ನಿಪ್ಪಾಣಿ ವಿಧಾನಸಭಾ ಕ್ಷೇತ್ರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Karnataka Assembly Elections) ಕೌಂಟ್ಡೌನ್ ಶುರುವಾಗಿದೆ. ಬೇರೆ ಎಲ್ಲೂ ಸಹ ಈ ಸಮಯದಲ್ಲಿ ಚುನಾವಣೆಗಳು ಇರದ ಕಾರಣ ದೇಶದಲ್ಲೇ ಕರ್ನಾಟಕ (Karnataka) ಕೇಂದ್ರಬಿಂದುವಾಗಿದ್ದು, ಎಲ್ಲಾ ರಾಜ್ಯದ ರಾಜಕೀಯ ಪಕ್ಷಗಳ ಚಿತ್ತ ರಾಜ್ಯದ ಮೇಲಿದೆ.
ರಾಜ್ಯದಲ್ಲಿ ಚುನಾವಣೆ ಹಬ್ಬ
ಇತ್ತ ಪಕ್ಷಗಳು ಕೂಡ ಅಂತಿಮ ಘಟ್ಟದಲ್ಲಿ ಗೆಲುವಿನ ಮಂತ್ರ ಜಪಿಸುತ್ತಿವೆ. ರೋಡ್ ಶೋ, ರ್ಯಾಲಿ, ಪ್ರಣಾಳಿಕೆ, ಮನೆಮನೆ ಪ್ರಚಾರ, ಮತದಾರರ ಓಲೈಕೆ, ಪರಸ್ಪರ ಕೆಸರೆರಚಾಟ, ಆರೋಪ-ಪ್ರತ್ಯಾರೋಪ, ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು ಪಕ್ಷದ ಪ್ರತಿಯೊಬ್ಬರೂ ಗೆಲುವಿಗೆ ಗುರಿ ಇಟ್ಟಿದ್ದಾರೆ.
ರಾಜ್ಯದಲ್ಲಿ ಪ್ರತಿ ವಿಧಾನಸಭಾಕ್ಷೇತ್ರ ಕೂಡ ಚುನಾವಣೆಯಿಂದಾಗಿ ರಂಗೇರುತ್ತಿದೆ. ಒಂದಲ್ಲ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಇಂದಿನ ಲೇಖನದಲ್ಲಿ ನಾವು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಒಂದು ಕಿರುನೋಟವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.
ನಿಪ್ಪಾಣಿ ಕ್ಷೇತ್ರ
ಚುನಾವಣಾ ಸಮರಕ್ಕೆ ಸಜ್ಜಾಗಿರುವ ನಿಪ್ಪಾಣಿ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿವಿವಾದ ನಡೆಯುತ್ತಿರುವ ಪ್ರದೇಶಗಳಲ್ಲಿ ನಿಪ್ಪಾಣಿಯೂ ಒಂದಾಗಿದೆ.
ವರ್ಷಗಳ ಹಿಂದೆ ಹೊಸ ತಾಲೂಕುಗಳು ರಚನೆಯಾದಾಗ ಹೊಸ ತಾಲ್ಲೂಕುಗಳಲ್ಲಿ ಹೆಚ್ಚು ಎದ್ದು ಕಂಡಿದ್ದು ನಿಪ್ಪಾಣಿಯ ಹೆಸರು. ಬೆಳಗಾವಿ ಜಿಲ್ಲೆಯ ಉತ್ತರದಲ್ಲಿ ಇರುವ ಈ ಊರಿನ ಪಶ್ಚಿಮಕ್ಕೆ ಕೇವಲ ಮೂರು ನಾಲ್ಕು ಕಿಲೋ ಮೀಟರ್ ದೂರದಲ್ಲಿ ಮಹಾರಾಷ್ಟ್ರ ಇದೆ.
ಕರ್ನಾಟಕ-ಮಹಾರಾಷ್ಟ್ರ-ಕೇರಳ ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿಸಲು ರಚನೆಯಾಗಿದ್ದ ನ್ಯಾಯಮೂರ್ತಿ ಮಹಾಜನ್ ಆಯೋಗದ ವರದಿ ಪ್ರಕಾರ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು.
ತಂಬಾಕು ಮತ್ತು ಕಬ್ಬು ಬೆಳೆಯುವ ಊರು
ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಊರು. ತಂಬಾಕು ಮತ್ತು ಕಬ್ಬು ಅಲ್ಲಿನ ಪ್ರಧಾನ ಬೆಳೆ. ನಿಪ್ಪಾಣಿ ಪಟ್ಟಣದಲ್ಲಿ ಮರಾಠಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಕನ್ನಡವು ಅಧಿಕೃತ ಭಾಷೆಯಾಗಿದೆ.
ರಾಜಕೀಯ ಹಿನ್ನೋಟ
1957ರ ಚುನಾವಣೆಯಲ್ಲಿ ಬಲವಂತ ದತ್ತೋಬ ನಾಯಕ್ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರೆ, 1962ರಲ್ಲಿ ಗೋವಿಂದ ಕೃಷ್ಣ ಮಾನವಿ (ಎಂಇಎಸ್) 27,280 ಮತಗಳಿಂದ ಜಯಬೇರಿ ಭಾರಿಸಿದ್ದರು.
ಇನ್ನೂ 1983ರಲ್ಲಿ ಬಾಳಾಸಾಹೇಬ್ ದತ್ತಾಜಿ ಶಿಂಧೆ, ಜೋಶಿ, ಸುಭಾಷ್ ಶ್ರೀಧರ್ ವಿರುದ್ಧ ಗೆಲುವಿನ ನಗೆ ಬೀರಿದ್ದರು. ನಂತರ 2013ರಲ್ಲಿ ಶಶಿಕಲಾ ಜೊಲ್ಲೆ ಬಿಜೆಪಿಯಿಂದ ಸ್ಪರ್ಧಿಸಿ ಕಾಕಾಸೊ ಪಾಂಡುರಂಗ ಪಾಟೀಲ್ ವಿರುದ್ಧ 81,860 ಮತಗಳನ್ನು ಪಡೆದು ಮೊದಲ ಗೆಲುವು ಸಾಧಿಸಿದರು.
ಮತ್ತೆ ಕಳೆದ ಬಾರಿಯ ಅಂದರೆ 2018ರ ಚುನಾವಣೆಯಲ್ಲು ಯಾವುದೇ ಬದಲಾವಣೆ ಇಲ್ಲದೇ ಬಿಜೆಪಿಯ ಶಶಿಕಲಾ ಜೊಲ್ಲೆ ಎರಡನೇ ಬಾರಿಗೆ ನಿಪ್ಪಾಣಿಯಿದ ಆಯ್ಕೆಯಾದರು. ಮತ್ತೆ ಇಲ್ಲಿ ಕಾಂಗ್ರೆಸ್ನ ಕಾಕಾಸೊ ಪಾಂಡುರಂಗ ಪಾಟೀಲ್ ಸೋಲನ್ನು ಅನುಭವಿಸಿದರು.
2023ರ ರಣಕಣದಲ್ಲಿರುವ ಅಭ್ಯರ್ಥಿಗಳು ಯಾರು?
ಎಎಪಿ: ರಾಜೇಶ್ ಅಣ್ಣಾಸಾಹೇಬ್ ಬನವಣ್ಣ
ಬಿಜೆಪಿ: ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ
ಕಾಂಗ್ರೆಸ್: ಕಾಕಾಸಾಹೇಬ ಪಾಂಡುರಂಗ ಪಾಟೀಲ್
ಇದನ್ನೂ ಓದಿ: Bajrang Dal: 'ಕೈ'ಗೆ ಹೊತ್ತುಕೊಂಡ 'ಬಜರಂಗಿ' ಬೆಂಕಿ! ಕಾಂಗ್ರೆಸ್ ಸಮೀಕ್ಷೆಯಲ್ಲಿ ಆತಂಕದ ವರದಿ!
2018ರಲ್ಲಿ ಫಲಿತಾಂಶ ಏನಾಗಿತ್ತು?
2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಶಶಿಕಲಾ ಜೊಲ್ಲೆ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಕಾಕಾಸಾಹೇಬ ಪಾಟೀಲ್ ಭಾರೀ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ನಿಪ್ಪಾಣಿಯಲ್ಲಿರುವ ಮತದಾರರೆಷ್ಟು?
ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ 2,25,688 ಮತದಾರರಿದ್ದು, 1,13,856 ಪುರುಷರು, 1,11,823 ಮಹಿಳಾ ಮತದಾರರು ಇದ್ದಾರೆ.
ಸತತ ಸೋಲುಗಳನ್ನು ಕಂಡ ಕಾಂಗ್ರೆಸ್ ಈ ಬಾರಿ ಜಯಭೇರಿ ಬಾರಿಸಲೇಬೇಕು ಅಂತಿದ್ದರೆ, ಅತ್ತ ಬಿಜೆಪಿ ಮೂರನೇ ಬಾರಿಗೆ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸದಲ್ಲಿದೆ. ಒಟ್ಟಾರೆ ಕಾಂಗ್ರೆಸ್-ಬಿಜೆಪಿ ನಡುವೆ ಪೈಪೋಟಿ ಕ್ಷೇತ್ರವಾಗಿದೆ ನಿಪ್ಪಾಣಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ