ಅಧಿವೇಶನದಲ್ಲಿ ಸಿಡಿ ಪ್ರಕರಣ ಕುರಿತು ಪ್ರತಿಪಕ್ಷಗಳು ಬಾವಿಗಿಳಿದು ಪ್ರತಿಭಟನೆ ನಡೆಸುವ ವೇಳೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ ವಿಧಾನಸಭಾ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಕೊರೊನಾ ಎರಡನೇ ಅಲೆಯ ಭೀತಿ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಬಜೆಟ್ ಅಧಿವೇಶನವನ್ನು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದರು ಕೊರೋನಾ ಸೋಂಕು ಹರಡದ ರೀತಿ ಕ್ರಮ ವಹಿಸಬೇಕು. ಎಲ್ಲರೂ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ಕಾಲ ಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆ ಪಾಲಿಸಬೇಕು. ಜನರ ಆರೋಗ್ಯ ರಕ್ಷಿಸಲು ಎಲ್ಲರು ಪ್ರಯತ್ನ ಮಾಡಬೇಕು ಎಂದು ಹೇಳಿ ರಾಷ್ಟ್ರಗೀತೆ ಮೂಲಕ ಅನಿರ್ದಿಷ್ಟಾವದಿಗಳ ಕಾಲ ಸದನ ಮುಂದೂಡಲಾಯಿತು. ಮಾರ್ಚ್ 31ರ ವರೆಗೆ ನಡೆಯಬೇಕಿದ್ದ ಅಧಿವೇಶನ ಇಂದೇ ಮುಕ್ತಾಯಗೊಳಿಸಲಾಗಿದೆ. 13 ದಿನಗಳ ಕಾಲ ಬಜೆಟ್ ಅಧಿವೇಶನ ನಡೆದಿದ್ದು, 9 ವಿಧೇಯಕಗಳ ಮಂಡನೆ ಮಾಡಲಾಗಿದೆ. ಲಿಖಿತ ರೂಪದ 1872 ಉತ್ತರಗಳ ಮಂಡನೆ ಯಾಗಿದ್ದು, ಒಟ್ಟು 44 ಗಂಟೆ 30 ನಿಮಿಷ ಕಾಲ ಸದನ ನಡೆದಿದೆ ಎಂದು ಅವರು ತಿಳಿಸಿದರು.
ಮಾ.4ರಿಂದ ಆರಂಭವಾಗಿದ್ದ ಅಧಿವೇಶನ ಇದೇ ಮಾ.31ರವರೆಗೆ ನಡೆಯಬೇಕಿತ್ತು. ಬಜೆಟ್ ಮೇಲಿನ ಚರ್ಚೆಗಿಂತ ಕಲಾಪದಲ್ಲಿ ರಮೇಶ್ ಜಾರಕಿಹೊಳಿ ಸಿಡಿ, ಆರು ಸಚಿವರ ಹೈ ಕೋರ್ಟ್ ತಡೆ ವಿಚಾರಗಳು ಹೆಚ್ಚು ಸದ್ದು ಮಾಡಿದವು. ಬಜೆಟ್ ಅನುಮೋದನೆ ಬದಲಾಗಿ ಸಿಡಿ ವಿಚಾರಕ್ಕೆ ಕಲಾಪ ಬಲಿಯಾಗಿದೆ.
ಇಂದು ಬೆಳಗ್ಗೆ ನಡೆದ ಗದ್ದಲದ ನಡುವೆಯೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಸಾಲ ಪಡೆದ ಕ್ರಮವನ್ನು ಸಮರ್ಥಿಸಿ ಕೊಂಡರು. ಅಲ್ಲದೇ, ಪ್ರಸಕ್ತ ಸಾಲಿನ ಧನ ವಿನಿಯೋಗ ಮಸೂದೆಗೆ ಧ್ವನಿಮತದ ಮೂಲಕ ಅಂಗೀಕರಾರ ಪಡೆದರು.
ಇದನ್ನು ಓದಿ: ಸಿದ್ದರಾಮಯ್ಯ ವಿಶೇಷ ಭೋಜಕೂಟದಲ್ಲಿ ಗಮನಸೆಳೆದ ತನ್ವೀರ್ ಸೇಠ್
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಟ್ಟು ಹಿಡಿದರು. ಅಲ್ಲದೇ, ನ್ಯಾಯಾಲಯದ ಮೊರೆ ಹೋಗಿ ತಡೆ ತಂದ ಆರು ಸಚಿವರ ವಿರುದ್ಧವೂ ವಿಪಕ್ಷಗಳು ಟೀಕಾ ಪ್ರಹಾರ ನಡೆಸಿ, ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಕಲಾಪ ಸುಗಮವಾಗಿ ನಡೆಸಬೇಕು ಎಂದು ಸ್ಪೀಕರ್ ನಡೆಸಿದ ಮಾತುಕತೆ ಕೂಡ ವಿಫಲವಾಯಿತು.
ಇಂದು ಕೂಡ ಕಲಾಪದಲ್ಲಿ ಈ ಸಿಡಿ ಪ್ರಕರಣ ಕುರಿತು ಪ್ರತಿಭಟನೆಯನ್ನು ಕಾಂಗ್ರೆಸ್ ಮುಂದುವರೆಸಿತು. ಇದರ ನಡುವೆ ಸಚಿವ ಸುಧಾಕರ್ ನೀಡಿದ ಏಕಪತ್ನಿವ್ರತಸ್ಥ ಹೇಳಿಕೆ ಈ ಗದ್ದಲಕ್ಕೆ ಇನ್ನಕ್ಕೆ ಪುಷ್ಠಿ ನೀಡಿ, ಜೆಡಿಎಸ್, ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. ಇತ್ತ ಮೇಲ್ಮನೆಯಲ್ಲಿಯೂ ಸಿಡಿ ಪ್ರಕರಣ ಚರ್ಚೆಗೆ ಬಂದು ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ