ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಮೂರು ಪಕ್ಷಗಳು ರಣಕಹಳೆ ಮೊಳಗಿಸಿವೆ. ಅಭ್ಯರ್ಥಿಗಳಂತೂ (Election Candidates) ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುರುಕಾಗುತ್ತಿದ್ದಾರೆ. ವಿರೋಧ ಪಕ್ಷಗಳ ವಿರುದ್ಧ ದಾಳಿ-ವಾಗ್ದಾಳಿ, ಅಭ್ಯರ್ಥಿಗಳ ವಿರುದ್ಧ ಕೆಸರೆರಚಾಟ, ಪ್ರಚಾರ ಭರ್ಜರಿಯಾಗಿ (Election Campaign) ನಡೆಸುತ್ತಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳು (BJP Election Candidates) ಸಹ ಚುನಾವಣೆಯಲ್ಲಿ ತಲ್ಲೀನರಾಗಿದ್ದು, ಮತ್ತೆ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಚುನಾವಣೆ ರಂಗು
ಕರ್ನಾಟಕ ರಾಜ್ಯದ 224 ಕ್ಷೇತ್ರಗಳು ಮತ್ತು ಅದರ ಅಭ್ಯರ್ಥಿಗಳು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದಾರೆ. ಅದರಲ್ಲಿ ತೇರದಾಳ ಕ್ಷೇತ್ರ (Terdal Assembly Constituency) ಹೇಗಿದೆ, ಬಿಜೆಪಿಯಿಂದ (BJP) ಯಾರು ಸ್ಪರ್ಧಿಸುತ್ತಿದ್ದಾರೆ? ಅಭ್ಯರ್ಥಿ ಹಿನ್ನೆಲೆ ಏನು ನೋಡೋಣ.
ತೇರದಾಳ ಕ್ಷೇತ್ರದ ಅಭ್ಯರ್ಥಿ ಸಿದ್ದು ಸವದಿ
2013 ಮತ್ತು 2018ರ ಕಳೆದ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಿಂದ ಭಾಗವಹಿಸಿ, 2018ರಲ್ಲಿ ಜಯ ಗಳಿಸಿದ್ದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಮತ್ತೆ ಗೆಲುವಿನ ನಗೆ ಬೀರಲು ಚುನಾವಣಾ ಸಂಗ್ರಾಮಕ್ಕೆ ಧುಮುಕಿದ್ದಾರೆ.
ಈಗಾಗ್ಲೇ ಕ್ಷೇತ್ರದಿಂದ ಜಯ ಗಳಿಸಿರುವ ಸಿದ್ದು ಸವದಿ ಬಗ್ಗೆ ಜನತೆಗೆ ಒಂದು ಚಿತ್ರಣ ಬಂದಿರುತ್ತದೆ. ತಮ್ಮ ಕ್ಷೇತ್ರದ ಶಾಸಕರ ಬಗ್ಗೆ ತಿಳಿದುಕೊಂಡಿರುತ್ತಾರೆ. ನಾವಿಲ್ಲಿ ಅವರ ರಾಜಕೀಯ ಜೀವನದ ಬಗ್ಗೆ ಒಂಚೂರು ಮೆಲುಕು ಹಾಕೋಣ.
ಜನನ ಮತ್ತು ವಿದ್ಯಾಭ್ಯಾಸ
ಜುಲೈ 22, 1959ರಲ್ಲಿ ಜನಿಸಿದ ಸಿದ್ದು ಸವದಿ ಅವರ ತಂದೆ ಕಲ್ಲಪ್ಪ ಸವದಿ. ಸಿದ್ದು ಸವದಿ ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಅವರು ಶ್ರೀ ಪ್ರಭುಲಿಂಗೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು.
ರಾಜಕೀಯ ಹಾದಿ
*ಬಿಜೆಪಿ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಪಕ್ಷದ ಒಳಿತಿಗೆ, ಕ್ಷೇತ್ರಕ್ಕೆ, ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ ಸಿದ್ದು ಸವದಿ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಇವರು 2013ರಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ 2013ರಲ್ಲಿ ಇವರು ಸೋಲನ್ನು ಅನುಭವಿಸಿದ್ದರು.
*2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಸಿದ್ದು ಸವದಿ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್- ಅಭ್ಯರ್ಥಿ ಉಮಾಶ್ರೀ (Congress Candidate Umashri) 20889 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
*ಶಾಸಕರಾಗಿದ್ದ ಇವರು, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಸಹ ನಿಭಾಯಿಸಿದ್ದಾರೆ.
*ಜೊತೆಗೆ ಪಾವರಲೂಮ್ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ತೇರದಾಳ ಕ್ಷೇತ್ರದಲ್ಲಿ ಯಾರ ಪರ ಇದೆ ಒಲವು?
ತೇರದಾಳ ವಿಧಾನಸಭೆ ಕ್ಷೇತ್ರ ನೇಕಾರರೇ ಹೆಚ್ಷಾಗಿರುವ ಕ್ಷೇತ್ರ. ನೇಕಾರರು ಯಾರ ಪರ ಒಲವು ವ್ಯಕ್ತ ಪಡಿಸುತ್ತಾರೋ ಅವರೇ ಅಲ್ಲಿ ಶಾಸಕರಾಗುತ್ತಾರೆ ಎನ್ನುವುದು ಹಿಂದಿನ ಮೂರು ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿದೆ.
ತೇರದಾಳ ಕ್ಷೇತ್ರದಿಂದ ಸಿದ್ದು ಸವದಿ ಮತ್ತು ಮಾಜಿ ಸಚಿವೆ ಉಮಾಶ್ರೀ ಒಂದು ಬಾರಿ ಆಯ್ಕೆಗೊಂಡಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆಯೇ ಜನಬಲ ಪ್ರದರ್ಶನ
ನಾಮಪತ್ರ ಸಲ್ಲಿಕೆ ವೇಳೆಯೇ ಜನಬಲ ಪ್ರದರ್ಶನ ಮಾಡಿದ ಸಿದ್ದು ಸವದಿ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ತೋರಿಸಿದರು.
ರಬಕವಿಯ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ ಮೂಲಕ ದಾನಮ್ಮದೇವಿ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಶಂಕರಲಿಂಗ ದೇವಸ್ಥಾನ, ಶ್ರೀನಿವಾಸ ಚಿತ್ರ ಮಂದಿರ, ರಾಮಪುರ ರಾಮದೇವರ ಮಂದಿರ, ನಗರಸಭೆ ಕಾರ್ಯಾಲಯ, ಪೊಲಿಸ್ ಠಾಣೆ ಮಾರ್ಗವಾಗಿ ರೋಡ್ ಶೋ ಮೂಲಕ ಚುನಾವಣೆ ಅಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ: Karnataka Election 2023: 'ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ'! ಹಿಂಗ್ಯಾಕೆ ಹೇಳಿದರು ಡಿಕೆ ಶಿವಕುಮಾರ್?
ತೇರದಾಳ ಕ್ಷೇತ್ರದಲ್ಲಿ ಯಾರೆಲ್ಲಾ ಅಭ್ಯರ್ಥಿಗಳು ಇದ್ದಾರೆ
ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದಪ್ಪ ರಾಮಪ್ಪ ಕೊನ್ನೂರು, ಅರ್ಜುನ ಹಲಗಿಗೌಡರ ಎಎಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ