Karnataka Assembly Election: ಕರ್ನಾಟಕ ವಿಧಾನಸಭೆಯ 224 ಸದಸ್ಯರನ್ನು ಆಯ್ಕೆ ಮಾಡಲು 10 ಮೇ 2023 ರಂದು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ . ಫಲಿತಾಂಶವನ್ನು 13 ಮೇ 2023 ರಂದು ಘೋಷಿಸಲಾಗುತ್ತದೆ. ರಾಜಕೀಯ ಕಾರುಬಾರು ಎಲ್ಲ ಕಡೆ ಜೋರಾಗಿದೆ. ಹಾಗೆಯೇ ಪ್ರಚಾರದ ಕಾವು ಮುಗಿಲು ಮುಟ್ಟಿದೆ. ಪ್ರತಿ ಪಕ್ಷದ ನಾಯಕರಿಗೂ ಗೆಲುವು ಬಹು ಮುಖ್ಯವಾಗಿದೆ. ಮತದಾರರ ಓಲೈಕೆಗೆ ನಾನಾ ಕಸರತ್ತು ನಡೆಯುತ್ತಲಿವೆ. ಆದರೆ ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆ ಎನ್ನುವುದು ಎಲ್ಲರ ಯಕ್ಷಪ್ರಶ್ನೆ.
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಮೂರು ಪಕ್ಷದ ನಾಯಕರ ಕಾರುಬಾರು ಜೋರಾಗಿದೆ. ತಮ್ಮ ಕ್ಷೇತ್ರದ ನಾಯಕರ ಬಗ್ಗೆ ಎಲ್ಲರಿಗೂ ಬಹುತೇಕ ತಿಳಿದಿರುತ್ತದೆ. ಎಲೆಕ್ಷನ್ ಸಂದರ್ಭದ ಈ ವೇಳೆ ನಾವು ನಿಮಗೆ ಒಬ್ಬೊಬ್ಬರೇ ನಾಯಕರನ್ನು ಪರಿಚಯ ಮಾಡುತ್ತಿದ್ದೇವೆ. ಈ ಲೇಖನದ ನಮ್ಮ ರಾಜಕೀಯ ನಾಯಕ ನಿಸರ್ಗ ನಾರಾಯಣ ಸ್ವಾಮಿ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ (Nisarga Narayana Swamy) ಅವರ ಜೀವನ ಹೇಗಿತ್ತು? ಅವರ ರಾಜಕೀಯ ಜೀವನದ ಹೆಜ್ಜೆ ಗುರುತುಗಳೇನು? ಇವರು ಯಾವ ಕ್ಷೇತ್ರದವರು, ಯಾವ ಪಕ್ಷದವರು, ಇವರ ಒಟ್ಟು ಆಸ್ತಿ ಮೌಲ್ಯ ಏನು? ಹೀಗೆ ಹತ್ತಾರು ವಿಷಯಗಳ ಬಗ್ಗೆ ಇಲ್ಲಿವೆ ಕುತೂಹಲಕಾರಿ ಮಾಹಿತಿ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ “ಮನೆ ಮನೆಗೆ ಕುಮಾರಣ್ಣ” ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ತೂಬಗೆರೆ ಹೋಬಳಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ನಿಸರ್ಗ ನಾರಾಯಣಸ್ವಾಮಿ ಶಿಕ್ಷಣ
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣ ಸ್ವಾಮಿ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ನಾರಾಯಣಪ್ಪ ಇವರ ತಂದೆ. ಹೆಚ್ಚಿನ ವಿದ್ಯಾಭ್ಯಾಸ ಪಡೆಯದ ಇವರು ಎಂಟನೇ ತರಗತಿ ಮುಗಿಸಿ ನಂತರ ಶಾಲೆಗೆ ತೆರಳಲಿಲ್ಲ. ಕೃಷಿ, ಡೆವಲಪರ್, ಸಮಾಜ ಸೇವೆ ಅಂತಾ ತೊಡಗಿಸಿಕೊಂಡ ಬಳಿಕ ರಾಜಕೀಯಕ್ಕೆ ಪ್ರವೇಶ ಪಡೆದರು. ರಾಜಕೀಯ ಕ್ಷೇತ್ರ ಕೈ ಹಿಡಿಯಿತು ಮತ್ತು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ವಿಜಯ ಸಾಧಿಸಿದರು.
ಆಸ್ತಿ ಮೌಲ್ಯ
ನಿಸರ್ಗ ನಾರಾಯಣ ಸ್ವಾಮಿಯವರು ತಮ್ಮ ಆಸ್ತಿ ಮೌಲ್ಯವನ್ನು ಘೋಷಣೆ ಮಾಡಿದ್ದು, ಒಟ್ಟು ಆಸ್ತಿ ಮೌಲ್ಯ ರೂ 1,47,11,81,720 (147 ಕೋಟಿ+) ಆಗಿದೆ. ನಗದು 94 ಲಕ್ಷ, ಬ್ಯಾಂಕ್ನಲ್ಲಿ ಒಂದು ಕೋಟಿಗಿಂತ ಹೆಚ್ಚು ಹಣ, ಒಂದು ಲಕ್ಷದ ಎಲ್ಐಸಿ ಬಾಂಡ್, ವೈಯಕ್ತಿಕ ಲೋನ್ 3 ಕೋಟಿ, 77 ಲಕ್ಷದ ಮೌಲ್ಯದ ವಾಹನಗಳು, 23 ಕೋಟಿಯ ಭೂಮಿ, 96 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೀಗೆ ಇನ್ನೂ ಅನೇಕ ಸ್ಥಿರ ಮತ್ತು ಚರಾಸ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ.
ಆರೋಪಗಳು
ಶಾಸಕ ನಿಸರ್ಗ ನಾರಾಯಣಸ್ವಾಮಿ ನೂರಾರು ಭೂ ಮಾಫಿಯಾ, ಭೂ ಕಬಳಿಕೆಯ ದಂಧೆಯಲ್ಲೂ ತೊಡಗಿಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯಾವುದೇ ಕೆಲಸವನ್ನು ಮಾಡಿಕೊಡುತ್ತಿಲ್ಲ. ಹದ್ದುಗಿಡ ಹಳ್ಳದ ರಾಜಕಾಲುವೆ ಒಳಗೊಂಡಂತೆ 15 ಎಕರೆ ಭೂಮಿಯನ್ನ ಕಬಳಿಕೆ ಮಾಡಿದ್ದಾರೆ. ಎನ್ಎಂ ಇನ್ ಕ್ಲೋವ್ ಅನ್ನುವ ಬಡಾವಣೆಯ ನಿರ್ಮಾಣ. ಸರ್ಕಾರಿ ದಾಖಲೆಗಳನ್ನು ತಿರುಚಿ ಆಸ್ತಿ ಕಬಳಿಕೆ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಜಗದೀಶ್ ಆರೋಪ ಮಾಡಿ ಲೋಕಾಯುಕ್ತ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪವೂ ಇದೆ.
ಕಳೆದ ಬಾರಿ ಗೆದ್ದ ನಾರಾಯಣಸ್ವಾಮಿ
2018 ರಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವೆಂಕಟಸ್ವಾಮಿ 17010 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಬಿಜೆಪಿಯಿಂದ ದೇವನಹಳ್ಳಿಯಲ್ಲಿ ಕೆ ನಾಗೇಶ್ ಸ್ಪರ್ಧಿಸಿದ್ದರು. ಇಬ್ಬರ ವಿರುದ್ಧವೂ 86,966 ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದ ಶಾಸಕರಾಗಿ ನಿಸರ್ಗ ನಾರಾಯಣಸ್ವಾಮಿ ಆಯ್ಕೆಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ