ಕಲಬುರಗಿ: ಚುನಾವಣಾ (Assembly Election) ಕಣ ದಿನದಿಂದ ದಿನಕ್ಕೆ ಹುರುಪು ಪಡೆದುಕೊಳ್ಳುತ್ತಿದ್ದ ಪ್ರತಿಯೊಂದು ಪಕ್ಷಗಳ ಅಭ್ಯರ್ಥಿಗಳು (Election Candidates) ಕಾದಾಡಲು ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಜನಬೆಂಬಲ ಬೇಕೇ ಬೇಕು. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ತಾ ಮುಂದು ನಾ ಮುಂದು ಎಂದು ಪ್ರಚಾರ ಕಾರ್ಯಗಳಲ್ಲಿ (Election Campaign) ನಿರತರಾಗಿದ್ದಾರೆ ಹಾಗೂ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ರಾಜಕೀಯ ವ್ಯಕ್ತಿಗಳ (Political Leaders) ಭವಿಷ್ಯವನ್ನೇ ಬದಲಾಯಿಸಲಿರುವ ಅಖಾಡವಾಗಿದೆ. ಜನರ ಬೆಂಬಲ ಯಾರಿಗಿದೆ ಎಂಬುದನ್ನು ಗೆದ್ದ ಅಭ್ಯರ್ಥಿಗಳ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.
ಇಂದಿನ ಲೇಖನದಲ್ಲಿ ಕಾಂಗ್ರೆಸ್ ಪಕ್ಷದ ಕಲಬುರಗಿಯ ಜೇವರ್ಗಿ ಕ್ಷೇತ್ರದ ಅಜಯ್ ಧರಂ ಸಿಂಗ್ ಅವರ ಪರಿಚಯ ಮಾಡಿಕೊಳ್ಳೋಣ.
ಶಾಸಕರ ಬಾಲ್ಯ ಹಾಗೂ ಶಿಕ್ಷಣ
ಡಾ. ಅಜಯ್ ಧರಂ ಸಿಂಗ್ ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ಜೇವರ್ಗಿ ಕ್ಷೇತ್ರದ ಪ್ರಸ್ತುತ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ ಮತ್ತು 12 ಮಾರ್ಚ್ 2020 ರಿಂದ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ (ಕರ್ನಾಟಕ) ಧರಂ ಸಿಂಗ್ ಅವರ ಪುತ್ರನೂ ಹೌದು.
ಎಂಬಿಬಿಎಸ್ ಪದವೀಧರರಾಗಿರುವ ಅಜಯ್ ಸಿಂಗ್, ಆಕ್ಸಿಡೆಂಟ್ ರಿಲೀಫ್ ಕೇರ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು ಅದು ಅಪಘಾತಕ್ಕೊಳಗಾದವರಿಗೆ ಅಗತ್ಯ ವಿಮೆಯನ್ನು ಒದಗಿಸುವ ಸೇವಾ-ಆಧಾರಿತ ಸಂಸ್ಥೆಯಾಗಿದೆ. ಭಾರತದಾದ್ಯಂತ ಸುಮಾರು 50000 ಅಪಘಾತ ಸಂತ್ರಸ್ತರಿಗೆ ಅವರ ಸಂಸ್ಥೆಯು ಸಹಾಯ ಮಾಡಿದೆ.
ಅಜಯ್ ಧರಂ ಸಿಂಗ್ ಸೇವಾ ಮನೋಭಾವನೆ ಹೇಗಿದೆ?
ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಅಜಯ್ ಸಿಂಗ್, 2005 ರಲ್ಲಿ ಜೇವರ್ಗಿಯಲ್ಲಿ ಮೊದಲ ಆರೋಗ್ಯ ಶಿಬಿರ ಆರಂಭಿಸಿದರು. ತದನಂತರ ಪ್ರತೀ ವರ್ಷ ಜೇವರ್ಗಿಯಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದಾರೆ. 2007 ರಲ್ಲಿ NGO ಧರಂಸಿಂಗ್ ಫೌಂಡೇಶನ್ ಅನ್ನು ಸ್ಥಾಪಿಸಿದರು.
ರಾಜಕೀಯ ಪಯಣ
1999 ರಿಂದ 2009 ರವರೆಗೆ ಯುವ ಕಾಂಗ್ರೆಸ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2005 ರಲ್ಲಿ ಕೆಪಿಸಿಸಿ ಸದಸ್ಯರಾದರು. ಅವರು ಬೀದರ್ನಿಂದ 2009 ರ ಸಂಸತ್ ಚುನಾವಣೆಯಲ್ಲಿ ತಮ್ಮ ತಂದೆ ಶ್ರೀ ಧರಂ ಸಿಂಗ್ ಅವರ ಚುನಾವಣಾ ಪ್ರಚಾರ ಮತ್ತು ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡರು.
2010ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೇವರ್ಗಿ ತಾಲೂಕಿನಲ್ಲಿ ಕಾಂಗ್ರೆಸ್ ತಂಡವನ್ನು ಮುನ್ನಡೆಸಿದ್ದರು. 2013 ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಅವರು ಜೇವರ್ಗಿಯಿಂದ ಹಾಲಿ ಬಿಜೆಪಿ ಶಾಸಕ ದೊಡ್ಡಪ್ಪಗೌಡ ಅವರನ್ನು 36700 ಮತಗಳಿಂದ ಸೋಲಿಸಿದರು.
ಶಾಸಕರ ಆಸ್ತಿಪಾಸ್ತಿ ವಿವರಗಳೇನು?
ಅಜಯ್ ಧರಂ ಸಿಂಗ್ ಒಟ್ಟು 41 ಕೋಟಿ ಆಸ್ತಿಯನ್ನು ಹೊಂದಿದ್ದು ಒಟ್ಟು ರೂ 9 ಲಕ್ಷ ಆದಾಯ ಹೊಂದಿದ್ದಾರೆ. ಸಾಮಾಜಿಕ ಕಾರ್ಯಕರ್ತರು ಹಾಗೂ ಬ್ಯುಸಿನೆಸ್ಮೆನ್ ಆಗಿರುವ ಅಜಯ್ ಧರಂ ಸಿಂಗ್ ಸಮಾಜ ಮುಖಿ ಕಾರ್ಯಗಳಿಂದಲೇ ಜನಮಾನಸದಲ್ಲಿ ಖ್ಯಾತಿ ಪಡೆದುಕೊಂಡವರು.
ಚರಾಸ್ತಿ ವಿವರ ಹೀಗಿದೆ
ಚರಾಸ್ತಿಯಾಗಿ ಅಜಯ್ ಧರಂ ಸಿಂಗ್ ರೂ 85,000 ಸಾವಿರ ನಗದನ್ನು ಜಮೆ ಮಾಡಿದ್ದಾರೆ. ಸಿಂಡಿಕೇಟ್ ಬ್ಯಾಂಕ್ನಲ್ಲಿ ರೂ 31 ಲಕ್ಷ ಡಿಪಾಸಿಟ್ ಇರಿಸಿಕೊಂಡಿದ್ದಾರೆ. ಕಂಪನಿ ಷೇರಾಗಿ ರೂ 26 ಲಕ್ಷ ಇವರ ಹೆಸರಲ್ಲಿದೆ. ಪೋಸ್ಟಲ್ ಸೇವಿಂಗ್ಸ್ ಆಗಿ ರೂ 57 ಲಕ್ಷ ಕೂಡ ಶಾಸಕರ ಹೆಸರಿನಲ್ಲಿದೆ.
ರೂ 2 ಲಕ್ಷದ ಎಲ್ಐಸಿ ಹಾಗೂ ಇನ್ನಿತರ ವಿಮೆಯನ್ನು ಅಜಯ್ ಧರಂ ಸಿಂಗ್ ಹೊಂದಿದ್ದಾರೆ ಹಾಗೂ ರೂ 11 ಕೋಟಿಯ ಪರ್ಸನಲ್ ಲೋನ್ ಶಾಸಕರ ಹೆಸರಿನಲ್ಲಿದೆ.
ರೂ 22 ಲಕ್ಷ ಬೆಲೆಬಾಳುವ ಇನ್ನೋವಾ ಕ್ರಿಸ್ಟಾವನ್ನು ಶಾಸಕರು ಹೊಂದಿದ್ದಾರೆ. ರೂ 1 ಕೋಟಿಯಷ್ಟು ಮೌಲ್ಯದ ಚಿನ್ನಾಭರಣಗಳನ್ನು ಹೊಂದಿರುವುದಾಗಿ ಶಾಸಕರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Congress Leader: ರಾಯರೆಡ್ಡಿ ಕೈ ಹಿಡಿತಾರಾ ಕೊಪ್ಪಳದ ಜನತೆ? ಇಲ್ಲಿದೆ ಶಾಸಕರ ರಾಜಕೀಯ ಜೀವನದ ಕಿರುಚಿತ್ರಣ
ರೂ 1 ಕೋಟಿ ಮೌಲ್ಯದ ಕೃಷಿ ಭೂಮಿಯನ್ನು ಅಜಯ್ ಧರಂ ಸಿಂಗ್ ಹೊಂದಿದ್ದು, ರೂ 1 ಕೋಟಿ ಕೃಷಿಯೇತರ ಭೂಮಿಯೂ ಇವರ ಹೆಸರಿನಲ್ಲಿದೆ. ರೂ 5 ಕೋಟಿ ಬೆಲೆಯ ವಾಣಿಜ್ಯ ಸಂಕೀರ್ಣಗಳನ್ನು ಅಜಯ್ ಧರಂ ಸಿಂಗ್ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ