ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕೇವಲ ಮೂರು ದಿನಗಳು ಬಾಕಿ ಇದೆ. ಇದರ ನಡುವೆಯೇ ಮಾಜಿ ಸಚಿವ ಎಚ್ಡಿ ರೇವಣ್ಣ (HD Revanna) ಹೊಸ ಬಾಂಬ್ ಹಾಕಿದ್ದಾರೆ. ಹಾಸನದಲ್ಲಿ (Hassan) ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿ ರೇವಣ್ಣ ಅವರು ನಮ್ಮ ಸಮ್ಮಿಶ್ರ ಸರ್ಕಾರ (Coalition Government) ಹೋಗಲು ಡಿ.ಕೆ ಶಿವಕುಮಾರ್ ಕಾರಣ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಅಂದು ಬಾಂಬೆಗೆ (Bombay) ಹೋಗಿದ್ದ ಶಾಸಕರು ಏನೆಲ್ಲಾ ಬೇಡಿಕೆ ಇಟ್ಟಿದ್ದರು, ದೆಹಲಿ (Delhi) ಹೈಕಮಾಂಡ್ನಿಂದ ಏನೆಲ್ಲಾ ಸಂದೇಶ ಬಂದಿತ್ತು ಎಂದು ವಿವರವಾಗಿ ಬಿಚ್ಚಿಟ್ಟಿದ್ದಾರೆ. ಕುಮಾರಣ್ಣ ಜೊತೆಗೆ ಇದ್ದುಕೊಂಡು ಏನೆಲ್ಲಾ ಮಾಡಿದರು ಅಂತ ತಿಳಿಸಿದ್ದಾರೆ.
ಕುಮಾರಣ್ಣನ ಸರ್ಕಾರ ತೆಗೆಯಲು ಜೋಡೆತ್ತು ಅನ್ನೋರು ಕಾರಣ
ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಅವರು, ಶಾಸಕರುಗಳು ಬಾಂಬೆಗೆ ಹೋದಾಗ ನಾನು ಸಿದ್ದರಾಮಯ್ಯ ಮನೇಲಿ ಕುಳಿತಿದ್ದೆ. ಸಿದ್ದರಾಮಯ್ಯ ಅವರಿಗೆ ಒಂದು ದೂರವಾಣಿ ಕರೆ ಬಂತು. ಅದರಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ರೇವಣ್ಣನ್ನು ಡಿಸಿಎಂ ಮಾಡುತ್ತೇವೆ ಅಂದರು. ಸಿದ್ದರಾಮಯ್ಯನವರೇ ನನಗೆ ಮೊಬೈಲ್ ನಲ್ಲಿ ಕೇಳಿಸಿಕೊಳ್ಳಪ್ಪಾ ಅಂತ ಕೇಳಿಸಿದ್ದರು. ಕುಮಾರಣ್ಣನ ಸರ್ಕಾರ ತೆಗೆಯಲು ಜೋಡೆತ್ತು ಅನ್ನೋರು ಕಾರಣ. ಈಗ ಹೇಳಲಿ ಸರ್ಕಾರ ತೆಗೆದಿದ್ದು ಯಾರು ಅಂತಾ ಸವಾಲು ಹಾಕಿದರು.
ಅಂದು ನನಗೆ ಡಿಸಿಎಂ ಅಧಿಕಾರದ ಆಸೆ ಇದ್ದಿದ್ದರೆ ಅವತ್ತೇ ಹೋಗಬಹುದಿತ್ತು. ಆದರೆ ನಾನು ಹಾಗೇ ಮಾಡಲಿಲ್ಲ. ಕುಮಾರಣ್ಣನ ಜೊತೆ ಇದ್ದುಕೊಂಡೆ ಒಳಗೆ ತೆಗೆಯಲು ಸಂಚು ಮಾಡಿದರು. 14 ತಿಂಗಳು ಕುಮಾರಣ್ಣ ನಿನ್ನನ್ನು ಬಿಟ್ಟರೆ ಬೇರೆ ಯಾರು ಇಲ್ಲ ಅಂತ ಎಲ್ಲೆಲ್ಲಿ ಬೋರ್ ಹೊಡೆಯಬೇಕೋ ಅಲ್ಲಿ ಹೊಡೆದಿದ್ದರು.
ಸಂತೋಷ್ ಓಡಾಡಿಕೊಂಡು ಓಪನ್ ಆಗಿ ಮಾಡಿದ್ದ. ಆದರೆ ಇವರು ಒಳಗೆ ಇದ್ದುಕೊಂಡು ಕೆಲಸ ಮಾಡಿದರು. ಈ ರಾಜ್ಯದಲ್ಲಿ ಜೋಡೆತ್ತು ಅಂದರೂ, ಅದ್ಕೆ ನಾನು ಕುಮಾರಣ್ಣನಿಗೆ ಹೇಳುತ್ತೇನೆ, ಒದೆಯುವ ಹಸುಗಳನ್ನು ಇಟ್ಟುಕೊಳ್ಳಬೇಡ, ಮೇವು ಕಡಿಮೆ ಆದರೆ ಅವು ಒದೆಯುತ್ತವೆ. ಅದೇ ರೀತಿ ಇವರು ಒಳಗೆ ಇದ್ದುಕೊಂಡು ಕೆಲಸ ಮಾಡಿದರು. ಆಗ ನಾನು ಆಸೆ ಪಟ್ಟಿದ್ದರೆ ಪಕ್ಷದ ಅಧ್ಯಕ್ಷರೊಂದಿಗೆ ನಾನು ಡಿಸಿಎಂ ಆಗುತ್ತಿದೆ ಎಂದು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ