ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವ ನಾರಾಯಣ್ (Darshan Dhruva Narayan) ಅವರಿಗೆ ಮತ್ತೊಂದು ಬರಸಿಡಿಲು ಬಂದಪ್ಪಳಿಸಿದೆ. ಕೆಲ ದಿನಗಳ ಹಿಂದಷ್ಟೇ ತಮ್ಮ ತಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಧ್ರುವನಾರಾಯಣ್ ಅವರನ್ನು ಕಳೆದುಕೊಂಡು ನೋವಲ್ಲಿದ್ದ ದರ್ಶನ್ ಅವರು ಇದೀಗ ತಮ್ಮ ತಾಯಿಯನ್ನೂ (Veena Dhruva Narayan) ಕಳೆದುಕೊಂಡಿದ್ದಾರೆ.
ಹೌದು.. ದರ್ಶನ್ ಧ್ರುವ ನಾರಾಯಣ್ ಅವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಮಾಜಿ ಸಂಸದ, ದಿವಂಗತ ಧ್ರುವ ನಾರಾಯಣ್ ಅವರ ಪತ್ನಿ ವೀಣಾ ಧ್ರುವ ನಾರಾಯಣ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ತಮ್ಮ ಗಂಡನನ್ನು ಕಳೆದುಕೊಂಡು ಅಕ್ಷರಶಃ ಕುಗ್ಗಿ ಹೋಗಿದ್ದರು. ಅದೇ ನೋವಲ್ಲಿದ್ದ ಅವರು ಕೆಲವೇ ದಿನಗಳ ಅಂತರದಲ್ಲಿ ತಾವೂ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ: R Dhruvanarayan: ಕಾಂಗ್ರೆಸ್ನ ಮುಂಚೂಣಿ ನಾಯಕ ಆರ್ ಧ್ರುವ ನಾರಾಯಣ್ ಅವರ ಬಗ್ಗೆ ನಿಮಗೆಷ್ಟು ಗೊತ್ತು?
ತಂದೆಯ ಅಕಾಲಿಕ ಸಾವಿನಿಂದ ಕಂಗಾಲಾಗಿದ್ದ ಧ್ರುವ ನಾರಾಯಣ್ ಅವರ ಪುತ್ರರಾದ ದರ್ಶನ್ ಮತ್ತು ಧೀರನ್ ಅವರಿಗೆ ಇದೀಗ ತಾಯಿಯ ನಿಧನ ಕೂಡ ಬರಸಿಡಿಲಿನಂತೆ ಬಡಿದಿದೆ. ತಂದೆಯ ಸಾವಿನ ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ದರ್ಶನ್ ಅವರು ಇದೀಗ ದಿಕ್ಕೇ ತೋಚದಂತಾಗಿದ್ದಾರೆ. ತಾಯಿಯ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಇಂದಿನ ತನ್ನೆಲ್ಲಾ ರಾಜಕೀಯದ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ದರ್ಶನ್, ಮನೆಗೆ ಆಗಮಿಸಿದ್ದಾರೆ.
ಅಕಾಲಿಕ ನಿಧನ ಹೊಂದಿದ್ದ ಆರ್ ಧ್ರುವನಾರಾಯಣ್!
ಸಜ್ಜನ ಮತ್ತು ದೂರದರ್ಶಿತ್ವದ ನಾಯಕರಾಗಿ ಅಜಾತಶತ್ರು ಎನಿಸಿಕೊಂಡಿದ್ದ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಆರ್ ಧ್ರುವನಾರಾಯಣ್ ಅವರು ಕಳೆದ ಮಾರ್ಚ್ 11 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆರ್ ಧ್ರುವನಾರಾಯಣ್ ಅವರ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ಆರ್ ಧ್ರುವನಾರಾಯಣ್ ಅವರು ಜನಪ್ರತಿನಿಧಿಯಾಗಿ ಸಲ್ಲಿಸಿದ ಸೇವೆಗೆ ಗೌರವ ಸೂಚಿಸುವ ಸಲುವಾಗಿ ಅವರ ಅಂತಿಮ ವಿಧಿವಿಧಾನದ ಸಂದರ್ಭ ಸರ್ಕಾರಿ ಗೌರವಗಳೊಂದಿಗೆ ನಮನ ಸಲ್ಲಿಸಲಾಗಿತ್ತು.
ತಂದೆಯನ್ನು ಕಳೆದುಕೊಂಡು ಅನಾಥವಾಗಿದ್ದ ದರ್ಶನ್ ಮತ್ತು ಧೀರನ್ ಇದೀಗ ತಾಯಿಯನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ