ರಾಜ್ಯದ 5 ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರು ಭಾಗಿಯಾಗಿ ಪ್ರತಿಭಟನೆ ನಡೆಸಲಿದ್ದೇವೆ. ನಮ್ಮ ಈ ಹೋರಾಟಕ್ಕೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತದೆ. ಸರಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದು ಎಚ್ಚರಿಸಿದರು.
ಕೋರ್ಟ್ಗೆ ದಾಖಲೆ ಸಲ್ಲಿಕೆ
ನಾವು ಮಾಡಿರುವ ಆರೋಪಗಳು ಸತ್ಯ ಎಂದು ಸಾಬೀತು ಮಾಡುತ್ತೇವೆ. ಲಂಚ ಕೊಟ್ಟಿರೋದಕ್ಕೆ ದಾಖಲೆಗಳು ಇರಲ್ಲ, ಆದರೂ ಕೆಲವು ದಾಖಲೆ ಇದೆ. 14-15 ಶಾಸಕರ ದಾಖಲೆಗಳು ನಮ್ಮ ಬಳಿಯಿವೆ. ಜನವರಿ 19 ರಂದು ಕೋರ್ಟ್ನಲ್ಲಿ ದಾಖಲೆಗಳನ್ನ ಸಲ್ಲಿಕೆ ಮಾಡುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಕೆಂಪಣ್ಣ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ