Karnataka Election 2023: ನರೇಂದ್ರ ಮೋದಿ ರೋಡ್‌ ಶೋ ಸೇರಿದಂತೆ ಇಂದಿನ ರಾಜಕೀಯ ಸುದ್ದಿಗಳ ವಿವರ ಇಲ್ಲಿವೆ

Karnataka Assembly Election 2023: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಎರಡನೇ ದಿನದ ರೋಡ್ ಶೋ, ಕಾಂಗ್ರೆಸ್‌ ಮತ್ತು ಜೆಡಿಎಸ್ ಕಾರ್ಯಕ್ರಮಗಳ ವಿವರವೂ ಸೇರಿದಂತೆ ಇಂದಿನ ಪ್ರಮುಖ ರಾಜಕೀಯ ವಿದ್ಯಮಾನಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Assembly Election) ರಣಕಣ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಚುನಾವಣಾ (Election Campaign) ಪ್ರಚಾರಕ್ಕೆ ತೆರೆ ಬೀಳಲಿದೆ. ನಾಳೆಯಿಂದ ಎರಡು ದಿನ ಮನೆ ಮನೆಗೆ ತೆರಳಿ ಪ್ರಚಾರ ಮಾಡಲಷ್ಟೇ ಅವಕಾಶ. ಈ ಮಧ್ಯೆ ಮೋದಿ ರೋಡ್ ಶೋ (Modi Road Show) ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಏನೆಲ್ಲ ರಾಜಕೀಯ ಬೆಳವಣಿಗೆಗಳು ನಡೆವೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

ಮತ್ತಷ್ಟು ಓದು ...
07 May 2023 19:43 (IST)

Karnataka Election 2023 Live: ಕಾಂಗ್ರೆಸ್ ಆರೋಪಗಳು ಸುಳ್ಳು, ನಿರಾಧಾರ; ಶೋಭಾ ಕರಂದ್ಲಾಜೆ

ಜಾಹೀರಾತು ಮೂಲಕ ಕಾಂಗ್ರೆಸ್‌ ಆರೋಪಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಜಾಹೀರಾತಿನ ಮೂಲಕ ಕಾಂಗ್ರೆಸ್ ಸುಳ್ಳು ಆರೋಪ ಮಾಡಿದೆ. ಕಾಂಗ್ರೆಸ್ ಆರೋಪಗಳು ಸಂಪೂರ್ಣ ಸುಳ್ಳು, ನಿರಾಧಾರ. ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನೋಟಿಸ್ ನೀಡಿದೆ. ಇದರ ಬಗ್ಗೆ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಆಯೋಗ ಕೇಳಿದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಾರಿದರು.

07 May 2023 19:39 (IST)

Karnataka Election 2023 Live: ಸಿದ್ದು ವಿರುದ್ಧ ಪ್ರತಾಪ್​ ಸಿಂಹ ಘರ್ಜನೆ

ನಂಜನಗೂಡು, ಮೈಸೂರುಇನ್ನು, ಪ್ರಧಾನಿ ಆಗಮನಕ್ಕೂ ಮುನ್ನ ನಂಜನಗೂಡಿನಲ್ಲಿ ಬಿಜೆಪಿ ನಾಯಕರ ಅಬ್ಬರ ಜೋರಾಗಿತ್ತು. ಈ ವೇಳೆ ಪ್ರತಾಪ್​ ಸಿಂಹ ಮಾತನಾಡಿದ್ದು, ನಟ ಸುದೀಪ್ ಕಾಂಗ್ರೆಸ್‌ನಲ್ಲಿ ಕಿಚ್ಚು ಹತ್ತಿಸಿದ್ದಾರೆ. ಕಿಚ್ಚ ಸುದೀಪ್‌ರ ಕಿಚ್ಚು ಕಾಂಗ್ರೆಸ್‌ನ ಭಸ್ಮ ಮಾಡುತ್ತೆ ಎಂದರು.

07 May 2023 19:37 (IST)

Karnataka Election 2023 Live: ತುಮಕೂರಿನಲ್ಲಿ ಬಸ್ ಸೀಜ್​ ಮಾಡಿದ ಚುನಾವಣಾ ಅಧಿಕಾರಿಗಳು

ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರಕ್ಕೆ ಹೊರಜಿಲ್ಲೆಗಳಿಂದ ಬಂದು ಪ್ರಚಾರ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಪರವಾಗಿ ಬಂದಿದ್ದಾರೆನ್ನಲಾಗುತ್ತಿದೆ. ಬಸ್ ಗಳಲ್ಲಿ ಬಂದ 200 ಕ್ಕೂ ಹೆಚ್ಚು ಜನರನ್ನ ಬಿಜೆಪಿ ಕಾರ್ಯಕರ್ತರು ಹಿಡಿದಿಟ್ಟಿದ್ದಾರೆ . ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್,16 ಬಾಕ್ಸ್ ಗಳು,50 ಮಾದರಿ ಮತಯಂತ್ರಗಳು, ಎರಡು ಬಸ್‌ನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.

07 May 2023 18:30 (IST)

Karnataka Election 2023 Live: ಮತದಾನದ ಜಾಗೃತಿ ಮೂಡಿಸಿ ಗಮನ ಸೆಳೆದ ವಧು-ವರರು

ಕುಷ್ಟಗಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು-ವರರು ಮತದಾನದ ಜಾಗೃತಿ ಮೂಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಡೇಕೊಪ್ಪ ಗ್ರಾಮದ ಜಿಗೇರಿ ಕುಟುಂಬದ ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ ನಡೆಸಲಾಗಿದ್ದು, ಮೇ 10ರಂದು ನಡೆಯಲಿರುವ ಚುಮಾವಣೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ ಎಂಬ ಸಂದೇಶ ಫಲಕ ಹಿಡಿದು ಜಾಗೃತಿ ಮೂಡಿಸಿದರು.

07 May 2023 17:43 (IST)

Karnataka Election 2023 Live: ಬಿ.ಸಿ.ಪಾಟೀಲ್​ರನ್ನ ಗೆಲ್ಲಿಸಿ ಅಂತ ಬಿಎಸ್​ವೈ ಮನವಿ

ಹಾವೇರಿಯ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಭರ್ಜರಿ ಪ್ರಚಾರ ಮಾಡಿದ್ದಾರೆ. ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿ ರೈತರ ಪರವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಮತಗಳ ಅಂತರದಲ್ಲಿ ಬಿ.ಸಿ.ಪಾಟೀಲ್​ರನ್ನ ಗೆಲ್ಲಿಸಿ ಅಂತ ಬಿಎಸ್​ವೈ ಮನವಿ ಮಾಡಿದ್ದರು. ಅಲ್ಲದೇ ಯು.ಬಿ ಬಣಕಾರ್​​ಗೆ ಬುದ್ಧಿ ಕಲಿಸುವಂತೆ ಬಿಎಸ್​​ವೈ ಹೇಳಿದ್ದರು.

07 May 2023 17:42 (IST)

Karnataka Election 2023 Live: ಡಿಕೆಶಿ, ಸಿದ್ದು ನಡುವೆ ವೈಮನಸ್ಸು ಅನ್ನೋರಿಗೆ ತಿರುಗೇಟು !

07 May 2023 17:40 (IST)

Karnataka Election 2023 Live: ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಪುತ್ರರಾದ ಡಾ. ಮಂಜುನಾಥ್ ಪ್ರಚಾರ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಪುತ್ರರಾದ ಡಾ. ಮಂಜುನಾಥ್ ಮತ್ತು ಡಾ. ಸಂಜೇಗೌಡ ಭರ್ಜರಿ ಪ್ರಚಾರ ಮಾಡಿದ್ರು. ಶಕ್ತಿ ಗಣಪತಿ ನಗರದ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಮಂಜುನಾಥ್ ಮತ್ತು ಸಂಜೇಗೌಡ ಮತಯಾಚನೆ ಮಾಡಿದ್ರು. ಈ ವೇಳೆ ಸ್ಥಳೀಯ ಮುಖಂಡರು ಸಾಥ್ ಕೊಟ್ಟರು.

07 May 2023 16:46 (IST)

Karnataka Election 2023 Live: ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ; ಬಿಜೆಪಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ

ಮೂರು ವರ್ಷದಿಂದ ಬಿಜೆಪಿ ಸರ್ಕಾರ ನಿಮ್ಮಿಂದ ಕಳ್ಳತನ ಮಾಡಿದ್ದಾರೆ. ನೀವು ಅಯ್ಕೆ ಮಾಡಿದ ಸರ್ಕಾರ ಬೇರೆ ಆದರೆ ರಚನೆಯಾಗಿದ್ದು ಬೇರೆ. ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ, ಕಳ್ಳತನ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರ ಕಳ್ಳತನ ಮಾತ್ರ ಮಾಡಲು ಸಾಧ್ಯ. ನಾನು ನಿಮ್ಮ ಜೊತೆ ಭಾರತ್ ಜೋಡೋ ಯಾತ್ರೆ ಮಾಡಿದ್ದೆನೆ. ಭಾರತದೊಂದಿಗೆ ಕರ್ನಾಟಕವನ್ನು ಜೋಡಿಸುವ ಸಲುವಾಗಿ ಯಾತ್ರೆ ಮಾಡಿದ್ದೆ ಎಂದು ರಾಹುಲ್​ ಗಾಂಧಿ ಆನೇಕಲ್​​ನಲ್ಲಿ ಹೇಳಿದ್ದಾರೆ.

07 May 2023 16:07 (IST)

Karnataka Election 2023 Live: ಶ್ರೀರಾಮ ಸೇನೆ ಬ್ಯಾನ್​ ಮಾಡಿದ್ದು ಬಿಜೆಪಿ, ನಾವು ಅಲ್ಲ; ಜೈರಾಮ್​ ರಮೇಶ್​​ ವಾಗ್ದಾಳಿ

ಮನೋಹರ್ ಪಾರಿಕ್ಕರ್ ಗೋವಾದಲ್ಲಿ ಶ್ರೀರಾಮಸೇನೆ ಬ್ಯಾನ್ ಮಾಡಿದ್ದರು. ಆಗ ಯಾಕೆ ಪ್ರಧಾನಿ ಮೋದಿ ಅವರು ಮಾತನಾಡಲಿಲ್ಲ. ಬಜರಂಗಿ ನಮ್ಮ ಸಂಸ್ಕೃತಿಯಲ್ಲೇ ಇದೆ, ಅದನ್ನ ದೊಡ್ಡದು ಮಾಡೋಕೆ ಹೊರಟಿದ್ದಾರೆ. ಆದರೆ ಬಜರಂಗ ದಳಕ್ಕೂ ಹನುಮಾನ್ ಗೆ ಏನು ಸಂಬಂಧ? ಬಜರಂಗಿ ಬೇರೆ, ಬಜರಂಗದಳ ಬೇರೆ. ಶ್ರೀರಾಮ ಸೇನೆ ಬ್ಯಾನ್​ ಮಾಡಿದ ಸಂದರ್ಭದಲ್ಲಿ ಮೋದಿ ಏಕೆ ಶ್ರೀರಾಮನಿಗೆ ಅಪಮಾನ ಅಂತ ಹೇಳಲಿಲ್ಲ ಎಂದು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

07 May 2023 15:23 (IST)

Karnataka Election 2023 Live: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ ಬೆನ್ನಲ್ಲೇ ಕಾಂಗ್ರೆಸ್​ ಅಲರ್ಟ್​​

ಮೋದಿ ಬೆಂಗಳೂರು ರೋಡ್ ಶೋ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷ ಅಲರ್ಟ್ ಆಗಿದ್ದು, ಬೆಂಗಳೂರು ಜನರಿಗೆ ತನ್ನ ಗ್ಯಾರೆಂಟಿಗಳನ್ನ ನೆನಪಿಸಲು ಮುಂದಾಗಿದೆ. ನಾಳೆ ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಬಹುದೊಡ್ಡ ಪ್ರಚಾರಕ್ಕೆ ನಿರ್ಧಾರ ಮಾಡಿದ್ದು, ಬೆಂಗಳೂರಿನ 500 ಕಡೆ, 5 ಗ್ಯಾರೆಂಟಿಯ ಮಾಹಿತಿ ಹೊಂದಿರುವ ಕರಪತ್ರಗಳ ವಿತರಣೆ ಮಾಡಲು ನಿರ್ಧಾರ ಮಾಡಿದೆ. ಟ್ರಾಫಿಕ್ ಸಿಗ್ನಲ್​​ನಲ್ಲಿ ನಿಂತು ಗ್ಯಾರಂಟಿ ಕರಪತ್ರಗಳನ್ನ ಕಾರ್ಯಕರ್ತರು ಹಾಗೂ ಮುಖಂಡರು ವಿತರಣೆ ಮಾಡಲಿದ್ದಾರೆ. ಜನರಿಗೆ ಟ್ರಾಫಿಕ್ ಸಮಸ್ಯೆ ಆಗದಂತೆ ಕರಪತ್ರ ಪ್ರಚಾರ ಮಾಡಲು ನಿರ್ಧಾರ ಮಾಡಲಾಗಿದೆ.

07 May 2023 15:01 (IST)

Karnataka Election 2023 Live: ತೇರದಾಳದಲ್ಲಿ ಸ್ಮೃತಿ ಇರಾನಿ ಭರ್ಜರಿ ರೋಡ್‌ ಶೋ

ತೇರದಾಳ ಪಟ್ಟಣದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರವಾಗಿ ಮತಬೇಟೆ ನಡೆಸಿದ ಸ್ಮೃತಿ ಇರಾನಿ, ಜವಳಿ ಬಜಾರ್, ಕನ್ನಡ ಶಾಲೆ ರಸ್ತೆ, ವಿಶೇಷ ತಹಸೀಲ್ದಾರ್ ಕಚೇರಿ ರಸ್ತೆ, ಬಸ್ ನಿಲ್ದಾಣ ಮೂಲಕ ಮಹಾವೀರ ರಸ್ತೆ ವರೆಗೂ ರೋಡ್ ಶೋ ನಡೆಸಿದರು. ಈ ವೇಳೆ ಬೃಹತ್  ಪ್ರಮಾಣದಲ್ಲಿ ಜನರು ಸೇರಿದ್ದರು. ರೋಡ್ ಶೋನಲ್ಲಿ ಜೈ ಭಜರಂಗಬಲಿ, ಮೋದಿ ಘೋಷಣೆ ಮತ್ತು ಭಜರಂಗಬಲಿ ವೇಷಧಾರಿಗಳು ಗಮನ ಸೆಳೆದರು.

07 May 2023 14:43 (IST)

Karnataka Election 2023 Live: ಮಲೆನಾಡಲ್ಲಿ ಮೋದಿ ಅಬ್ಬರ

ಬೆಂಗಳೂರಿನಲ್ಲಿ ರೋಡ್‌ ಶೋ ಮುಗಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಶಿವಮೊಗ್ಗದ ಆಯನೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದು, ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿ ಮೋದಿ ಭಾಷಣ ಆರಂಭಿಸಿದ್ದಾರೆ.

07 May 2023 14:38 (IST)

Karnataka Election 2023 Live: ಮೋದಿ ರೋಡ್‌ಶೋ ಬೆನ್ನಲ್ಲೇ ಅಲರ್ಟ್ ಆದ ಕಾಂಗ್ರೆಸ್‌

ನರೇಂದ್ರ ಮೋದಿ ಬೆಂಗಳೂರು ರೋಡ್ ಶೋ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಅಲರ್ಟ್ ಆಗಿದೆ. ಬೆಂಗಳೂರು ಜನರಿಗೆ ತನ್ನ ಗ್ಯಾರಂಟಿಗಳನ್ನ ನೆನಪಿಸಲು ಕಾಂಗ್ರೆಸ್ ಮುಂದಾಗಿದ್ದು, ನಾಳೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಹುದೊಡ್ಡ ಪ್ರಚಾರಕ್ಕೆ ನಿರ್ಧಾರ ಮಾಡಲಾಗಿದೆ. ಬೆಂಗಳೂರಿನ 500 ಕಡೆ 5 ಗ್ಯಾರಂಟಿಯ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಣೆ ಮಾಡಲು ಪ್ಲಾನ್ ಮಾಡಲಾಗಿದ್ದು, ಜನರಿಗೆ ಟ್ರಾಫಿಕ್ ಸಮಸ್ಯೆ ಆಗದಂತೆ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತು ಕಾರ್ಯಕರ್ತರು ಹಾಗೂ ಮುಖಂಡರು ಗ್ಯಾರಂಟಿ ಕರಪತ್ರಗಳನ್ನ ವಿತರಣೆ ಮಾಡಲಿದ್ದಾರೆ.

07 May 2023 14:16 (IST)

Karnataka Election 2023 Live: ನಾಗಮಂಗಲದಲ್ಲಿ ದೊಡ್ಡಗೌಡ್ರ ಅಬ್ಬರದ ಭಾಷಣ

ನಾಗಮಂಗಲದಲ್ಲಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ತಮ್ಮ ಪಕ್ಷದ ಅಭ್ಯರ್ಥಿ ಪರ ಅಬ್ಬರದ ಭಾಷಣ ಮಾಡಿದ್ದಾರೆ. ಜನರನ್ನುದ್ದೇಶಿಸಿ ಮಾತನಾಡಿದ ಎಚ್‌ಡಿಡಿ, ಮೋದಿ ರೋಡ್ ಶೋಗಿಂತಲೂ ಮಿಗಿಲಾಗಿ ನಾಗಮಂಗಲದ ಜನ್ರು ನನ್ನ ರೋಡ್ ಶೋ ನಡೆಸಿದ್ರು‌. ಬಹಳ ಉತ್ಸಾಹದಿಂದ 10ಕಿಮಿ ರೋಡ್ ಶೋ ನಡೆಸಿದ್ರಿ, ನಿಮಗೆ ನನ್ನ ಧನ್ಯವಾದಗಳು. ಮೋದಿಯವರ ಕಣ್ಣು ಕುಕ್ಕುವ ರೀತಿ ನನ್ನನ್ನು ರೋಡ್ ಶೋ ಮೂಲಕ ಕರೆದುಕೊಂಡು ಬಂದ್ರಿ. ಕಾಶ್ಮೀರಕ್ಕೆ ಹೋಗ ಬೇಡಿ ಉಗ್ರರು ನಿಮ್ಮನ್ನ ಹೊಡೆದು ಹಾಕ್ತಾರೆ ಅಂದ್ರು. ಆದ್ರೆ ನಾನು ಹೇಳಿದೆ ನಾನು ಹೋಗ್ತೇನೆ, ಹಾಗೇನಾದರೂ ಆದರೆ ಹರದನಹಳ್ಳಿಯಲ್ಲಿ ನನ್ನ ಸಮಾಧಿ ಮಾಡಿ ಎಂದೆ ಎಂದು ಹೇಳಿದರು. ಜೊತೆಗೆ ನಿಮಗೆ ತಲೆ ಬಾಗಿ ನಮಸ್ಕರಿಸ್ತೀನಿ ಸುರೇಶ್ ಗೌಡನನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

07 May 2023 14:00 (IST)

Karnataka Election 2023 Live: ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ!

ಕಾಂಗ್ರೆಸ್‌ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಬರೋಬ್ಬರಿ 2 ಕೋಟಿ 85 ಲಕ್ಷ ಹಾರ್ಡ್ ಕ್ಯಾಶ್‌ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಬ್ಯಾಡಗಿ ಪಟ್ಟಣದ ವಿದ್ಯಾನಗರದಲ್ಲಿರುವ ಚನ್ನಬಸಪ್ಪ ನಿವಾಸದಲ್ಲಿ ಈ ಹಣ ಪತ್ತೆಯಾಗಿದ್ದು, ಚುನಾವಣೆ ಇರುವ ಹಿನ್ನೆಲೆ ಈನ ದಾಳಿ ಭಾರಿ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪರಮಾಪ್ತರಾಗಿರುವ ಚನ್ನಬಸಪ್ಪ ಜೊತೆ ಈ ಹಣ ಎಲ್ಲಿಂದ ಬಂತು? ಯಾರಿಗೆ ಸೇರಿದ ಹಣ ಎಂದು ಐಟಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

07 May 2023 13:45 (IST)

Karnataka Election 2023 Live: ಡಿಕೆಶಿ ಕೋಟೆಯಲ್ಲಿ ‘ಸಾಮ್ರಾಟ್’ ಖದರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋಟೆಯಲ್ಲಿ ಆರ್ ಅಶೋಕ್ ಪರ ಅಭಿಮಾನಿಗಳು ಸದ್ದೆಬ್ಬಿಸಿದ್ದಾರೆ. ಆರ್ ಅಶೋಕ್ ಪರ ಕನಕಪುರದ ಪ್ರಮುಖ ರಸ್ತೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸುತ್ತಿದ್ದು, ನಗರದ KSRTC ಬಸ್ ನಿಲ್ದಾಣದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನ ಮಾರ್ಗವಾಗಿ ಮುಖ್ಯರಸ್ತೆಯಲ್ಲಿ ರೋಡ್ ಶೋ ಹಾದು ಹೋಗಲಿದೆ. ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಈ ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ.

07 May 2023 13:26 (IST)

Karnataka Election 2023 Live: ರಮಾನಾಥ ರೈ ಅವರನ್ನು ಬಹುಮತದಿಂದ ಗೆಲ್ಲಿಸಲು ಜನಾರ್ದನ ಪೂಜಾರಿ ಮನವಿ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ ರಮಾನಾಥ ರೈ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮಾಜಿ ಕೇಂದ್ರ ಸಚಿವ, ಬಿಲ್ಲವ ಸಮುದಾಯದ ಅಗ್ರಗಣ್ಯ ನಾಯಕ ಬಿ ಜನಾರ್ದನ ಪೂಜಾರಿ ಮನವಿ ಮಾಡಿದ್ದಾರೆ. ಬಿ.ರಮಾನಾಥ ರೈ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಅವರು ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮತದಾರರು ಗೌರವ ನೀಡಬೇಕು. ನನಗೆ ಅನಾರೋಗ್ಯದಿಂದ ನಿಮ್ಮ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿ.ರಮಾನಾಥ ರೈಗೆ ಸುಳ್ಳು ಹೇಳಲು ಬರುವುದಿಲ್ಲ. ನನ್ನಂತೆ ಸತ್ಯದಿಂದಲೇ ಪಕ್ಷ ಮತ್ತು ಜನತೆ ಪರವಾಗಿ ದುಡಿಯುತ್ತಿದ್ದಾರೆ. ಈ ದೇಶದಲ್ಲಿ ರಮಾನಾಥ ರೈ ಅವರಂತೆ ಕೆಲಸ ಮಾಡುವ ವ್ಯಕ್ತಿಗಳು ಅಪರೂಪ. ಈ ಬಾರಿ ರೈ ಸೋತರೆ ನಾನು ಸತ್ತಂತೆ ಎಂದು ಜನಾರ್ದನ ಪೂಜಾರಿ ಭಾವುಕರಾಗಿ ಹೇಳಿದರು.

07 May 2023 13:01 (IST)

Karnataka Election 2023 Live: ಪ್ರಧಾನಿ ಮೋದಿ ರೋಡ್‌ಶೋ ಕ್ಯಾಮೆರಾ ಕಣ್ಣಲ್ಲಿ ಕಂಡಿದ್ದು ಹೀಗೆ

07 May 2023 12:39 (IST)

Karnataka Election 2023 Live: ಐಟಿ, ಇಡಿ ಹಾಗೂ ಸಿಬಿಐಗಳು ಬಿಜೆಪಿಯ ಅಸ್ತ್ರಗಳಾಗಿವೆ: ಹಿಮಾಚಲ ಪ್ರದೇಶ ಸಿಎಂ

ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರ ಮೇಲೆ ಐಟಿ ದಾಳಿ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಐಟಿ, ಇಡಿ ಹಾಗೂ ಸಿಬಿಐಗಳು ಬಿಜೆಪಿಯ ಅಸ್ತ್ರಗಳಾಗಿವೆ. ರಾಜನೀತಿಯ ಅಸ್ತ್ರಗಳಾಗಿವೆ. ಚುನಾವಣೆ ಬಂದಾಗ ಈ ಅಸ್ತ್ರಗಳನ್ನು ದುರ್ಬಳಕೆ ಮಾಡಿಕೊಳ್ತಾ ಇದ್ದಾರೆ. ಕೇವಲ ಕಾಂಗ್ರೆಸ್ ಪಕ್ಷವೊಂದೇ ಅಲ್ಲ, ಪ್ರತಿಪಕ್ಷಗಳೇ ಬಿಜೆಪಿಯ ಟಾರ್ಗೆಟ್ ಆಗಿದೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಅಲ್ಲಿ ಈ ರೀತಿಯ ಅಸ್ತ್ರಗಳನ್ನು ಬಳಸ್ತಿದೆ. ಪ್ರತಿಪಕ್ಷಗಳನ್ನು ಬಗ್ಗು ಬಡಿಯಲು ಯತ್ನಿಸ್ತಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪ  ಮಾಡಿದರು.

07 May 2023 12:17 (IST)

Karnataka Election 2023 Live: ಚುನಾವಣಾ ಪ್ರಚಾರ ಅಂತ್ಯಕ್ಕೆ ಕೌಂಟ್‌ಡೌನ್ ಶುರು