ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಪತ್ನಿ ಶಿಲ್ಪಾ ಶೆಟ್ಟರ್ (Shilpa Shettar) ಗಳಗಳನೆ ಕಣ್ಣೀರಿಟ್ಟಿದ್ದಾರೆ. ತಮ್ಮ ಪತಿ ಜಗದೀಶ್ ಶೆಟ್ಟರ್ ವಿಚಾರಕ್ಕೆ ಅಪಾರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮಾಧ್ಯಮದವರ ಎದುರು ಕಣ್ಣೀರು ಹಾಕಿದ್ದಾರೆ. ನಿನ್ನೆಯಷ್ಟೇ ಜಗದೀಶ್ ಶೆಟ್ಟರ್ ತಮ್ಮ ಶಾಸಕತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ (BJP primary membership) ನಿನ್ನೆ ರಾಜೀನಾಮೆ ನೀಡಿದ್ದರು. ಇಂದು ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge), ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದಾದ ಬಳಿಕ ಹುಬ್ಬಳ್ಳಿಯಲ್ಲಿರುವ (Hubballi) ತಮ್ಮ ಮನೆಗೆ ಆಗಮಿಸಿದ್ರು. ಈ ವೇಳೆ ಅವರ ಸ್ವಾಗತಕ್ಕೆ ನಿಂತಿದ್ದ ಪತ್ನಿ ಶಿಲ್ಪಾ ಶೆಟ್ಟರ್ ಪತಿಯನ್ನು ನೋಡಿ ಭಾವುಕರಾದರು. ಪತಿ ಹತ್ತಿರ ಬರುತ್ತಿದ್ದಂತೆ ಗಳಗಳನೆ ಕಣ್ಣೀರು ಹಾಕಿದ್ರು!
ಶಿಲ್ಪಾ ಶೆಟ್ಟರ್ ಕಣ್ಣೀರು, ಜಗದೀಶ್ ಶೆಟ್ಟರ್ ಭಾವುಕ!
ಹೌದು, ಈ ದೃಶ್ಯಕ್ಕೆ ಇಂದು ಹುಬ್ಬಳ್ಳಿಯ ಜಗದೀಶ್ ಶೆಟ್ಟರ್ ನಿವಾಸ ಸಾಕ್ಷಿಯಾಯ್ತು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್, ಬೆಂಗಳೂರಿನಿಂದ ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ ವಾಪಸ್ಸಾದರು. ಈ ವೇಳೆ ಅವರನ್ನು ನೋಡಿ ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕಿದ್ರು. ಆಗ ಪತ್ನಿಯನ್ನು ಎದೆಗೆ ಒರಗಿಸಿಕೊಂಡ ಶೆಟ್ಟರ್, ಸಮಾಧಾನ ಮಾಡುತ್ತಲೇ ತಾವೂ ಭಾವುಕರಾದರು. ಈ ವೇಳೆ ಅಲ್ಲಿದ್ದವರು ಶೆಟ್ಟರ್ ದಂಪತಿಯನ್ನು ಸಮಾಧಾನ ಮಾಡಿದ್ರು.
“ನನ್ನ ಪತಿ ಸೋಲಿಲ್ಲದ ಸರದಾರ”
ಈ ವೇಳೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಶಿಲ್ಪಾ ಶೆಟ್ಟರ್, ನನ್ನ ಗಂಡ ಸೋಲರಿಯದ ಸರದಾರ, ನನ್ನ ಗಂಡನನ್ನ ಸೋಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ ಜಗದೀಶ್ ಶೆಟ್ಟರ್ಗೆ ಟಿಕೆಟ್ ತಪ್ಪಲು ಕಾರಣ ಯಾರು?
“ಅವರೇ ಕಟ್ಟಿದ ಮನೆಯಿಂದ ಹೊರಹೋಗುವಂತೆ ಮಾಡಿದ್ರು”
ನನ್ನ ಗಂಡ ಬಿಜೆಪಿಗೆ ಬಂದಾಗ ಅದು ಬರಡು ಭೂಮಿಯಾಗಿತ್ತು. ಖಾಲಿ ಜಾಗದಲ್ಲಿ ಮನೆ ಕಟ್ಟೋ ಕೆಲಸ ಅವರು ಮಾಡಿದ್ರು. ಒಂದೊಂದು ಇಟ್ಟಿಗೆಯನ್ನೂ ಜೋಡಿಸಿ ಮನೆ ಕಟ್ಟಿದರು. ಆದ್ರೆ ಇದೀಗ ಆ ಮನೆಯಿಂದ್ಲೇ ಹೊರ ಹೋಗುವಂತೆ ಕೆಲಸವರು ಮಾಡಿದ್ರು ಅಂತ ಆರೋಪಿಸಿದ್ರು.
“ಗೌರವಯುತ ವಿದಾಯ ಕೇಳಿದ್ದರು”
ಕೆಲವರ ಪಿತೂರಿಯಿಂದ ನನ್ನ ಪತಿ ಬಿಜೆಪಿ ಬಿಟ್ಟರು. ಅವರೇನು ಸಿಎಂ ಸ್ಥಾನ ಕೇಳಿರಲಿಲ್ಲ, ಸಚಿವ ಸ್ಥಾನ ಕೇಳಿರಲಿಲ್ಲ. ಆದರೆ ಗೌರವಯುತ ವಿದಾಯ ಕೇಳಿದ್ದರು. ಟಿಕೇಟ್ ಕೊಟ್ಟು ಆರು ತಿಂಗಳು ಶಾಸಕರಾಗಲು ಬಿಡಿ ಅಂದ್ರು. ಆದ್ರೆ ಅದಕ್ಕೂ ಬಿಜೆಪಿಯಲ್ಲಿ ಅವಕಾಶ ನೀಡಲಿಲ್ಲ ಅಂತ ಶಿಲ್ಪಾ ಶೆಟ್ಟರ್ ನೋವು ತೋಡಿಕೊಂಡರು.
“ಹಿರಿಯ ನಾಯಕರಿಗೆ ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲ”
ಹಿರಿಯ ನಾಯಕರಿಗೆ ಬಿಜೆಪಿಯಲ್ಲಿ ಗೌರವ ಸಿಗ್ತಿಲ್ಲ. ಇದೆಲ್ಲವೂ ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ಬಂದಿಲ್ಲವೇ ಅಂತ ಪ್ರಶ್ನಿಸಿದ ಶಿಲ್ಪಾ ಶೆಟ್ಟರ್, ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಗದೀಶ್ ಶೆಟ್ಟರ್ ಆತ್ಮಾಭಿಮಾನಕ್ಕೆ ಧಕ್ಕೆ ಬಂದಿರೋದ್ರಿಂದ ಕಾಂಗ್ರೆಸ್ಗೆ ಹೋಗಿದ್ದಾರೆ. ಕಟ್ಟಿದ ಮನೆಯನ್ನು ಬಿಟ್ಟು ಹೋದ ಸ್ಥಿತಿ ಅವರದ್ದು. ಇದಕ್ಕೆ ಕಾರಣರಾದವರ ಹೆಸರನ್ನು ಹೇಳಲ್ಲ. ಅವರು ಯಾರು ಅಂತ ಇಡೀ ಕರ್ನಾಟಕಕ್ಕೆ ಗೊತ್ತಿದೆ ಅಂತ ಹೆಸರು ಹೇಳದೇ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ರು.
ಈ ಬಾರಿಯೂ ಶೆಟ್ಟರ್ ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ
ಜಗದೀಶ್ ಶೆಟ್ಟರ್ ಇದುವರೆಗೂ ಸತತ ಆರು ಬಾರಿ ಗೆದ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಅವರು ಸೋಲರಿಯದ ಸರದಾರರಾಗಿದ್ದಾರೆ. ಈ ಬಾರಿಯೂ ಗೆಲುವಿನ ನಾಗಾಲೋಟವನ್ನು ಮುಂದುವರೆಸ್ತಾರೆ. ನಾವೆಲ್ಲರೂ ಅವರ ಪರ ಪ್ರಚಾರ ಮಾಡ್ತೇವೆ. ಪ್ರತಿ ಬಾರಿಗಿಂತಲೂ ಅಧಿಕ ಮತಗಳಿಂದ ಗೆಲ್ಲಿಸಿ ತರ್ತೇವೆ ಅಂತ ಶಿಲ್ಪಾ ಶೆಟ್ಟರ್ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ