ಮೈಸೂರು: ರಾಜ್ಯದಲ್ಲಿ ಚುನಾವಣೆ (Karnataka Election) ಕಳೆಗಟ್ಟಿದೆ. ಅಂತೆಯೇ ಮೈಸೂರು (Mysuru) ಭಾಗ ಕೂಡ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಅದರಲ್ಲೂ ಇಲ್ಲಿನ ನಂಜನಗೂಡು ಕ್ಷೇತ್ರ ಈ ಬಾರಿ ವಿಶೇಷವಾಗಿದೆ. ನಂಜನಗೂಡಿನಲ್ಲಿ (Nanjangud) ಎಲ್ಲಾ ಪಕ್ಷಗಳು ಸಮಬಲ ಹೋರಾಟ ನಡೆಸುತ್ತಿದ್ದು, ಕಾಂಗ್ರೆಸ್ ಟಿಕೆಟ್ (Congress Ticket) ಈ ಬಾರಿ ದಿವಂಗತ ಧ್ರುವ ನಾರಾಯಣ್ (DhruvaNarayan) ಅವರ ಪುತ್ರ ದರ್ಶನ್ ಧ್ರುವನಾರಾಯಣ್ (Darshan Dhruvanarayan) ಅವರಿಗೆ ಲಭಿಸಿದೆ. ತಂದೆ ಸ್ಥಾನದಲ್ಲಿ ಸ್ಪರ್ಧೆ ಮಾಡುತ್ತಿರುವ ಯುವ ಅಭ್ಯರ್ಥಿ ದರ್ಶನ್ ಬಗ್ಗೆ ಕಿರುಪರಿಚಯ ಹೀಗಿದೆ.
ನಂಜನಗೂಡಿನಿಂದ ದರ್ಶನ್ ಧ್ರುವನಾರಾಯಣ್ ಸ್ಪರ್ಧೆ
ಸಜ್ಜನ ಮತ್ತು ದೂರದರ್ಶಿತ್ವದ ನಾಯಕರಾಗಿ ಅಜಾತಶತ್ರು ಎನಿಸಿಕೊಂಡಿದ್ದ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಆರ್ ಧ್ರುವನಾರಾಯಣ್ ಅವರ ಅಕಾಲಿಕ ನಿಧನದಿಂದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಅವರ ಮಗ ದರ್ಶನ್ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು, ರಾಜ್ಯದ ಅನೇಕ ಕಾಂಗ್ರೆಸ್ ವರಿಷ್ಠರು ಇವರಿಗೆ ಬೆಂಬಲ ನೀಡಿದ್ದಾರೆ.
ನಂಜನಗೂಡು ಕ್ಷೇತ್ರದ ಟಿಕೆಟ್ಗಾಗಿ ಡಾ. ಹೆಚ್.ಸಿ ಮಹಾದೇವಪ್ಪ ಮತ್ತು ಧ್ರುವನಾರಾಯಣ್ ವಿರುದ್ಧ ಪೈಪೋಟಿ ಇತ್ತು. ಮಹಾದೇವಪ್ಪ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಧ್ರುವನಾರಾಯಣ್ ಡಿ.ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದರು.
ಆದರೆ, ದುರದೃಷ್ಟವಶಾತ್ ಅವರು ಮಾರ್ಚ್ 11 ರಂದು ಅಕಾಲಿಕ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ನಂಜನಗೂಡು ಕಾಂಗ್ರೆಸ್ ಟಿಕೆಟ್ ಅನ್ನು ಅವರ ಪುತ್ರ ದರ್ಶನ್ಗೆ ನೀಡಲಾಯಿತು.
ದರ್ಶನ್ ಪರಿಚಯ
ದರ್ಶನ್ ಇತ್ತೀಚೆಗಷ್ಟೇ ತಂದೆ ಧೃವನಾರಾಯಣ್ ಮತ್ತು ತಾಯಿ ವೀಣಾ ಇಬ್ಬರನ್ನೂ ಕಳೆದುಕೊಂಡರು. ತಂದೆಯಂತೆ ಮೃಧು ವ್ಯಕ್ತಿತ್ವದ ದರ್ಶನ್ ಲಂಡನ್ನಲ್ಲಿ ಎಲ್ಎಲ್ಬಿ ಮುಗಿಸಿದ್ದು, ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ರಾಜಕೀಯದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್, ತಂದೆಯ ಅಕಾಲಿಕ ನಿಧನದಿಂದ ರಾಜಕೀಯ ಪ್ರವೇಶ ಮಾಡಿದರು.
ಧ್ರುವನಾರಾಯಣ್ ನಿಧನದ ನಂತರ ಕಾಂಗ್ರೆಸ್ ನಾಯಕರು ಅವರು ಪುತ್ರನಿಗೆ ಟಿಕೆಟ್ ನೀಡಬೇಕೆಂದು ಬಹಿರಂಗವಾಗಿ ಒತ್ತಾಯ ಮಾಡಿದ್ದರು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಾದೇವಪ್ಪ ಅವರ ಬಳಿ ಮನವಿ ಮಾಡಿದ್ದರು.
ಅಂತಿಮವಾಗಿ ಮಾನವೀಯತೆ ಆಧಾರದ ಮೇಲೆ ಮಹಾದೇವಪ್ಪ ಅವರು ಟಿಕೆಟ್ ರೇಸ್ನಿಂದ ಹಿಂದೆ ಸರಿದು ದರ್ಶನ್ ಧ್ರುವನಾರಾಯಣ್ಗೆ ಸ್ಥಾನ ಬಿಟ್ಟುಕೊಟ್ಟರು.
ಕಳೆದ ಬಾರಿ ಗೆದ್ದ ಅಭ್ಯರ್ಥಿಗೆ ಟಕ್ಕರ್ ಕೊಡ್ತಾರಾ ದರ್ಶನ್?
ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. 2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಹರ್ಷವರ್ಧನ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಕಳಲೆ ಕೇಶವ ಮೂರ್ತಿ 12,479 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ಈ ಬಾರಿ ಕೂಡ ಬಿಜೆಪಿ ಗೆಲ್ಲೋ ಕುದುರೆಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಹರ್ಷವರ್ಧನ ಜೊತೆ ಕಣಕ್ಕಿಳಿದಿದ್ದಾರೆ. ಈಗಾಗ್ಲೇ ಪರೋಕ್ಷವಾಗಿ ಜೆಡಿಎಸ್ ಧ್ರುವ ನಾರಾಯಣ್ಗೆ ಬೆಂಬಲ ನೀಡಿದ್ದು, ನಂಜನಗೂಡು ಕ್ಷೇತ್ರದಲ್ಲಿ ಅನುಕಂಪ ದರ್ಶನ್ ಮೇಲೆ ಇರುತ್ತಾ ನೋಡಬೇಕಿದೆ.
ಇದನ್ನೂ ಓದಿ: BJP Candidate List: ರಾಮದಾಸ್ಗಿಲ್ಲ ಟಿಕೆಟ್, ಈಶ್ವರಪ್ಪ ಕ್ಷೇತ್ರಕ್ಕೆ ಯಾರು ಅನ್ನೋದೇ ಸಸ್ಪೆನ್ಸ್!
ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಕೂಡ ಧ್ರುವ ನಾರಾಯಣ್ ಅವರ ವರ್ಚಸ್ಸನ್ನು ಪುತ್ರ ಮುಂದುವರಿಸುತ್ತಾರೆ ಎಂದು ದೊಡ್ಡ ಭರವಸೆಯೊಂದಿಗೆ ಟಿಕೆಟ್ ನೀಡಿದೆ.
ಕ್ಷೇತ್ರದ ವಿವರ
ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಕ್ಷೇತ್ರದಲ್ಲಿ ಇದುವರೆಗೂ ಉಪ ಚುನಾವಣೆ ಸೇರಿ 15ಕ್ಕೂ ಹೆಚ್ಚು ಚುನಾವಣೆ ನಡೆದಿದ್ದು, 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮೂರು ಬಾರಿ ಜೆಡಿಎಸ್ಮತ್ತು ಎರಡು ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ ಒಂದು ಬಾರಿ ಜಯಗಳಿಸಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಹರ್ಷವರ್ಧನ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ