ರಾಜ್ಯ ವಿಧಾನಸಭೆಯ ಚುನಾವಣೆಯ (Karnataka Assembly Elections) ಜಿದ್ದಾಜಿದ್ದಿ ಈ ಬಾರಿ ಜೋರಾಗಿಯೇ ಇದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ (BJP, Congress, JDS) ಮೂರು ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಾ ಭರ್ಜರಿ ತಯಾರಿಯಲ್ಲಿ ತೊಡಗಿವೆ. ಇನ್ನೊಂದೆಡೆ ಪಕ್ಷಾಂತರ ಪರ್ವ ಆರಂಭವಾಗಿದೆ. ಬಿಜೆಪಿ ಪಕ್ಷದವರು ಕಾಂಗ್ರೆಸ್ಗೆ, ಕಾಂಗ್ರೆಸ್ನವರು ಬಿಜೆಪಿಗೆ, ಕಾಂಗ್ರೆಸ್ನವರು ಜೆಡಿಎಸ್ಗೆ, ಹೀಗೆ ಅಭ್ಯರ್ಥಿಗಳು ಟಿಕೆಟ್ ಘೋಷಣೆಯಾದ ಬಳಿಕ ಟಿಕೆಟ್ ಕೈ ತಪ್ಪಿದವರು ಪಲಾಯನವಾದ ಅನುಸರಿಸುತ್ತಿದ್ದಾರೆ. ಇದು ಮೂರು ಪಕ್ಷಗಳು ಮೇಲೆ ಚುನಾವಣೆಯಲ್ಲಿ ಪ್ರಭಾವ ಬೀರುವ ಸಂಭವ ಹೆಚ್ಚಿದೆ. ಈ ಎಲ್ಲದರ ನಡುವೆ ಮೂರು ಪಕ್ಷಗಳು ತಮ್ಮ ರಾಜಕೀಯ ಲೆಕ್ಕಾಚಾರ ತಲೆಕೆಳಗಾದಂತೆ ನೋಡಿಕೊಳ್ಳಲು ನಾನಾ ಕಸರತ್ತನ್ನು ಅನುಸರಿಸುತ್ತಿವೆ.
ಈಗಾಗಲೇ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಕೊನೆಯ ಹಂತದಲ್ಲಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಕ್ಷೇತ್ರಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷವು ಶ್ರೀನಿವಾಸ್ ಮಾನೆ ಅವರ ಮೇಲೆ ವಿಶ್ವಾಸವಿಟ್ಟು, ಈ ಬಾರಿ ಚುನಾವಣೆಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ: Karnataka Election 2023: ಸಿಎಂ, ಸಚಿವರು, ಶಾಸಕರನ್ನು ಬದಲಾಯಿಸೋ ಧೈರ್ಯ ಮೋದಿಗೆ ಮಾತ್ರ ಇದೆ -ಬಸವರಾಜ ಬೊಮ್ಮಾಯಿ
ಹಾನಗಲ್ಲಿನ (Hangal) ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಇಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಶ್ರೀನಿವಾಸ್ ಮಾನೆ (Srinivas Mane) ಅವರು ದೃಢಸಂಕಲ್ಪ ಎಂಬ ಮಹಾಯಾತ್ರೆಯನ್ನು ಕೈಗೊಂಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನದ ಬದುಕು ಸಾಗಿಸಬೇಕೆಂಬ ಆಶಯದೊಂದಿಗೆ ರಾಜಕೀಯದಲ್ಲಿ ಕಾರ್ಯನಿರತನಾಗಿರುವ ಶ್ರೀನಿವಾಸ್ ಮಾನೆ ಅವರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ನಿಂದ ಬಿ ಫಾರ್ಮ್ ಪಡೆದಿರುವ ಇವರು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಶ್ರೀನಿವಾಸ್ ಮಾನೆ ಅವರ ಜನನ, ರಾಜಕೀಯ ಪಯಣ, ವೈಯಕ್ತಿಕ ಜೀವನ, ವಿದ್ಯಾಭ್ಯಾಸ, ಆಸ್ತಿಯ ವಿವರ, ಸೇರಿದಂತೆ ಅವರ ಕುರಿತಾದ ಸಂಪೂರ್ಣ ವೈಯಕ್ತಿಕ ವಿವರಗಳು ಇಲ್ಲಿವೆ.
ಬಾಲ್ಯದ ದಿನಗಳು
ಶ್ರೀನಿವಾಸ್ ಮಾನೆ ಅವರು ಆಗಸ್ಟ್ 06, 1974ರಂದು ಕುಂದಾನಗರಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಜನಿಸಿದರು. ತಂದೆ ವಿಷ್ಣುರಾವ್ ಮಾನೆ. ಪತ್ನಿ ಉಷಾ ಎಸ್. ಮಾನೆ., ರಾಜಸ್ಥಾನದ ಉದಯಪುರದಲ್ಲಿರುವ ಜನಾರ್ದನ್ ರಾಮನಗರ ರಾಜಸ್ಥಾನ ವಿಶ್ವವಿದ್ಯಾನಿಲಯದಿಂದ 2007ರಲ್ಲಿ ಬಿಕಾಂ ಪದವಿ ಪಡೆದುಕೊಂಡಿದ್ದಾರೆ. ಬಿಟಿಎಂ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರು ಕೂಡ ಆಗಿದ್ದಾರೆ. ಇನ್ನು ಇವರ ಪತ್ನಿಯೂ ಕೂಡ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯ ಪಯಣ
ಶ್ರೀನಿವಾಸ್ ಮಾನೆ ಅವರು ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ. ನವೆಂಬರ್ 2, 2021 ರಂದು ಶಾಸಕರಾಗಿ ಆಯ್ಕೆಯಾದರು. ಅವರು 2010 ರಿಂದ 2021ರವರೆಗೆ ವಿಧಾನ ಪರಿಷತ್ತಿನಲ್ಲಿ ಧಾರವಾಡ ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು.
ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಅವರು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಹಾಗೂ ಜೆಡಿಎಸ್ ಅಭ್ಯರ್ಥಿ ಮನಹೋರ್ ತಹಶೀಲ್ದಾರ್ ಮತ್ತು ಎಎಪಿ ಪಕ್ಷದ ಸಾಯಿಕುಮಾರ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ನಾಮಪತ್ರ ಸಲ್ಲಿಕೆ
ವಿಧಾನಸಭೆ ಚುನಾವಣೆಗೆ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀನಿವಾಸ್ ಮಾನೆ ಅವರು ಏ.17ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ನಾಮ ಪತ್ರ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: Karnataka Election 2023: ಬೆಂಗಳೂರಿಗೆ ಕಳಪೆ ಮತದಾನದ ಅಪಖ್ಯಾತಿ ತಪ್ಪಿಸಲು BBMPಯಿಂದ ಸರ್ವ ಪ್ರಯತ್ನ; ಮನೆ ಮನೆಗೆ ಜಾಗೃತಿ!
ಪ್ರಕರಣ
ಸರಿಸುಮಾರು ಆರು ಕೋಟಿಗೂ ಹೆಚ್ಚು ಆಸ್ತಿಯ ಒಡೆಯರಾಗಿರುವ ಇವರು ಯಾವುದೇ ಕ್ರಿಮಿನಲ್ ಪ್ರಕರಣ ಹೊಂದಿಲ್ಲದ ರಾಜಕಾರಣಿಯಾಗಿದ್ದಾರೆ. ಹಾನಗಲ್ ಕ್ಷೇತ್ರದಿಂದ ಈ ಬಾರಿಯೂ ಶ್ರೀನಿವಾಸ್ ಮಾನೆ ಗೆಲ್ತಾರೋ ಇಲ್ಲಾ ಸೋಲ್ತಾರೋ ಅನ್ನೋ ಗೊಂದಲಕ್ಕೆ ಫಲಿತಾಂಶದ ದಿನ ತೆರೆ ಬೀಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ