Karnataka Assembly Election 2023: ಮೇ 10ಕ್ಕೆ ರಾಜ್ಯ ವಿಧಾನಸಭಾ ಚುನಾವಣೆಯ ವೇದಿಕೆ ಸಿದ್ಧವಾಗಿದೆ. ಮೇ 13ರಂದು ಅಧಿಕಾರ ಚುಕ್ಕಾಣಿ ಯಾರಿಗೆ ಎಂಬ ನಿರ್ಧಾರ ಹೊರಬೀಳಲಿದೆ. ಕಾಂಗ್ರೆಸ್ನ ಡಿಕೆಶಿ, ಸಿದ್ದರಾಮಯ್ಯ, ಬಿಜೆಪಿಯ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ, ದೇವೇಗೌಡ ಅವರ ಚಾಣಾಕ್ಯ ನೀತಿಗಳು, ನಿರ್ಧಾರಗಳು, ಘೋಷಣೆಗಳು ಈ ಎಲ್ಲವೂ ಜನತೆಯನ್ನು ಓಲೈಸಿದೆಯಾ? ಎಂಬುದು ಫಲಿತಾಂಶದ ದಿನ ಗೊತ್ತಾಗಲಿದೆ.
ಎಲ್ಲಾ ಪಕ್ಷಗಳು ಅಳೆದು ತೂಗಿ ಅಭ್ಯರ್ಥಿಗಳನ್ನು ಚುನಾವಣಾ ರಣರಂಗಕ್ಕೆ ತಯಾರು ಮಾಡಿವೆ. ಪ್ರತಿ ಕ್ಷೇತ್ರದ ನಾಡಿಮಿಡಿತ ಅರಿತ ನಾಯಕರು ಈ ಬಾರಿಯ ಚುನಾವಣೆಯ ಜಯ ಮಾಲೆಯನ್ನು ಧರಿಸುವ ತವಕದಲ್ಲಿದೆ.
ಭರ್ಜರಿ ತಯಾರಿಯಲ್ಲಿ ಕಾಂಗ್ರೆಸ್
ಕಾಂಗ್ರೆಸ್ ಈ ಬಾರಿಯ ಜಯಭೇರಿ ನಮ್ಮದೇ ಎಂಬ ವಿಶ್ವಾಸದಲ್ಲಿದ್ದು, ಭಾರತ್ ಜೋಡೋ ಯಾತ್ರೆಯ ಮೂಲಕ ಚುನಾವಣಾ ತಯಾರಿಗೆ ಮುನ್ನುಡಿ ಬರೆಯಿತು. ನಂತರ ರಾಜ್ಯದಲ್ಲಿ ಪ್ರಜಾಧ್ವನಿ ಯಾತ್ರೆ ಮೂಲಕ ರಾಜ್ಯದ ಉದ್ದಗಲಕ್ಕೂ ಸಂಚರಿಸಿತು. ಹೀಗೆ ತಮ್ಮದೇ ಸಿದ್ಧಾಂತಗಳ ಮೂಲಕ ಮತ ಕೇಳುತ್ತಿರುವ ಕಾಂಗ್ರೆಸ್ ಈ ಬಾರಿ ಹೊಸದಾಗಿ ರಚನೆಗೊಂಡ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ಚುನಾವಣೆಯ ಗೆಲುವಿನ ನಿರೀಕ್ಷೆಯಲ್ಲಿರುವ ಪಿ.ಟಿ.ಪರಮೇಶ್ವರ್ ನಾಯ್ಕ್ (PT Parameshwar Naik) ಅವರ ವೈಯಕ್ತಿಕ ಜೀವನ, ರಾಜಕೀಯ ಸಾಧನೆ, ವಿದ್ಯಾಭ್ಯಾಸದ ವಿವರ ಇಂತಿದೆ.
ಇದನ್ನೂ ಓದಿ: Rizwan Arshad: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ರಾಜಕೀಯ ಜೀವನ ಹೀಗಿದೆ
ವೈಯಕ್ತಿಕ ಜೀವನ
ಪಿ.ಟಿ.ಪರಮೇಶ್ವರ್ ನಾಯ್ಕ್ 1964ರ ಮೇ 11ರಂದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಬಳಿಯ ಲಕ್ಷ್ಮಿಪುರ ತಾಂಡಾದಲ್ಲಿ ಜನಿಸಿದ್ದು, ಪಿ. ಥಾವರ್ಯ ನಾಯ್ಕ ಹಾಗೂ ಗಂಗಿಬಾಯಿ ಇವರ ಪೋಷಕರು. ಬಿ.ಎ. ಪದವೀಧರರಾಗಿರುವ ಇವರ ಪತ್ನಿ ಪ್ರೇಮಾ. ಇವರಿಗೆ ಅವಿನಾಶ್ ಮತ್ತು ಭರತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ರಾಜಕೀಯ ಹೆಜ್ಜೆಗಳು
1987ರಲ್ಲಿಯೇ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಪಿ.ಟಿ.ಪರಮೇಶ್ವರ್ ನಾಯ್ಕ್ 1987ರಲ್ಲಿ ಹಿರೇಮ್ಯಾಗಳಗೇರಿ ಮಂಡಲ ಪಂಚಾಯಿತಿ ಸದಸ್ಯರಾಗಿದ್ದರು. 1993ರಲ್ಲಿ ಲಕ್ಷ್ಮಿಪುರ ತಾಂಡಾದ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. 1995ರಲ್ಲಿ ಹಡಗಲಿ ತಾಲೂಕು ಪಂಚಾಯಿತಿಯ ಹಿರೇ ಮ್ಯಾಗಳಗೇರಿ ಕ್ಷೇತ್ರದ ಸದಸ್ಯರಾಗಿ, 1997ರಲ್ಲಿ ಹರಪನಹಳ್ಳಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಸೇವೆಗೈದರು.
ಎರಡು ಬಾರಿ ಶಾಸಕರು
ಪಿ.ಟಿ.ಪರಮೇಶ್ವರ್ ನಾಯ್ಕ್ 1999ರಲ್ಲಿ ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿದರು. ತವರು ಜಿಲ್ಲೆಯಾದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ (ಮೀಸಲು) ವಿಧಾನಸಭೆ ಕ್ಷೇತ್ರದಿಂದ 1999 ಹಾಗೂ 2004ರಲ್ಲಿ ಸ್ಪರ್ಧಿಸಿದ ಇವರನ್ನು ತವರು ಕ್ಷೇತ್ರ ಕೈಬಿಡದೆ ಸತತ ಎರಡು ಬಾರಿ ಗೆಲುವು ಸಾಧಿಸಿ ಶಾಸಕರಾಗಿ ಮಾಡಿದ್ದರು ಜನತೆ.
ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?
ಸೋಲು ಅನುಭವಿಸಿದ್ದ ನಾಯ್ಕ್
2008ರಲ್ಲಿ ಪಿ.ಟಿ ಪರಮೇಶ್ವರ್ ನಾಯ್ಕ್ ಹೂವಿನ ಹಡಗಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಬಿ ಚಂದ್ರ ನಾಯಕ್ ವಿರುದ್ಧ 6,518 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು. ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿಯೇ ಸೋಲು ಅನುಭವಿಸಿದ ಅವರು ಆಗ ಕುಗ್ಗಲಿಲ್ಲ. ಸೋಲೇ ಗೆಲುವಿನ ಸೋಪಾನ ಎಂದು ನಂಬಿದ್ದ ಅವರು ಬಳಿಕ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯತ್ತ ಗಮನ ಹರಿಸಿ 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಚಂದ್ರ ನಾಯಕ್ ಅವರನ್ನು 40,810 ಮತಗಳ ಅಂತರದಲ್ಲಿ ಸೋಲಿಸಿ ಮೊದಲ ಬಾರಿ ಹಡಗಲಿ ಕ್ಷೇತ್ರದಲ್ಲಿ ಜಯಮಾಲೆ ಹಾಕಿಸಿಕೊಂಡರು.
2018ರ ವಿಧಾನಸಭಾ ಚುನಾವಣೆಯಲ್ಲಿ 9,178 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಪಿ.ಟಿ.ಪರಮೇಶ್ವರ್ ನಾಯ್ಕ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಬಾರಿ ಯಾರ ವಿರುದ್ಧ ಸಮರ?
ಪಿ.ಟಿ.ಪರಮೇಶ್ವರ್ ನಾಯ್ಕ್ ಅವರು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದರೆ, ಇವರ ವಿರುದ್ಧ ಬಿಜೆಪಿಯು ಎಸ್ ಸಿ ಸಮುದಾಯದ ಕೃಷ್ಣ ನಾಯ್ಕ್ ಎಂಬುವವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇನ್ನು ಜೆಡಿಎಸ್ನಿಂದ ಪುತ್ರೇಶ್ ಎಂಬುವವರು ಸ್ಪರ್ಧಿಸಿದ್ದಾರೆ. ಈ ಮೂವರು ಅಭ್ಯರ್ಥಿಗಳಲ್ಲಿ ಜಯದೇವತೆ ಯಾರ ಪಾಲಾಗಿದ್ದಾಳೆ ಎಂಬುದನ್ನು ಚುನಾವಣಾ ಬಳಿಕ ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ