ಕೋಲಾರ: ರಾಜ್ಯದ ಗಲ್ಲಿಗಲ್ಲಿ, ಮೂಲೆ ಮೂಲೆಯಲ್ಲೂ ಎಲೆಕ್ಷನದ್ದೇ (Karnataka Election 2023) ಹವಾ. ಆಡಳಿತಾರೂಢ ಬಿಜೆಪಿ (BJP) ಮತ್ತೆ ಅಧಿಕಾರ ಹಿಡಿಯೋಕೆ ಹರಸಾಹಸ ನಡೆಸ್ತಿದ್ದಾರೆ. ಈ ಬಾರಿ ನಮ್ಮದೇ ಸರ್ಕಾರ (Government) ಎಂಬ ವಿಶ್ವಾಸದಲ್ಲಿ ಕೈ ಪಡೆ ಇದೆ. ಜೆಡಿಎಸ್ (JDS) ಕೂಡ ಇದೇ ಮಂತ್ರವನ್ನು ಜಪಿಸುತ್ತಿದೆ. ಯಾರ ಸರ್ಕಾರ ಬರುತ್ತೆ, ಯಾರು ಕರುನಾಡಿನ ಆಡಳಿತ ಚುಕ್ಕಾಣಿ ಹಿಡಿತಾರೆ ಅಂತಾ ಗೊತ್ತಾಗೋಕೆ ಹೆಚ್ಚಿನ ದಿನಗಳು ಸಹ ಬೇಕಿಲ್ಲ. ರಾಜ್ಯದಲ್ಲಿ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಮತ (Vote) ಹಾಕಿ ಮೂರೇ ದಿನಕ್ಕೆ ಫಲಿತಾಂಶ ಸಹ ಹೊರಬೀಳಲಿದೆ. ರಾಜ್ಯದ ಪ್ರತಿ ಕ್ಷೇತ್ರ ಕೂಡ ಕುತೂಹಲದ ಕಣವಾಗಿದೆ. ಅದರಂತೆ ಕೋಲಾರ (Kolar) ಕೂಡ ಜಿದ್ದಾಜಿದ್ದಿನ ಕಣವಾಗಿದೆ.
ಕೋಲಾರದ ಕಲಿ ಯಾರು?
ಮಾಜಿ ಸಿಎಂ, ಪ್ರಭಾವಿ ರಾಜಕಾರಣಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೇ ಕಾರಣಕ್ಕೆ ಬಿಜೆಪಿಗೂ ಈ ಕ್ಷೇತ್ರದಲ್ಲಿ ಟಿಕೆಟ್ ನಿರ್ಧರಿಸುವುದು ತಲೆನೋವಾಗಿತ್ತು. ಆಮೇಲೆ ಕಮಲ ಪಾಳಯ ಅಳೆದು ತೂಗಿ ಈ ಕ್ಷೇತ್ರಕ್ಕೆ ಆರ್. ವರ್ತೂರು ಪ್ರಕಾಶ್ ಅವರನ್ನು ಹೆಸರನ್ನು ಸೂಚಿಸಿತು.
ಆದರೆ ನಂತರದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಹಿಂದೆ ಸರಿದರು. ವಿಶೇಷ ಎಂದರೆ ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಗರಡಿಯ ಅಭ್ಯರ್ಥಿ ಕೂಡ ಹೌದು.
ಕಳೆದ ಬಾರಿ ಕಾಂಗ್ರೆಸ್ನಿಂದ ಸೋತಿದ್ದ ಇವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ವರ್ತೂರು ಪ್ರಕಾಶ್ ಗೆಲ್ಲಲೇಬೇಕು ಬೇಕು ಎಂದು ರಣತಂತ್ರ ಹೆಣೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ಶಿಷ್ಯ, ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ಬಗ್ಗೆ ಒಂದಿಷ್ಟು ಮಾಹಿತಿ ಹೀಗಿದೆ.
ಕೈ ಬಿಟ್ಟು ಕಮಲ ಹಿಡಿದ ವರ್ತೂರು ಪ್ರಕಾಶ್
ಕಳೆದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗೆ, ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹಾರಿದ್ದರು.
ಕಾಂಗ್ರೆಸ್ ಪಾಳಯದಿಂದ ಕಳೆದ ಬಾರಿ ಸ್ಪರ್ಧಿಸಿ, ಸೋತಿದ್ದರು. ಆದರೆ ಈ ಹಿಂದೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು .
ಬಿಇ ಮಾಡಿರುವ ವರ್ತೂರು ಪ್ರಕಾಶ್
20 ಡಿಸೆಂಬರ್ 1966ರಲ್ಲಿ ಜನಿಸಿದ ಇವರು ಶ್ರೀ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ನಲ್ಲಿ ಪಿಯುಸಿ ಮುಗಿಸಿದರು. ನಂತರ 1987ರಲ್ಲಿ ದಯಾನಂದಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಬಿಇ ಪದವಿ ಸಹ ಮುಗಿಸಿದರು. ಇವರ ಪತ್ನಿ ಶ್ಯಾಮಲಾ ಪ್ರಕಾಶ್ ಜುಲೈ 2017 ರಲ್ಲಿ ಡೆಂಗ್ಯೂನಿಂದ ನಿಧನರಾದರು.
ರಾಜಕೀಯ ವೃತ್ತಿ
* ರಾಜಕೀಯ ಜೀವನದಲ್ಲಿ ವರ್ತೂರು ಪ್ರಕಾಶ್ ಪಳಗಿದವರು. 2008, 2013ರಲ್ಲಿ ಕೋಲಾರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಎರಡೂ ಬಾರಿಯೂ ಗೆದ್ದು ಶಾಸಕರಾಗಿದ್ದರು.
* ಡಿವಿ ಸದಾನಂದ ಗೌಡ ಮಂತ್ರಿಮಂಡಲದಲ್ಲಿ ಜವಳಿ ಸಚಿವರಾಗಿ ಕೆಲಸ ಕೂಡ ಮಾಡಿದ್ದಾರೆ.
* ಜಗದೀಶ್ ಶೆಟ್ಟರ್ ಸಂಪುಟದಲ್ಲೂ ಸಹ ಪ್ರಕಾಶ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
* ಹೀಗೆ ಸೋಲೆ ಕಾಣದ ಇವರು 2018 ರಲ್ಲಿ ಜೆಡಿಎಸ್ ಪಕ್ಷದ ಕೆ ಶ್ರೀನಿವಾಸ ಗೌಡ ವಿರುದ್ಧ ಸೋಲು ಕಂಡರು.
* 19 ಡಿಸೆಂಬರ್ 2017 ರಂದು ಬಾಗಲಕೋಟೆ ಜಿಲ್ಲೆಯ ಕೂಡಾಲ ಸಂಗಮದಲ್ಲಿ ಹೊಸ ಪಕ್ಷವನ್ನು ಸಹ ಪ್ರಾರಂಭಿಸಿದರು .
2018 ರಲ್ಲಿ ಜನತಾ ದಳ (ಜಾತ್ಯತೀತ) ಯ ಕೆ. ಶ್ರೀನಿವಾಸ ಗೌಡ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನ ಸೈಯದ್ ಜಮೀರ್ ಪಾಶಾ 44251 ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಈ ಬಾರಿ ಜೆಡಿಎಸ್ನಿಂದ ಸಿ.ಎಂ.ಆರ್. ಶ್ರೀನಾಥ್, ಕಾಂಗ್ರೆಸ್ನಿಂದ ಕೊತ್ತೂರು ಜಿ ಮಂಜುನಾಥ್ ಇವರ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ