ಬೆಂಗಳೂರು(ಸೆ. 30): ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನವೆಂಬರ್ 3ರಂದು ಮತದಾನ ನಿಗದಿಯಾಗಿದೆ. ನವೆಂಬರ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ತುಮಕೂರು ಜಿಲ್ಲೆಯಲ್ಲಿರುವ ಶಿರಾ ಕ್ಷೇತ್ರವು ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿತ್ತು. ಬೆಂಗಳೂರು ನಗರದ ಹೊರವಲಯದ ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ಅವರು ಬಿಜೆಪಿಗೆ ಪಕ್ಷಾಂತರಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳ್ಳುವುದರೊಂದಿಗೆ ಈ ಸ್ಥಾನ ತೆರವಾಗಿತ್ತು. ಈ ಎರಡು ಸ್ಥಾನಗಳ ಉಪಚುನಾವಣೆ ರಾಜ್ಯದ ಮೂರು ಪಕ್ಷಗಳಿಗೂ ಅಕ್ಷರಶಃ ಪ್ರತಿಷ್ಠೆಯ ವಿಚಾರವಾಗಿದೆ. ಆಡಳಿತಾರೂಢ ಬಿಜೆಪಿ, ವಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಈ ಉಪಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಅಭ್ಯರ್ಥಿಗಳು ಯಾರೇ ಆದರೂ ಇವೆರಡು ಕ್ಷೇತ್ರಗಳಲ್ಲಿ ಬಿ.ಎಸ್. ಯಡಿಯೂರಪ್ಪ, ಡಿಕೆ ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಮಧ್ಯೆ ನಡೆಯುತ್ತಿರುವ ಹಣಾಹಣಿ ಇದು ಎಂದು ಪರಿಗಣಿಸಲಾಗಿದೆ.
ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳೆರಡೂ ಕೂಡ ಹಳೆ ಮೈಸೂರು ಪ್ರದೇಶದಲ್ಲಿ ಬರುವಂಥವು. ಇಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಬಹಳಷ್ಟಿದೆ. ಇದೇ ಸಮುದಾಯದ ಡಿಕೆ ಶಿವಕುಮಾರ್ ಅವರಿಗೆ ಈ ಎರಡನ್ನೂ ಗೆಲ್ಲುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆರು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿಕೆಶಿ ಎದುರಿಸುತ್ತಿರುವ ಮೊದಲ ಚುನಾವಣಾ ಸವಾಲು ಇದು. ಇದರಲ್ಲಿ ಅವರು ಸೋಲೊಪ್ಪಿದರೆ ಅವರ ಸ್ಥಾನ ಅಲುಗಾಟ ಪ್ರಾರಂಭವಾಗಬಹುದು. ಹಲವು ಬಣಗಳಿರುವ ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಶಿವಕುಮಾರ್ ನಾಯಕತ್ವ ಪ್ರಶ್ನೆ ಮಾಡುವವರ ಸಂಖ್ಯೆ ಹೆಚ್ಚಬಹುದು. ಹೀಗಾಗಿ, ಡಿಕೆ ಶಿವಕುಮಾರ್ ಅವರು ಈ ಉಪಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಶಿರಾಗೆ ಇಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಎಚ್ಡಿ ಕುಮಾರಸ್ವಾಮಿ ಭೇಟಿ
ಕಾಂಗ್ರೆಸ್ ಪಕ್ಷ ಈಗಾಗಲೇ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಆರು ಬಾರಿ ಶಾಸಕರಾಗಿರುವ ಜಯಚಂದ್ರ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಲ್ಲಿ ಜೆಡಿಎಸ್ನ ಸತ್ಯನಾರಾಯಣ ಎದುರು ಸೋತಿದ್ದರು. ಈಗ ಅವರು ಗೆದ್ದು ತಮ್ಮ ಜನಪ್ರಿಯತೆಯನ್ನ ಸಾಬೀತು ಮಾಡುವ ಕಾತರತೆಯಲ್ಲಿದ್ದಾರೆ. ಈಗಾಗಲೇ ಅವರು ಕ್ಷೇತ್ರದಲ್ಲಿ ಪ್ರಚಾರ ಕೂಡ ಆರಂಭಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಸಂಘಟನಾ ಚಾತುರ್ಯ ಹಾಗೂ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ವರ್ಚಸ್ಸಿನಿಂದ ಶಿರಾ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಎನ್ನುವ ವಿಶ್ವಾಸ ಆ ಪಕ್ಷಕ್ಕೆ ಇದ್ದಂತಿದೆ.
ಇನ್ನೊಂದೆಡೆ, ಜೆಡಿಎಸ್ ಪಕ್ಷಕ್ಕೆ ತುಸು ಇಕ್ಕಟ್ಟಿನ ಸ್ಥಿತಿ ಇದೆ. ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅವರು ಸಮುದಾಯದ ಬಹಳಷ್ಟು ಮತಗಳನ್ನ ಸೆಳೆದುಬಿಡುವ ಸಾಧ್ಯತೆ ಇರುವುದರಿಂದ ಜೆಡಿಎಸ್ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ
ಇನ್ನು, ಶಿರಾದಲ್ಲಿ ಬಿಜೆಪಿಗೆ ಅಂಥ ನೆಲೆ ಇಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ 74,338 ಮತಗಳನ್ನ ಗಳಿಸಿದರೆ, ಕಾಂಗ್ರೆಸ್ 63,973 ಮತ ಪಡೆದಿತ್ತು. ಬಿಜೆಪಿಯ ಎಸ್.ಆರ್. ಗೌಡ ಅವರು ಕೇವಲ 16,959 ಮತಗಳನ್ನ ಪಡೆದಿದ್ದರು. ಈ ಬಾರಿ ಅಷ್ಟು ಸುಲಭಕ್ಕೆ ಸೋಲಪ್ಪಿಕೊಳ್ಳದಿರಲು ಸಿಎಂ ಯಡಿಯೂರಪ್ಪ ನಿರ್ಧರಿಸಿದಂತಿದೆ. ಕ್ಷೇತ್ರದಲ್ಲಿ ಬಹಳ ಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯದ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೊಲ್ಲ ಅಭಿವೃದ್ಧಿ ನಿಗಮವನ್ನ ಹುಟ್ಟುಹಾಕಿ ತಮ್ಮ ವರಸೆ ತೋರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ: 4 ಸಾವಿರ ನಕಲಿ ಮತದಾರರ ಸೃಷ್ಟಿ - ಜೆಡಿಎಸ್ ಅಭ್ಯರ್ಥಿ ಆರೋಪ
ಇತ್ತ, ಆರ್.ಆರ್. ನಗರ ವಿಧಾನಸಭಾ ಕ್ಷೇತ್ರವು ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಬೆಂಗಳೂರು ಗ್ರಾಮೀಣ ಕ್ಷೇತ್ರವು ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರವೂ ಇದಾಗಿದೆ. ಈ ಕ್ಷೇತ್ರದಲ್ಲಿ ತಾನು ಹೊಂದಿರುವ ಬಲವನ್ನು ಆರ್.ಆರ್. ನಗರದಲ್ಲಿ ಮುಂದುವರಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಬಿಜೆಪಿಯಿಂದ ಯಾವ ಅಭ್ಯರ್ಥಿ ನಿಲ್ಲುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಿಲ್ಲ. ಕಾಂಗ್ರೆಸ್ನಿಂದ ಗೆದ್ದು ಬಿಜೆಪಿಗೆ ವಲಸೆ ಬಂದಿದ್ದ ಮುನಿರತ್ನ ಅವರು ಟಿಕೆಟ್ ಪಡೆಯಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಮುನಿರತ್ನ ಜೊತೆ ಬಿಜೆಪಿಗೆ ಬಂದಿದ್ದ ಇತರ ಬಹುತೇಕ ಶಾಸಕರಿಗೆ ಉಪಚುನಾವಣೆಗಳಲ್ಲಿ ಟಿಕೆಟ್ ಸಿಕ್ಕಿತ್ತು. ಅದೇ ರೀತಿ ಮುನಿರತ್ನಗೂ ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಆರ್.ಆರ್. ನಗರದಲ್ಲಿ ಜೆಡಿಎಸ್ ಪಕ್ಷ ದುರ್ಬಲ ಇಲ್ಲ. ಅದು ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಿದರೆ ತ್ರಿಕೋನ ಪೈಪೋಟಿ ನಡೆಯಬಹುದು. ಹಾಗಾದಲ್ಲಿ ಬಿಜೆಪಿಗೆ ತುಸು ಅನುಕೂಲವಾಗಬಹುದು. ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರದ ಫಲಿತಾಂಶ ಏನೇ ಬಂದರೂ ಯಡಿಯೂರಪ್ಪ ಸರ್ಕಾರಕ್ಕೆ ಯಾವುದೇ ಅಪಾಯ ಆಗದೇ ಹೋದರೂ ಮೂರು ಪ್ರಮುಖ ಪಕ್ಷಗಳ ಪ್ರತಿಷ್ಠೆಯ ಪಣ ಇದಾಗಿರುವುದರಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
- ಡಿ.ಪಿ. ಸತೀಶ್, CNN-News18
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ