ಬೆಂಗಳೂರು: ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಪಕ್ಷದ ಅಭ್ಯರ್ಥಿಗಳು ಭರದಿಂದ ಸಿದ್ಧತೆ ನಡೆಸುತ್ತಿದ್ದಾರೆ. ಗೆಲುವು ಸೋಲುಗಳ ಹೊಯ್ದಾಟದಲ್ಲಿ ಮತದಾರರ ಮನವೊಲಿಸುವ ಕಾರ್ಯದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ. ಮನೆ ಮನೆಗೆ ತೆರಳಿ ಮತಯಾಚನೆ, ಆಶ್ವಾಸನೆಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿರುವ ಪಕ್ಷದ ಅಭ್ಯರ್ಥಿಗಳು ಶ್ರೀಸಾಮಾನ್ಯನನ್ನು ಓಲೈಸಲು ಹೈಪ್ಲಾನ್ಗಳನ್ನೇ ಮಾಡಿಕೊಂಡಿದ್ದಾರೆ.
ತಮ್ಮ ಪ್ರತಿನಿಧಿಗಳನ್ನು ಯೋಚಿಸಿ ಆರಿಸುತ್ತಿರುವ ಮತದಾರರು
ಅಭ್ಯರ್ಥಿಗಳು ಎಷ್ಟೇ ಕಮಾಲು ಮಾಡಿದರೂ ವೋಟು ಹಾಕುವ ಮತದಾರರು ಇದೀಗ ಅಳೆದು ತೂಗಿ ಯೋಚಿಸಿ ತಮಗೆ ಯಾರು ಬೇಕೋ ಯಾರು ಸಮರ್ಥರೋ ಅಂತಹ ಜನನಾಯಕರನ್ನೇ ಆಯ್ಕೆಮಾಡಿಕೊಳ್ಳುವಷ್ಟು ಪ್ರಬಲರಾಗಿದ್ದಾರೆ.
ಜನಪ್ರತಿನಿಧಿಗಳ ಆಶ್ವಾಸನೆಗಳಿಗೆ ಆಮಿಷಗಳಿಗೆ ಒಡ್ಡಿಕೊಳ್ಳದೇ ಅವರ ರಾಜಕೀಯ ಇತಿಹಾಸ, ಏಳುಬೀಳುಗಳು, ಕ್ಷೇತ್ರಕ್ಕೆ ಮಾಡಿರುವ ಕೆಲಸ ಇದೆಲ್ಲವನ್ನೂ ಗಮನಿಸಿಕೊಂಡು ವೋಟು ಹಾಕಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಚುನಾವಣೆಯಲ್ಲಿ ಬಹಿರಂಗಗೊಳ್ಳಲಿದೆ.
ಕುಸುಮ ಹನುಮಂತರಾಯಪ್ಪ ಶಿಕ್ಷಣ ಹಾಗೂ ವೃತ್ತಿ ಜೀವನ
ಇಂದಿನ ಲೇಖನದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುಸುಮಾ ಹನುಂತರಾಯಪ್ಪ ವಿವರ ಇಲ್ಲಿದೆ.
ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ (DK Ravi) ಪತ್ನಿಯಾಗಿರುವ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) 2018 ರಲ್ಲಿ ಮ್ಯಾಸಚೂಸೆಟ್ಸ್ ಬೋಸ್ಟನ್ USA ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನದಲ್ಲಿ ಎಂಎಸ್ ಪದವಿಧರೆಯಾಗಿದ್ದಾರೆ.
ಬೆಂಗಳೂರಿನ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕುಸುಮಾ ಹನುಮಂತರಾಯಪ್ಪ ಸಮಾಜ ಸೇವೆಯ ಜೊತೆಗೆ ಓದು ಬರಹ
ಇನ್ನಿತರ ಹವ್ಯಾಸಗಳನ್ನು ಹೊಂದಿದ್ದಾರೆ.
ಸಮಾಜಮುಖಿ ಕಾರ್ಯದಲ್ಲಿ ಸದಾ ಮುಂದು
ರಾಜಕೀಯ ಕುಟುಂಬದಿಂದ ಬಂದಿರುವ ಕುಸುಮಾ ಅವರ ತಂದೆ ಜಾತ್ಯಾತೀತ ಜನತಾದಳ ಮುಖಂಡರಾದ ಹನುಮಂತರಾಯಪ್ಪ. 31 ಹರೆಯದ ಕುಸುಮಾ ಹನುಮಂತರಾಯಪ್ಪ ಉತ್ಸಾಹದ ಚಿಲುಮೆ ಎಂದೆನಿಸಿದ್ದು ರಾಜರಾಜೇಶ್ವರಿ ನಗರವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಆಕಾಂಕ್ಷೆ ಹೊಂದಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯಾಗಿ ಜನಸೇವೆ ಮಾಡುತ್ತಿರುವ ಕುಸುಮಾ ಅವರು ಪಕ್ಷಕ್ಕಾಗಿ ದುಡಿಯುವ ಛಲಗಾತಿ ಎಂದೆನಿಸಿದ್ದಾರೆ.
ಕುಸುಮಾ ಹನುಮಂತರಾಯಪ್ಪ ಆಸ್ತಿಪಾಸ್ತಿ ವಿವರ
ಕುಸುಮಾ ಅವರು ಉಲ್ಲೇಖಿಸಿರುವಂತೆ ರೂ 2 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ನಗದು ಹಣ ರೂ 1,41,050 ಅನ್ನು ಹೊಂದಿದ್ದು, ಕೆನರಾ ಬ್ಯಾಂಕ್ನಲ್ಲಿ ರೂ 5 ಲಕ್ಷ ಹಣ ಡಿಪಾಸಿಟ್ ಇರಿಸಿದ್ದಾರೆ ಎಂದು ತಿಳಿಸಿದ್ದಾರೆ. ಬಾಂಡ್ ಹಾಗೂ ಷೇರುಗಳ ರೂಪದಲ್ಲಿ ರೂ 2 ಲಕ್ಷ ಹಣ ಇವರ ಬಳಿ ಇದೆ ಎಂಬ ಮಾಹಿತಿ ನೀಡಿದ್ದಾರೆ.
ಪರ್ಸನಲ್ ಲೋನ್ ಚಿನ್ನಾಭರಣಗಳ ಮಾಹಿತಿ
ರೂ 58 ಲಕ್ಷದ ಪರ್ಸನಲ್ ಲೋನ್ ಕುಸುಮಾ ಅವರ ಹೆಸರಿನಲ್ಲಿದ್ದು ರೂ 45 ಲಕ್ಷದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ಒಟ್ಟು ಈ ಎಲ್ಲಾ ವಸ್ತುಗಳ ಮೌಲ್ಯ ರೂ 1 ಕೋಟಿ ಎಂಬ ಮಾಹಿತಿ ನೀಡಿದ್ದಾರೆ.
ಕುಸುಮಾ ಹನುಮಂತರಾಯಪ್ಪ ಸ್ಥಿರಾಸ್ತಿ ವಿವರ
ಸ್ಥಿರಾಸ್ತಿ ವಿವರವನ್ನು ಕುಸುಮಾ ನೀಡಿದ್ದು, ಯಾವುದೇ ಕೃಷಿ ಭೂಮಿ ಹೊಂದಿಲ್ಲ ಎಂಬುದಾಗಿ ತಿಳಿಸಿದ್ದು, ಕೃಷಿಯೇತರ ಭೂಮಿಯಾಗಿ ರೂ 1 ಕೋಟಿ ಮೌಲ್ಯದ ಭೂಮಿಯನ್ನು ಹೊಂದಿದ್ದಾರೆ.
ಯಾವುದೇ ವಾಣಿಜ್ಯ ಸಂಕೀರ್ಣವಾಗಲೀ ನಿವೇಶನವಾಗಲೀ ತಮ್ಮ ಹೆಸರಿನಲ್ಲಿಲ್ಲ ಎಂಬ ವಿವರವನ್ನು ನೀಡಿದ್ದಾರೆ. ಒಟ್ಟು 1 ಕೋಟಿ ಮೌಲ್ಯದ ಮಾರುಕಟ್ಟೆ ಮೌಲ್ಯದ ವಿವರ ನೀಡಿದ್ದಾರೆ.
ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿರುವ ಕುಸುಮಾ ಹನುಮಂತರಾಯಪ್ಪ ಪಕ್ಷದ ಪ್ರತಿಯೊಂದು ಚಟುವಟಿಕೆಗಳ ಮಾಹಿತಿಗಳನ್ನು ಅಪ್ಡೇಟ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ: Sumalatha Ambareesh: ಮಂಡ್ಯದಿಂದ ಕಣಕ್ಕಿಳಿಯುವ ಇಂಗಿತ ಹೊರಹಾಕಿದ ಸಂಸದೆ
ಉತ್ತಮ ವಾಗ್ಮಿ ಹಾಗೂ ಸಮಾಜ ಸೇವೆಯನ್ನೇ ತಮ್ಮ ಧ್ಯೇಯವಾಗಿರಿಸಿಕೊಂಡಿರುವ ಕುಸುಮಾ ಹನುಮಂತರಾಯಪ್ಪ ಹಲವಾರು ಸಮಾಜ ಮುಖಿ ಕೆಲಸಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ