news18-kannada Updated:August 6, 2020, 2:57 PM IST
ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು(ಆ.06): ಮಾರ್ಚ್ ಅಧಿವೇಶನದ ಬಳಿಕ ಸೆಪ್ಟೆಂಬರ್ನಲ್ಲಿ ಮತ್ತೆ ಅಧಿವೇಶನ ನಡೆಸಬೇಕಿದೆ. ಅದಕ್ಕಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಕಲಾಪ ನಡೆಯುವ ಹಾಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಧಿವೇಶನವೇನೋ ನಡೆಸಬಹುದು. ಆದರೆ, ಕೊರೋನಾ ಸಂದರ್ಭದಲ್ಲಿ ನಡೆಸುವುದು ಹೇಗೆ ? ಜೊತೆಗೆ ಎಲ್ಲಿ ನಡೆಸಬೇಕು ಎನ್ನುವುದೇ ಈಗ ಪ್ರಶ್ನೆ. ಅದಕ್ಕಾಗಿಯೇ ಸ್ಪೀಕರ್ ಅಧಿವೇಶನ ಎಲ್ಲಿ ಮತ್ತು ಹೇಗೆ ನಡೆಸಬೇಕು ಅನ್ನೋದರ ಬಗ್ಗೆ ಅಧಿಕಾರಿಗಳ ತಂಡ ರಚನೆ ಮಾಡಿದ್ದಾರೆ.
ಅಧಿಕಾರಿಗಳ ಮಾಹಿತಿ ಆಧರಿಸಿ ಕಾನೂನು ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ. ಸೆಪ್ಟೆಂಬರ್ 23ರ ಒಳಗೆ ಅಧಿವೇಶನ ನಡೆಸಬೇಕಾಗುತ್ತದೆ. ಆದ್ದರಿಂದ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ.
ಹಾವೇರಿಯಲ್ಲಿ ಯೂರಿಯಾ ರಸಗೊಬ್ಬರ ಸಮಸ್ಯೆ ಬಗೆಹರಿಸಲು ಜೆಡಿಎಸ್ ಆಗ್ರಹ
ಮೂಲಗಳ ಪ್ರಕಾರ ಕೊರೋನಾ ನಿಯಮಗಳನ್ನ ಪಾಲಿಸುತ್ತಾ ಅಧಿವೇಶನ ನಡೆಸುವುದು ಸ್ವಲ್ಪ ಕಷ್ಟವಾಗಬಹುದು. ಆದರೂ ನಿಯಮಗಳ ಪಾಲನೆಗೆ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಸೆಪ್ಟೆಂಬರ್ನಲ್ಲಿ ಮುಂಗಾರು ಅಧಿವೇಶನ ನಡೆಸಲು ತಾಲೀಮು ನಡೆದಿದೆ.
ಸೆಪ್ಟೆಂಬರ್ನಲ್ಲಿ 10 ದಿನಗಳ ಅಧಿವೇಶನ ನಡೆಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ಸುಕರಾಗಿದ್ದಾರೆ. ಜೊತೆಗೆ ಸಚಿವರು ಮತ್ತು ಶಾಸಕರಿಗಾಗಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ.
ಶಾಸಕರು ಕೂರುವ ಕುರ್ಚಿಗಳ ನಡುವೆ ಗ್ಲಾಸ್ ನ ಶೀಲ್ಡ್ ಅಳವಡಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಶಾಸಕರು ಕುಳಿತುಕೊಳ್ಳುವ ಆಸನಗಳ ಮಧ್ಯೆ ಅಂತರ ಕಾಯ್ದು ಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಆದ್ದರಿಂದ ಈ ಬಗ್ಗೆ ಅಸ್ಸೆಂಬ್ಲಿ ಹಾಲ್ ಗೆ ಭೇಡಿ ನೀಡಿ ಸ್ಪೀಕರ್ ಟ್ರಯಲ್ ವೀಕ್ಷಣೆ ಮಾಡಿದ್ದಾರೆ.
ಇದರ ಜೊತೆಗೆ ಪ್ರತಿಯೊಬ್ಬ ಶಾಸಕರಿಗೂ ಮುಖ ಕವಚ ಹಾಗೂ ಮಾಸ್ಕ್ ನೀಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲವೂ ಕೂಡಿ ಬಂದರೆ ಸೆಪ್ಟೆಂಬರ್ ನಲ್ಲಿ ಅಧಿವೇಶನ ನಡೆಯಲಿದೆ.
Published by:
Latha CG
First published:
August 6, 2020, 2:57 PM IST