ಬೆಂಗಳೂರು: ಇನ್ನೇನು ರಾಜ್ಯ ಬಿಜೆಪಿ ಸರ್ಕಾರದ (BJP Govt) ಅವಧಿ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇರುವ ಹೊತ್ತಿನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ (Congress) ಭ್ರಷ್ಟಾಚಾರ ನಡೆಸಿರುವ (Corruption) ಬಗ್ಗೆ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಬುಧವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಸದಾಶಿವ ನಗರದ ನಿವಾಸದಲ್ಲಿ ತುರ್ತು ಸುದ್ದಿ ಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, (Siddaramaiah) ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರ ಟೆಂಡರ್ ಗೋಲ್ಮಾಲ್ (Tender Golmal) ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
500 ಕೋಟಿ ರೂಪಾಯಿ ಟೆಂಡರ್ ಅನ್ನು 1000 ಕೋಟಿ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್ನಲ್ಲಿ ತೊಡಗಿದೆ ಎಂದು ಕಿಡಿಕಾರಿರುವುದಲ್ಲದೇ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಟೆಂಡರ್ ಗೋಲ್ಮಾಲ್ ಹೇಗೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Siddaramaiah: ಸಿಎಂ ಆಗಿ ಅಂಕಲ್ ಎಂದು ಸಿದ್ದರಾಮಯ್ಯಗೆ ತಾನು ಕೂಡಿಟ್ಟ ₹5000 ದೇಣಿಗೆ ಕೊಟ್ಟ ಪುಟ್ಟ ಬಾಲಕಿ!
'ಎಲ್ಲಾ ಇಲಾಖೆಗಳಲ್ಲೂ ಗೋಲ್ಮಾಲ್'
ಈ ಸಂಬಂಧ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತೆ. ಬಜೆಟ್ ಸೆಷನ್ ಮುಗಿದ ಮೇಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಜಲಸಂಪನ್ಮೂಲ ಇಲಾಖೆ, ಇಂಧನ ಇಲಾಖೆ, ಆರೋಗ್ಯ ಇಲಾಖೆ ಸೇರಿ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಎಲ್ಲಾ ಟೆಂಡರ್ಗಳನ್ನು ಎರಡು ಪಟ್ಟು ಹೆಚ್ಚು ಮೊತ್ತಕ್ಕೆ ಎಸ್ಟಿಮೇಟ್ ಮಾಡುತ್ತಿದ್ದಾರೆ. ಅಲ್ಲದೇ ಏಳು ದಿನ ಮಾತ್ರ ಟೈಂ ಕೊಟ್ಟು, ಗುತ್ತಿಗೆದಾರರನ್ನು ಸೆಟ್ ಮಾಡಲು ಶಾಸಕರಿಗೆ ಹಂಚಿದ್ದಾರೆ. ಬೀದಿಯಲ್ಲಿ ನಿಂತು ಅವರು ಬನ್ನಿ ಇವರು ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
'ಭ್ರಷ್ಟಾಚಾರದ ರಾಜಧಾನಿ ಬೆಂಗಳೂರು'
ಬಿಡಿಎ ಕಾರಂತ ಬಡಾವಣೆ ಇನ್ನೂ ಹಂಚಿಕೆ ಆಗಿಲ್ಲ. ಆದರೂ ಅಲ್ಲಿ 3 ಸಾವಿರ ಕೋಟಿ ರೂ ಟೆಂಡರ್ ಕರೆದಿದ್ದಾರೆ ಎಂದು ಆರೋಪಿಸಿರುವ ಡಿಕೆ ಶಿವಕುಮಾರ್, ಸರ್ಕಾರದಲ್ಲಿ ಬರೀ ವಸೂಲಿ ಬಾಜಿ ನಡೆಯುತ್ತಿದೆ. ಬೆಂಗಳೂರಿಗೆ ಭ್ರಷ್ಟಾಚಾರದ ರಾಜಧಾನಿ ಅನ್ನೋ ಹೆಸರು ಬಂದಿದೆ. ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ. ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ಎಲ್ಲವನ್ನೂ ರದ್ದು ಮಾಡುತ್ತೇವೆ. ಅಧಿಕಾರಿಗಳು, ಗುತ್ತಿಗೆದಾರರು, ರಾಜಕಾರಣಿಗಳನ್ನು ಬಿಡುವುದಿಲ್ಲ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Nalin Kumar: ಸಿದ್ದರಾಮಯ್ಯ ನನಗೆ ಜೋಕರ್ ಅನ್ನೋದಾದ್ರೆ ನಾನು ಅವರನ್ನು ಬ್ರೋಕರ್ ಎನ್ನುತ್ತೇನೆ: ನಳಿನ್ ಕುಮಾರ್
ತರಾತುರಿಯಲ್ಲಿ ಟೆಂಡರ್ ಹಂಚಿಕೆ
ಇನ್ನು, ಸಚಿವ ಸ್ಥಾನದ ಸಿಗದೇ ಇರುವವರಿಗೆ 2-3 ಸಾವಿರ ಕೋಟಿ ಟೆಂಡರ್ ಹಂಚಿಕೆ ಮಾಡುತ್ತಾ ಇದ್ದಾರೆ ಎಂದು ಆರೋಪ ಮಾಡಿರುವ ಡಿಕೆಶಿ, ಇವರು ಯಾವ ಶಾಸಕರಿಗೆ ಟೆಂಡರ್ ಹಂಚಿದ್ದಾರೋ ನಮಗೆ ಅದೇ ಶಾಸಕರು ಮಾಹಿತಿ ಕೊಡುತ್ತಿದ್ದಾರೆ. ಸಾವಿರಾರು ಕೋಟಿ ರೂ ಮೊತ್ತದ ಹಳೆಯ ಕೆಲಸದ ಬಿಲ್ ಬಾಕಿ ಉಳಿದುಕೊಂಡಿದ್ದರೂ ಅದನ್ನು ಕ್ಲಿಯರ್ ಮಾಡದೆ ಹೊಸ ಟೆಂಡರ್ಗಳನ್ನು ಕರೆಯಲಾಗುತ್ತಿದೆ. ಯಾರು ಮುಂಚಿತವಾಗಿ ಹಣ ತಲುಪಿಸುತ್ತಾರೋ ಅವರಿಗೆ ಕೆಲಸದ ಹಂಚಿಕೆ ಮಾಡುತ್ತಿದ್ದಾರೆ. ಇಲ್ಲಿ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
'ಕೋರ್ಟ್ ಮೊರೆ ಹೋಗುತ್ತೇವೆ'
ಡಿಕೆ ಶಿವಕುಮಾರ್ ಮಾತನಾಡಿದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್ ನಡೆಸುತ್ತಿದೆ ಎಂದು ಆರೋಪ ಮಾಡಿದ್ದು, ಈ ಹಗರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಾರಣ. ನಾವು ಈ ಹಗರಣವನ್ನು ಇಲ್ಲಿಗೇ ಬಿಡೋದಿಲ್ಲ. ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ