news18-kannada Updated:December 18, 2020, 6:57 PM IST
ಕನ್ನಡವಿವಿಉಳಿಸಿ ಅಭಿಯಾನ
ಬೆಂಗಳೂರು; ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಶುಕ್ರವಾರ (ಡಿ.18) ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ. ಕನ್ನಡ ವಿವಿಯನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬರೂ #ಕನ್ನಡವಿವಿಉಳಿಸಿ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿರುವ ಕನ್ನಡಿಗರು ಟ್ವಿಟರ್ನಲ್ಲಿ ಒಂದು ಗಂಟೆಯಲ್ಲಿ 1457 ಮಂದಿ #ಕನ್ನಡವಿವಿಉಳಿಸಿ ಹ್ಯಾಶ್ಟ್ಯಾಗ್ನೊಂದಿಗೆ ಟ್ವಿಟ್ ಮಾಡಿದ್ದು, ಟ್ರೆಂಡಿಂಗ್ನಲ್ಲಿ ಟಾಪ್ನಲ್ಲಿದೆ.
ರಾಜ್ಯ ಸರಕಾರವು 'ಹಂಪಿ ಕನ್ನಡ ವಿಶ್ವವಿದ್ಯಾಲ'ಯಕ್ಕೆ ಅಗತ್ಯ ಅನುದಾನ ಒದಗಿಸದೆ ನಿಧಾನವಾಗಿ ವಿಷವುಣಿಸಿ ಕೊಲ್ಲುತ್ತಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಟ್ಟಾಗಿ ನಿಂತು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕಿದೆ. ಹಾಗಾಗಿಯೇ ಈ ಟ್ವಿಟರ್ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ' ಎಂದು ಕರವೇ ಸಂಘಟನೆಯ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಇದನ್ನು ಓದಿ: ಗಾಂಜಾ ಸಿಗಲಿಲ್ಲ ಎಂದು ಮನೆಯ ಟೆರೇಸ್ ಮೇಲೆ ಹೂ ಕುಂಡಗಳಲ್ಲಿ ಗಾಂಜಾ ಬೆಳೆದ ಭೂಪ!
ವರ್ಷಕ್ಕೆ ಆರು ಕೋಟಿ ಅನುದಾನ ಬೇಡುವ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಈ ವರ್ಷನೀಡಿರುವ ಅನುದಾನ ಕೇವಲ 50 ಲಕ್ಷ ರುಪಾಯಿಗಳು. ಸಂಸ್ಥೆಯ ಗುತ್ತಿಗೆ ನೌಕರರಿಗೆ ಸಂಬಳ ಕೊಡಲು ಹಣವಿಲ್ಲದಷ್ಟು ವಿವಿ ಬಡವಾಗಿದೆ. ಹೀಗಿರುವಾಗ ಸಂಶೋಧನೆಯಂಥ ಕೆಲಸಗಳಿಗೆ ಹಣವೆಲ್ಲಿರಲು ಸಾಧ್ಯ? ರಾಜ್ಯ ಸರ್ಕಾರದ ಬಳಿ ವೋಟ್ ಬ್ಯಾಂಕ್ ರಾಜಕಾರಣ ನಡೆಸುವ ಉದ್ದೇಶದಿಂದ ಹೊಸಹೊಸ ಪ್ರಾಧಿಕಾರ ಸ್ಥಾಪಿಸಲು ಹಣವಿದೆ. ಆದರೆ ಏಕೈಕ ಕನ್ನಡ ವಿವಿಗೆ ಕೊಡಲು ಹಣವಿಲ್ಲವೆಂದರೆ ಹೇಗೆ? ಇದನ್ನು ನಾವು ಒಕ್ಕೊರಲಿನಿಂದ ಖಂಡಿಸಬೇಕಿದೆ ಎಂದು ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ. ಅವರ ಮನವಿಯಂತೆ ಟ್ವಿಟರ್ನಲ್ಲಿ ಕನ್ನಡಿಗರು #ಕನ್ನಡವಿವಿಉಳಿಸಿ ಹ್ಯಾಷ್ಟ್ಯಾಗ್ನೊಂದಿಗೆ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ.
Published by:
HR Ramesh
First published:
December 18, 2020, 6:57 PM IST