ಬೆಂಗಳೂರು (ಮಾ. 9): ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾವೇಶದ ಮೇಲೆ ಭಯೋತ್ಪಾದಕರು ಕಣ್ಣಿಟ್ಟಿದ್ದರು ಎಂಬ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಇಂದು ಕೂಡ ನಗರದ ಪ್ರಮುಖ ಭಾಗಗಳಲ್ಲಿ ನಿಗಾ ವಹಿಸಲಾಗಿದೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಆರ್ಎಸ್ಎಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ದಾಳಿ ನಡೆಸುವ ಬಗ್ಗೆ ಜಾಗತಿಕ ಭಯೋತ್ಪಾದನಾ ಸಂಘಟನೆಗಳ ನಡುವೆ ಚರ್ಚೆ ನಡೆದಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಐಎಸ್ಡಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಐಎಸ್ಡಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬೆಂಗಳೂರಿನಲ್ಲಿ ತೀವ್ರ ನಿಗಾ ವಹಿಸಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ಪೊಲೀಸರಿಂದ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು. ನಗರದೆಲ್ಲೆಡೆ ಐಎಸ್ಡಿ ಪೊಲೀಸರ ಹದ್ದಿನ ಕಣ್ಣಿಡಲಾಗಿತ್ತು.
ಇದನ್ನೂ ಓದಿ: ಕೊರೋನಾ ಭೀತಿ, ಸಾಂಸ್ಕೃತಿಕ ನಗರಿಯ ಶುಕವನ ಬಂದ್; ಗಣಪತಿ ಸಚ್ಜಿದಾನಂದ ಸ್ವಾಮೀಜಿಯೂ ಹಾಕಿದ್ದಾರೆ ಮಾಸ್ಕ್
ಮೋಹನ್ ಭಾಗವತ್ ಪಾಲ್ಗೊಂಡಿದ್ದ ಆರ್ಎಸ್ಎಸ್ ಸಮಾವೇಶದ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಾಜಿನಗರ, ಯಾರಬ್ ನಗರ, ಫ್ರೇಜರ್ ಟೌನ್, ಚಾಮರಾಜಪೇಟೆ, ಮೈಸೂರು ರಸ್ತೆ, ಇಲಿಯಾಸ್ ನಗರ, ಗುರಪ್ಪನಪಾಳ್ಯ ಸೇರಿದಂತೆ 10 ಸ್ಥಳಗಳಲ್ಲಿ ಗುಪ್ತಚರ ಇಲಾಖೆ ಸೂಚನೆಯಂತೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಪ್ರತಿ ಸ್ಥಳದಲ್ಲಿ ಏನಾದರೂ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿತ್ತು.
ಐಎಸ್ಡಿ ಹೊರಡಿಸಿದ್ದ ಪತ್ರದಲ್ಲಿ ಉಗ್ರರ ಆತಂಕದ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಮೋಹನ್ ಭಾಗವತ್ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಉಗ್ರರು ಸಂಚು ರೂಪಿಸಿದ್ದರು ಎಂದು ಮಾಹಿತಿ ಸಿಕ್ಕಿದ್ದರಿಂದ ಇಂದು ಕೂಡ ನಗರದಲ್ಲಿ ಎಚ್ಚರ ವಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ