ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ (Karnataka Budget 2023) ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಈ ಆಡಳಿತಾವಧಿಯ ಕೊನೆಯ ಬಜೆಟ್ ಮಂಡನೆ (Karnataka Budget Live Updates) ಮಾಡಿದ್ದಾರೆ. ಚುನಾವಣಾ ವರ್ಷ ಆಗಿರುವುದರಿಂದ ಬಜೆಟ್ನಲ್ಲಿ ಎಲ್ಲಾ ವರ್ಗದ ಜನರನ್ನು ತಲುಪಲು ಪ್ರಯತ್ನ ಪಟ್ಟಿರುವ ಸಿಎಂ ಬೊಮ್ಮಾಯಿ, ಭರಪೂರ ಘೋಷಣೆಗಳನ್ನು ಮಾಡಿದ್ದಾರೆ. ಇದರ ಜೊತೆಜೊತೆಗೆ ಕೃಷಿ ಕ್ಷೇತ್ರಕ್ಕೂ ಘೋಷಣೆಗಳ ಮಹಾಪೂರವನ್ನೇ ಮುಖ್ಯಮಂತ್ರಿ ಹರಿಸಿದ್ದಾರೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕೃಷಿಕರು ಅಡಿಕೆ ಬೆಳೆಯನ್ನು ಅವಲಂಬಿಸಿದ್ದು, ವಾಣಿಜ್ಯ ಬೆಳೆಯಾಗಿರುವ ಅಡಿಕೆ ಇತ್ತಿಚಿನ ವರ್ಷಗಳಲ್ಲಿ ಅನೇಕ ರೋಗಗಳಿಗೆ ತುತ್ತಾಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರ ಬವಣೆ ತಪ್ಪಿಸಲು ಸಿಎಂ ಬೊಮ್ಮಾಯಿ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಅಡಿಕೆ ಬೆಳೆಗಾರರ ಕಣ್ಣೀರೊರೆಸಲು ಪ್ರಯತ್ನ ಮಾಡಿರುವ ಅವರು, ಅಡಿಕೆ ಕೃಷಿಗೆ ಬಾಧಿಸಿರುವ ರೋಗಗಳಿಗೆ ಪರಿಹಾರ ಹುಡುಕಲು ಅನುದಾನ ಘೋಷಿಸಿದ್ದಾರೆ.
ಇದನ್ನೂ ಓದಿ: Karnataka Budget 2023 Live Updates: ರೈತರಿಗೆ ಬಂಪರ್ ಆಫರ್- ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ
ಅಡಿಕೆ ರೋಗ ನಿರ್ವಹಣೆಗೆ 10 ಕೋಟಿ ರೂಪಾಯಿ ನಿಗದಿ
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಎಲೆ ಚುಕ್ಕಿ ರೋಗ ಸೇರಿದಂತೆ ಇನ್ನಿತರ ಹೊಸ ಹೊಸ ರೋಗಗಳನ್ನು ಅಡಿಕೆ ಕೃಷಿ ಎದುರಿಸುತ್ತಿದ್ದು, ಹೀಗಾಗಿ ಅಡಿಕೆ ಬೆಳೆಯನ್ನು ಬಾಧಿಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಉತ್ಪಾದಕತೆ ಹೆಚ್ಚಿಸುವ ಅಗತ್ಯತೆಯನ್ನು ಮನಗಂಡು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂಪಾಯಿ ನೆರವನ್ನು ಘೋಷಿಸಿದ್ದಾರೆ.
ಅಡಿಕೆ ಕೃಷಿ ಬಾಧಿಸುವ ರೋಗಕ್ಕೆ ಸಿಗುತ್ತಾ ಮುಕ್ತಿ?
ಅಡಿಕೆ ಕೃಷಿಯನ್ನು ಬಾಧಿಸುವ ರೋಗಗಳ ಬಗ್ಗೆ ಅಧ್ಯಯನ ಮಾಡುವುದರ ಜೊತೆಗೆ ಅಡಿಕೆಗೆ ಬಾಧಿಸುವ ರೋಗಗಳನ್ನು ನಿರ್ವಹಣೆ ಮಾಡಲೆಂದೇ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅಂದುಕೊಂಡಂತೆ ಅಡಿಕೆ ಬೆಳೆ ರೋಗಗಳ ನಿರ್ವಹಣೆಗೆ ತಂತ್ರಜ್ಞಾನ ಕಂಡು ಹುಡುಕಿದಲ್ಲಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ತಾತ್ಕಾಲಿಕವಾದರೂ ಸಿಗಬಹುದು. ಈ ಬಗ್ಗೆ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಅಧ್ಯಯನ ಮಾಡಬೇಕಿದೆ.
ತೋಟಗಾರಿಕಾ ಉತ್ಪಾದಕತೆ ಹೆಚ್ಚಿಸಲು 10 ಕೋಟಿ ರೂಪಾಯಿ
ಇನ್ನು ತೋಟಗಾರಿಕಾ ಇಲಾಖೆಯಡಿ ಬರುವ 12 ತೋಟಗಳಲ್ಲಿ ‘ಒಂದು ತೋಟ ಒಂದು ಬೆಳೆ’ ಯೋಜನೆಯಡಿ ಆಯಾ ಭಾಗದ ಕೃಷಿ ಹವಾಮಾನ, ಮಣ್ಣಿನ ಗುಣಕ್ಕೆ ಅನುಗುಣವಾಗಿ ತೋಟಗಾರಿಕಾ ಉತ್ಪಾದಕತೆಯನ್ನು ಹೆಚ್ಚಿಸಲು 10 ಕೋಟಿ ರೂಪಾಯಿಗಳ ಒಂದು ಬಾರಿಯ ವಿಶೇಷ ಅನುದಾನವನ್ನು ಕೂಡ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಜೊತೆಗೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ತೋಟಗಾರಿಕಾ ಮಹಾ ವಿದ್ಯಾಲಯವನ್ನು ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ