Karnataka Assembly Election 2023 in Kannada: ರಾಜ್ಯ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಇನ್ನೇನು ರಾತ್ರಿ ಕಳೆದು ಬೆಳಗಾಗುವುದರೊಳಗೆ ಮತದಾನ ಆರಂಭವಾಗಲಿದೆ. ಇಂದು ರಾಜ್ಯದಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ನಾಳೆ ನಡೆಯುವ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಹಕ್ಕು ಚಲಾಯಿಸುವ ಪ್ರತಿಯೊಬ್ಬ ಮತದಾರರಿಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕಲಾಗುತ್ತದೆ. ನಾಳಿನ ಮತದಾನಕ್ಕೆ ಪ್ರಖ್ಯಾತ ಮೈಸೂರು ಶಾಯಿ ಬಳಕೆಯಾಗಲಿದೆ. ನಾಳೆ ನಡೆಯೋ ಮತದಾನಕ್ಕೆ 1.50 ಲಕ್ಷ ಬಾಟಲ್ ಶಾಯಿ ಇಂಕ್ ಬಳಕೆಯಾಗುತ್ತಿದೆ. ಒಂದು ಬಾಟಲಿಯಿಂದ 750 ಮತದಾರರ ಬೆರಳಿಗೆ ಶಾಯಿ ಹಾಕಬಹುದಾಗಿದೆ.
ಮತದಾನಕ್ಕೆ ಊರುಗಳಿಗೆ ತೆರಳುವವರಿಗಾಗಿ ನೈಋತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್ಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರು ಹಾಗೂ ಬೆಳಗಾವಿ ಮಧ್ಯೆ ಒಂದು ವಿಶೇಷ ರೈಲು ಸಂಚರಿಸಲಿವೆ. ಹುಬ್ಬಳ್ಳಿ ಮಾರ್ಗವಾಗಿ ಈ ರೈಲು ಸಂಚರಿಸಲಿವೆ. ಇನ್ನು ಬೆಂಗಳೂರಿನಿಂದ ಬೀದರ್ಗೆ ಕಲಬುರಗಿ ಮಾರ್ಗವಾಗಿ ಒಂದು ರೈಲು ತೆರಳಲಿದೆ. ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿದೆ.
ದೊಡ್ಡಬಳ್ಳಾಪುರದಲ್ಲಿ ಮತದಾನಕ್ಕಾಗಿ ಪಿಂಕ್ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ತಳಗವಾರ ಗ್ರಾಮದಲ್ಲಿ ಪಿಂಕ್ ಬಣ್ಣ ಹಾಗೂ ಬಲೂನ್ಗಳಿಂದ ಮತಗಟ್ಟೆಯನ್ನು ಸಿಂಗಾರಗೊಳಿಸಲಾಗಿದೆ. ಗ್ರಾಮದಲ್ಲಿ ಹೆಚ್ಚು ಮಹಿಳಾ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ಮುಂದಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ 4 ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್ಗಳ ಬಳಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ನಲ್ಲಿ ಬಸ್ ಸಿಗದೆ ಪ್ರಯಾಣಿಕರ ಪರದಾಟ ನಡೆಸಿದ್ದಾರೆ. ಬಸ್ಗಳಿಲ್ಲದೆ ನೆಲಮಂಗಲದಲ್ಲಿ ಹೈವೇ ಅಕ್ಕಪಕ್ಕ ನಿಂತು ಜನರು ಸಮಸ್ಯೆ ಎದುರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ನಗರಗಳಿಗೆ ಬಿಎಂಟಿಸಿ ಬಸ್ ಸೇವೆ ನೀಡಲಾಗಿದ್ದು, ತುಮಕೂರು, ಪಾವಗಡ, ಚಳ್ಳಕೆರೆ, ಚಿತ್ರದುರ್ಗಕ್ಕೆ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಚುನಾವಣೆಯ ಹಿನ್ನೆಲೆಯಲ್ಲಿಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ತಾಯಿ ನಿಧನರಾದರೂ ಪೊಲೀಸ್ ಕಾನ್ಸ್ಸ್ಟೇಬಲ್ ಕೆಲಸಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆಮೆರೆದಿದ್ದಾರೆ. ಈ ಘಟನೆ ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 8ರ ಸಂಜೆಯಿಂದ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಕಳೆದ ಒಂದೇ ವಾರದಲ್ಲಿ ಬರೋಬ್ಬರಿ ₹1,200 ಕೋಟಿ ರೂಪಾಯಿ ಬ್ಯುಸಿನೆಸ್ ಆಗಿದೆ. 3 ದಿನ ಡ್ರೈ ಡೇ ಹಿನ್ನೆಲೆ ಬಾರ್ಗಳಿಗೆ ಮುಗಿಬಿದ್ದ ಮದ್ಯ ಪ್ರಿಯರು, ಹಲವೆಡೆ ಬಾರ್ ಮುಂದೆ ಸಾಲುಗಟ್ಟಿ ನಿಂತು ಎಣ್ಣೆ ಖರೀದಿ ಮಾಡಿದ್ದಾರೆ. ಈ ನಡುವೆ ಮದ್ಯ ದಾಸ್ತಾನು ಮಾಡಿ ಮತದಾರರಿಗೂ ಎಣ್ಣೆ ಹಂಚುತ್ತಿರೋ ಆರೋಪ ಕೇಳಿ ಬಂದಿದೆ.
ಬೆಂಗಳೂರಲ್ಲಿ ಹನುಮಾನ್ ಚಾಲೀಸ ಪಠಿಸುತ್ತಿದ್ದಾಗ ದಾಳಿ ನಡೆಸಿರುವ ಅಧಿಕಾರಿಗಳು ಚಾಲೀಸ ಪಠಣಕ್ಕೆ ಬ್ರೇಕ್ ಹಾಕಿದ್ದಾರೆ. ವಿಜಯನಗರ ಕ್ಲಬ್ ರೋಡ್ನಲ್ಲಿ ಹರಿಹರೇಶ್ವರ ದೇಗುಲ ಮುಂಭಾಗದಲ್ಲಿ ದೊಡ್ಡದಾದ ಆಂಜನೇಯ ಸ್ವಾಮಿ ಮೂರ್ತಿಯಿಟ್ಟು 70ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸ
ಪಠಣೆ ಮಾಡುತ್ತಿದ್ದರು. ಆದರೆ ನಗರದಲ್ಲಿ ಸೆಕ್ಷನ್ 144 ಇರೋವುದರಿಂದ ಐದಕ್ಕಿಂತ ಹೆಚ್ಚು ಜನರ ಸೇರದಂತೆ ಎಚ್ಚರಿಕೆ ನೀಡಲಾಗಿದೆ. ಚುನಾವಣಾಧಿಕಾರಿಗಳ ನಡೆಗೆ ಕಾರ್ಯಕರ್ತರಿಂದ ಬೇಸರ ವ್ಯಕ್ತಪಡಿಸಿದ್ದು, ಚರ್ಚ್ ಮತ್ತು ಮಸೀದಿಗಳಲ್ಲಿ ಮಾತ್ರ ಅವಕಾಶ ನೀಡಲಾಗುತ್ತದೆ. ನಮಗ್ಯಾಕೆ ಅವಕಾಶ ನೀಡಲ್ಲ ಎಂದು ವಾಗ್ವಾದ ನಡೆಸಿದ್ದಾರೆ.
ಮತದಾನದ ಜಾಗೃತಿಗೆ ಮುಂದಾಗಿದ್ದ ಬೆಂಗಳೂರಿನ ಹೋಟೆಲ್ ಗಳ ಮಾಲೀಕರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಮತದಾನ ಮಾಡಿ ಬಂದವರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ತಿಂಡಿ ಪಾನಿಯ ವ್ಯವಸ್ಥೆಗೆ ಮುಂದಾಗಿದ್ದ ಹೋಟೆಲ್ ಮಾಲೀಕರಿಗೆ ಚುನಾವಣಾ ಮಾದರಿ ನೀತಿ ಸಂಹಿತೆ ಅಡಿ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.
ನಾಳೆ ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆ ಕರ್ನಾಟಕ – ಮಹಾರಾಷ್ಟ್ರ – ಗೋವಾ ಗಡಿಭಾಗದಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ನಾಳೆ ಮತದಾನ ಹಿನ್ನಲೆ ಗೋವಾ- ಕಾರವಾರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗೋವಾದಿಂದ ಕಾರವಾರಕ್ಕೆ ಬರುವ ಎಲ್ಲ ವಾಹನಗಳನ್ನೂ ತಪಾಸಣೆ ಮಾಡಲಾಗ್ತಿದೆ. ಗೋವಾದಿಂದ ಕಾರವಾರಕ್ಕೆ ಅಕ್ರಮವಾಗಿ ಮದ್ಯವನ್ನು ಸಾಗಿಸೋ ಶಂಕೆ ಹಿನ್ನೆಲೆ ಎಲ್ಲ ವಾಹನಗಳನ್ನೂ ತಪಾಸಣೆ ಮಾಡಲಾಗ್ತಿದೆ.
ಗದಗನಲ್ಲಿ ಮಸ್ಟರಿಂಗ್ ಕೇಂದ್ರದಲ್ಲಿ ಹಾವು ಪ್ರತ್ಯಕ್ಷವಾಗಿದ್ದರಿಂದ ಅಧಿಕಾರಿಗಳು ಕೆಲ ಕಾಲ ಕಂಗಾಲಾಗಿದ್ದರು.ನಗರದ ಜೆಟಿ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯದ ವೇಳೆ ಹಾವು ಕಾಣಿಸಿಕೊಂಡಿದೆ. ಇದರಿಂದ ಕೆಲ ಕಾಲ ಸಿಬ್ಬಂದಿ ಆತಂಕ್ಕಕ್ಕೀಡಾಗಿದ್ರು. ನಂತರ ಹೋಮ್ ಗಾರ್ಡ ಬಿ ಆರ್ ಸುರೇಭಾನ ಹಾವು ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು.
ರಾಜ್ಯದಲ್ಲಿ ನಾಳೆ ಮತದಾನ ಹಿನ್ನೆಲೆ ಕರ್ನಾಟಕ ತಮಿಳುನಾಡು ಗಡಿಭಾಗ ಆನೇಕಲ್ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ಪೊಲೀಸರು ಭಾರೀ ಭದ್ರತೆ ಏರ್ಪಡಿಸಿದ್ದು, ತಮಿಳುನಾಡಿನಿಂದ ರಾಜ್ಯದತ್ತ ಆಗಮಿಸುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಬಿಸಿಲನಾಡು ರಾಯಚೂರಿನಲ್ಲಿ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಮತದಾನಕ್ಕೆ ಶಾಮಿಯಾನ ಬಳಕೆ ಮಾಡಲಾಗ್ತಿದೆ. ಈ ಬಗ್ಗೆ ನ್ಯೂಸ್ 18ಗೆ ಡಿಸಿ ಚಂದ್ರಶೇಖರ್ ನಾಯಕ್ ಹೇಳಿದ್ದು, 1840 ಮತಗಟ್ಟೆಗಳ ಪೈಕಿ 855 ಕಡೆ ಶಾಮಿಯಾನ ಅಳವಡಿಕೆ ಮಾಡಲಾಗಿದೆ. ಶಾಮಿಯಾನದ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೋಲಾರ ಜಿಲ್ಲಾಡಳಿತದಿಂದ ನಾಳೆ ಮುಕ್ತ, ಪಾರದರ್ಶಕ, ಶಾಂತಿಯುತ ಚುನಾವಣೆಗೆ ಸಿದ್ದತೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1590 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಆ ಪೈಕಿ ಜಿಲ್ಲೆಯಲ್ಲಿ 382 ಅತಿ ಸೂಕ್ಷ್ಮ ಮತಗಟ್ಟೆಗಳು ಇದ್ದು, ಮತದಾರರನ್ನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 30 ಪಿಂಕ್ ಬೂತ್ ನಿರ್ಮಿಸಲಾಗಿದೆ. ಚುನಾವಣಾ ಸಿಬ್ಬಂದಿಗೆ ತಾಲೂಕು ಕೇಂದ್ರದ ಮಸ್ಟರಿಂಗ್ ಕೇಂದ್ರಗಳಲ್ಲಿ ಇ.ವಿ.ಎಂ ಯಂತ್ರ ಹಾಗು ಚುನಾವಣಾ ವಸ್ತುಗಳ ವಿತರಣೆ ಕಾರ್ಯ ನಡೆಯಿತು.
ರಾಜ್ಯ ವಿಧಾನಸಭೆಗೆ ನಾಳೆ ಮತದಾನ ನಡೆಯುತ್ತಿರುವ ಹಿನ್ನೆಲೆ ವಿವಿಧೆಡೆ ಭರದ ಸಿದ್ಧತೆ ನಡೆಯುತ್ತಿದೆ. ಮತ ಯಂತ್ರಗಳನ್ನು ಮತದಾನದ ಕೇಂದ್ರಗಳಿಗೆ ಕೊಂಡೊಯ್ಯಲು ಅಧಿಕಾರಿಗಳು ಸನ್ನದ್ಧವಾಗಿದ್ದು, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆ ಸೇರಿ ವಿವಿಧೆಡೆ ಪೂರ್ವ ಸಿದ್ಧತೆ ನಡೆಸಲಾಗ್ತಿದೆ. ಮತಯಂತ್ರ ಮತ್ತಿತರ ಪರಿಕರಗಳನ್ನು ಚುನಾವಣಾ ಸಿಬ್ಬಂದಿಗೆ ಹಸ್ತಾಂತರ ಮಾಡಲಾಗಿದೆ.
How To Find Voting Booth: ನಿಮ್ಮ ಮತಗಟ್ಟೆ ಯಾವುದು ಅನ್ನೋದನ್ನು ಹೀಗೆ ತಿಳಿಯಿರಿ#HowTOFindPollingBooth #HowToFindVotingBooth #PollingBooth #VotingBooth #KarnatakaElection #karnatakaelections2023 #Kannada #Karnatakahttps://t.co/bRFsppM38t
— News18 Kannada (@News18Kannada) May 9, 2023
https://t.co/vqRNhZWXlr
ಮೈಸೂರು ಒಡೆಯರ್ ಸಂಸ್ಥಾನ ಹಾಗೂ ಶಾಯಿಯ ನಂಟು#Mysuru #MysuruInk #KarnatakaElection2023 #AssemblyElection2023 #KarnatakaElections2023 #KannadaNews #KarnatakaAssemblyElection2023— News18 Kannada (@News18Kannada) May 9, 2023
ನಾಳೆ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತದಾನ ಹಿನ್ನೆಲೆ ಇಂದು ಯಾದಗಿರಿ ಜಿಲ್ಲೆಯ ಶಹಾಪುರನಲ್ಲಿ ಮತದಾನ ಜಾಗೃತಿ ಜಾಥಾ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮತದಾನ ಜಾಗೃತಿ ಜಾಥಾ ನಡೆಸಲಾಗಿದ್ದು, ಯಾವುದೇ ಆಮೀಷಕ್ಕೆ ಒಳಗಾಗದೆ ಉತ್ತಮ ಅಭ್ಯರ್ಥಿಗೆ ಮತದಾನದ ಹಕ್ಕನ್ನು ಚಲಾಯಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹೇಳಿದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ವಯೋವೃದ್ಧರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು. ಆದರೆ ತುಮಕೂರಿನಲ್ಲಿ 80 ವರ್ಷಕ್ಕೂ ಮೇಲ್ಪಟ್ಟ ಸುಮಾರು 132 ಮಂದಿ ಮತದಾನಕ್ಕೇ ಮೊದಲೇ ಮೃತಪಟ್ಟಿರುವುದಾಗಿ ‘ಪ್ರಜಾವಾಣಿ ವೆಬ್’ ವರದಿ ಮಾಡಿದೆ.
ವಿಧಾನಸಭೆ ಚುನಾವಣೆಗೆ ನಾಳೆ ಮತದಾನ ಹಿನ್ನೆಲೆ ಧಾರವಾಡದಲ್ಲಿ ಮಸ್ಟರಿಂಗ್ ಕಾರ್ಯ ಆರಂಭಗೊಂಡಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಆರಂಭಗೊಂಡಿದ್ದು, ಆಯಾ ಕ್ಷೇತ್ರದ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಮಾಡಲಾಗ್ತಿದೆ. ಜಿಲ್ಲೆಯಲ್ಲಿ ಒಟ್ಟು 1642 ಮತಗಟ್ಟೆಗಳಿದ್ದು, ಮತದಾನಕ್ಕಾಗಿ 8319 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.