ಕೊಪ್ಪಳ: ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಭರವಸೆಯ ಅಭ್ಯರ್ಥಿಗಳನ್ನು ಮೂರು ಪಕ್ಷಗಳು ಕಣಕ್ಕಿಳಿಸಿದ್ದು, ಇದರಲ್ಲಿ ಬಿಜೆಪಿಯ ಹಾಲಪ್ಪ ಬಸಪ್ಪ ಆಚಾರ್ (Halappa Basappa Achar) ಎಂಬುವರನ್ನು ಯಲಬುರ್ಗಾದ ಅಭ್ಯರ್ಥಿಯಾಗಿ (Yalaburga BJP Candidate) ಆಯ್ಕೆಗೊಂಡಿದ್ದಾರೆ. ತಳಮಟ್ಟದ ಸಮುದಾಯದಿಂದ ಹಿಡಿದು ಇಂದಿನ ಯುವಪೀಳಿಗೆಯವರ ನಾಡಿಮಿಡಿತ ಹಿಡಿದಿಡುವಷ್ಟು ಅಪಾರ ಅನುಭವ ಹೊಂದಿರುವ ಅಪರೂಪದ ರಾಜಕಾರಣಿ ಹಾಲಪ್ಪ. ಇವರ ವೈಯಕ್ತಿಕ ಬದುಕು, ರಾಜಕೀಯ ಪಯಣ ಇಂತಿದೆ.
ವೈಯಕ್ತಿಕ ಬದುಕು
ಹಾಲಪ್ಪ ಬಸಪ್ಪ ಆಚಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಬಿಜೆಪಿ ಶಾಸಕರು. ಹಾಲಪ್ಪ ಬಸಪ್ಪ ಆಚಾರ ಅವರು 01 ಡಿಸೆಂಬರ್ 1952ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಜನಿಸಿದರು. ತಂದೆ ಬಸಪ್ಪ ಆಚಾರ.
ತಾಯಿ ಗೌರಮ್ಮ ಬಸಪ್ಪ ಆಚಾರ. ಲಿಂಗಾಯತ ರೆಡ್ಡಿ ಸಮುದಾಯಕ್ಕೆ ಸೇರಿದ ಇವರು 1975ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕೃಷಿ ವಿಷಯದಲ್ಲಿ ಬಿಎಸ್ಸಿ ಪದವಿ ಪಡೆದುಕೊಂಡರು.
ಸತತ 10 ವರ್ಷಗಳ ಕಾಲ ಬೇಸಾಯ ಮಾಡಿದ ಇವರು, ವ್ಯವಸಾಯದ ಕಷ್ಟ, ನೋವುಗಳನ್ನು ಕಂಡು ಕೊಂಡಿದ್ದ ಇವರು ದ್ರಾಕ್ಷಿ ಬೆಳೆ ಬೆಳೆದ ಕಾರಣಕ್ಕೆ ಕೃಷಿ ಸಚಿವ ಬಲರಾಮ್ ಜಾಕರ್ ಎಂಬವರಿಂದ ಮಾದರಿ ರೈತ ಎಂಬ ಪ್ರಶಂಸೆಯನ್ನು ಗಳಿಸಿದ್ದಾರೆ. 1970ರಲ್ಲಿ ರತ್ಮಮ್ಮ ಆಚಾರ್ ಎಂಬುವರ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟರು. ಇವರು ಗೃಹಿಣಿ.
ರಾಜಕೀಯ ಪಯಣ
ಹಾಲಪ್ಪ ಬಸಪ್ಪ ಆಚಾರ್ ಅವರು ಮೊದಲ ಬಾರಿಗೆ 1976ರಲ್ಲಿ ಮಸಬ ಹಂಚಿನಾಳ್ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದರು. ಅವರು 1978ರಲ್ಲಿ ಯಲಬುರ್ಗಾದಲ್ಲಿ IFFCO ನ ಉಪಾಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು.
1988-89ರಲ್ಲಿ ಆರ್ಡಿಸಿಸಿ ಬ್ಯಾಂಕ್ನ ನಿರ್ದೇಶಕರಾದರು ಮತ್ತು ಭಾರಿ ನಷ್ಟದಲ್ಲಿ ಮತ್ತು ದಿವಾಳಿತನದ ಅಂಚಿನಲ್ಲಿದ್ದ ಅದನ್ನು ಪುನರುಜ್ಜೀವನಗೊಳಿಸಿದರು.
2010ರಲ್ಲಿ ರಾಯಚೂರು ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಬದುಕನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು.
2011ರಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ ಸರ್ಕಾರಕ್ಕೆ 35 ಕೋಟಿ ರೂ. ಲಾಭ ತಂದು ಕೊಟ್ಟರು.
ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಅವರು ಸತತ 10 ವರ್ಷಗಳ ಕಾಲ ಅಪೆಕ್ಸ್ ಬ್ಯಾಂಕ್ನ ನಿರ್ದೇಶಕರಾಗಿದ್ದರು.. 2012-13 ರಿಂದ 2014-15ರವರೆಗೆ ಹಂಪಿ ಫೌಂಡೇಶನ್ ಅಥಾರಿಟಿ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು.
ಮೊದಲ ಬಾರಿ ಶಾಸಕರು
2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತದಲ್ಲಿ ಸೋಲನ್ನು ಅನುಭವಿಸಿದ್ದ ಇವರು 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ 79,072 ಮತಗಳನ್ನು ಪಡೆದು ಜಯಗಳಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಭರವಸೆಯ ರಾಜಕೀಯ ಮುಖಂಡರಾದರು.
2021ರ ಆಗಸ್ಟ್ 4ರಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಇವರು, ನಾಲ್ಕು ಕೋಟಿಯ ಆಸ್ತಿಯ ಒಡೆಯರು.
ಯಾರ ವಿರುದ್ಧ ಫೈಟ್?
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಹಾಲಪ್ಪ ಆಚಾರ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷವು ಬಸವರಾಜ ರಾಯರೆಡ್ಡಿ ಎಂಬುವರನ್ನು, ಜೆಡಿಎಸ್ ಪಕ್ಷವು ಕೋನನ್ ಗೌಡ ಎಂಬುವವರನ್ನು ಕಣಕ್ಕಿಳಿಸಿದೆ. ಈ ಮೂವರ ನಡುವಿನ ಬಿಗ್ ಫೈಟ್ನಲ್ಲಿ ವಿಜಯ ಲಕ್ಷ್ಮೀ ಯಾರಿಗೆ ಒಲಿಯುವಳು ಎಂಬುದು ಮೇ 13ರಂದು ಗೊತ್ತಾಗಲಿದೆ.
ಇದನ್ನೂ ಓದಿ: Roopali Naik: ಮತ್ತೊಮ್ಮೆ ಗೆದ್ದು ಬೀಗುತ್ತಾರಾ ರೂಪಾಲಿ ನಾಯ್ಕ್? ಕಾರವಾರ ಶಾಸಕಿಯ ಪರಿಚಯ ಇಲ್ಲಿದೆ
ಪ್ರಶಸ್ತಿಗಳು
ಕೃಷಿ ಸಚಿವ ಬಲರಾಮ್ ಜಾಕರ್ ಎಂಬುವರಿಂದ ಮಾದರಿ ರೈತ ಪ್ರಶಸ್ತಿ
ಬ್ಯಾಂಕ್ ಪುನರುಜ್ಜೀವನದಲ್ಲಿ ಅವರ ಪ್ರಯತ್ನವನ್ನು ಗುರುತಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ‘ಸಹಕಾರ ರತ್ನ’ ಪ್ರಶಸ್ತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ