ಗದಗ: ರಾಜ್ಯ ವಿಧಾನಸಭಾ ಚುನಾವಣೆಗೆ (Election) ನಿನ್ನೆ ಮತದಾನ ನಡೆದಿದ್ದು, 2615 ಅಭ್ಯರ್ಥಿಗಳ (Candidate) ಭವಿಷ್ಯ ಮತಪೆಟ್ಟಿಗೆಯಲ್ಲಿ ಸೀಲ್ ಆಗಿದೆ. ಈ ನಡುವೆ ಚುನಾವಣೆಯ ಫಲಿತಾಂಶದ (Result) ಬಗೆಗಿನ ಕುತೂಹಲ ಹೆಚ್ಚಾಗುತ್ತಿದ್ದು, ಚುನಾವಣೆಯ ಬಿಸಿಯಲ್ಲಿದ್ದ ಅಧಿಕಾರಿಗಳು ಮತ ಎಣಿಕೆಗೆ ಸಿದ್ಧತೆ ನಡೆಸಿದ್ದಾರೆ. ಇದರ ನಡುವೆಯೇ ಲೋಕಾಯುಕ್ತ (Lokayukta) ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ. ಗುತ್ತಿಗೆದಾರನಿಂದ ಲಕ್ಷ ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಜೂನಿಯರ್ ಇಂಜಿನಿಯರ್ (Junior Engineer) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗದಗ (Gadaga) ಬೆಗೇರಿ ನಗರಸಭೆ ಜೂನಿಯರ್ ಇಂಜಿನಿಯರ್ (ಜೆಇ) ವಿರೇಂದ್ರ ಸಿಂಗ್ ಕಾಟೆವಾಲೆ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಗುತ್ತಿಗೆದಾರನಿಂದ ಹಣ ಪಡೆಯುತ್ತಿದ್ದ ವೇಳೆ ಅಧಿಕಾರಿಗಳ ದಾಳಿ
ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಲು ಜೆಇ ವಿರೇಂದ್ರ ಸಿಂಗ್ ಹಣದ ಬೇಡಿಕೆ ಇಟ್ಟಿದ್ದರಂತೆ. ಈ ಬಗ್ಗೆ ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಜೆಇ ವಿರೇಂದ್ರ ಸಿಂಗ್ ಕಾಟೆವಾಲೆ ಅವರನ್ನು ಬಂಧಿಸಿದ್ದಾರೆ. ಗುತ್ತಿಗೆದಾರನಿಂದ 1 ಲಕ್ಷ 50 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ್ದರು.
ಇದನ್ನೂ ಓದಿ: Liquor Sale: ಮದ್ಯದಂಗಡಿ ಬಂದ್; ಸರ್ಕಾರದ ಬೊಕ್ಕಸಕ್ಕೆ 150 ಕೋಟಿ ನಷ್ಟ
ನಗರಸಭೆ ವ್ಯಾಪ್ತಿಯ ಕಾಮಗಾರಿಯ ಬಿಲ್ ಪಡೆಯಲು ಲಂಚಕ್ಕೆ ವಿರೇಂದ್ರ ಸಿಂಗ್ ಬೇಡಿಕೆ ಇಟ್ಟಿದ್ದಂತೆ. ಲಂಚದ ಹಣ ಪಡೆದು ವಾಹನದಲ್ಲಿ ಹಣ ಇಡುತ್ತಿದ್ದ ವೇಳೆ ಲೋಕಾಯುಕ್ತ ಎಸ್ಪಿ ಸತೀಶ್ ಎಸ್ ಚಿಟಗುಬ್ಬಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಸಿಪಿಐ ರವಿ ಪುರುಷೋತ್ತಮ, ಪಿಎಸ್ ಐ ಅಜಿತ್ ಕಲಾದಗಿ ಅವರು ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕಾರ್ಮಿಕ ನಿರೀಕ್ಷಕ ಪಿ ಚಂದ್ರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಂಗಡಿ ಪರವಾನಗಿ ನೀಡಲು 5 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಲಂಚದ ಹಣವನ್ನು ಕಡತದೊಳಗೆ ಇಟ್ಟು ಕಾರ್ಮಿಕ ನಿರೀಕ್ಷಕ ಪಿ.ಚಂದ್ರು ಪರಾರಿಯಾಗಿದ್ದರಂತೆ. ಆ ಬಳಿಕ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕಾರ್ಮಿಕ ನಿರೀಕ್ಷಕನನ್ನು ಬಂಧನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ