• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಹೆಚ್ಚಳವಾಗಲಿ; ಎಂಎನ್ ವೆಂಕಟಾಚಲಯ್ಯ

ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಹೆಚ್ಚಳವಾಗಲಿ; ಎಂಎನ್ ವೆಂಕಟಾಚಲಯ್ಯ

ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ

ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ

ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಅವರು ಏಕರೂಪದ ನಿವೃತ್ತಿ ವಯಸ್ಸು ನಿಗದಿಪಡಿಸುವುದರಿಂದ ಈಗ ಇರುವ ಅನೀತಿ ದೂರವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲಿ ಸ್ವಾತಂತ್ರ್ಯದ ಮನೋಭಾವ ಮೂಡುತ್ತದೆ ಎಂಬುದಾಗಿ ತಿಳಿಸಿದರು.

  • Share this:

    ಬೆಂಗಳೂರು (ಜೂನ್ 27): ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಏಕರೂಪವಾಗಿರಲಿ ಮತ್ತು ಅವರ ನಿವೃತ್ತಿ ವಯೋಮಿತಿ ಹೆಚ್ಚಳವಾಗಲಿ ಎಂದು ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ತಮ್ಮ 28 ವರ್ಷದ ಹಿಂದಿನ ಸಲಹೆಯನ್ನು ಪುನರುಚ್ಚರಿಸಿದ್ದಾರೆ.


    ಈಸ್ಟರ್ನ್‌ ಬುಕ್‌ ಕಂಪೆನಿ ಶನಿವಾರ ಆಯೋಜಿಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ವಿರಚಿತ ʼಅನಾಮಲೀಸ್‌ ಇನ್‌ ಲಾ ಆ್ಯಂಡ್ ಜಸ್ಟೀಸ್‌: ರೈಟಿಂಗ್ಸ್‌ ರಿಲೇಟೆಡ್‌ ಟು ಲಾ ಅಂಡ್‌ ಜಸ್ಟೀಸ್‌ʼ ಕೃತಿಯ ಬಿಡುಗಡೆ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    “ಎಲ್ಲಾ ನ್ಯಾಯಮೂರ್ತಿಗಳು ಒಂದೇ ವಯಸ್ಸಿನಲ್ಲಿ ನಿವೃತ್ತರಾಗಬೇಕು, 62 ಅಥವಾ 65ನೇ ವಯಸ್ಸಿನಲ್ಲಿ ಅಲ್ಲ ಬದಲಿಗೆ 68 ನೇ ವಯಸ್ಸಿನಲ್ಲಿ!” ಎಂದು ಎಂ ಎನ್ ವೆಂಕಟಾಚಲಯ್ಯ ಅವರು ಹೇಳಿದರು. 1993ರಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದಲ್ಲಿ ತಾವು ಇದೇ ರೀತಿಯ ಸಲಹೆ ನೀಡಿದ್ದಾಗಿ ಸ್ಮರಿಸಿದರು. ಅಲ್ಲದೇ “ನ್ಯಾಯಮೂರ್ತಿಗಳು 62ನೇ ವರ್ಷದಲ್ಲಿ ಏಕೆ ನಿವೃತ್ತರಾಗಬೇಕು? ಭಾರತದಲ್ಲಿ ಮನುಷ್ಯನ ಸರಾಸರಿ ಜೀವಿತಾವಧಿ ಸ್ವಾತಂತ್ರ್ಯ ಬಂದ ಅವಧಿಯಲ್ಲಿ 27 ವರ್ಷ ಇತ್ತು, ಈಗ ಅದು 67 ವರ್ಷಕ್ಕೆ ಏರಿಕೆಯಾಗಿದೆ" ಎಂದರು. ಈಗ ಹೈಕೋರ್ಟ್‌ ನ್ಯಾಯಮೂರ್ತಿಗಳು ತಮ್ಮ 62 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಿದ್ದರೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ ಆಗಿದೆ.


    ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಕೃತಿ ಬಿಡುಗಡೆಗೊಳಿಸಿದರು. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌ ಸಿ ಲಹೋಟಿ, ನಿವೃತ್ತ ನ್ಯಾಯಮೂರ್ತಿಗಳಾದ ಬಿ ಎನ್‌ ಕೃಷ್ಣ, ಕೃತಿಕಾರ ನ್ಯಾ. ಆರ್‌ ವಿ ರವೀಂದ್ರನ್‌ ಚರ್ಚೆಯಲ್ಲಿ ಪಾಲ್ಗೊಂಡರು. ಹಿರಿಯ ನ್ಯಾಯವಾದಿ ಅರವಿಂದ್‌ ಪಿ ದಾತಾರ್‌ ಕಾರ್ಯಕ್ರಮ ನಡೆಸಿಕೊಟ್ಟರು.


    ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸಿನ ವಿವಾದದ ಜೊತೆಗೆ ಪ್ರಕರಣಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬದ ಕುರಿತೂ ಚರ್ಚೆ ನಡೆಯಿತು. ಪ್ರಕರಣಗಳು ಬಾಕಿ ಉಳಿಯುವುದನ್ನು ತಪ್ಪಿಸಲು ಸಂವಿಧಾನದ 224 ಎ ವಿಧಿಯಡಿ ಹೆಚ್ಚುವರಿ ನ್ಯಾಯಾಧೀಶರನ್ನು ನೇಮಕ ಮಾಡುವ ಕುರಿತಾದ ಇತ್ತೀಚಿನ ಪ್ರಕರಣವನ್ನು ದಾತಾರ್‌ ಪ್ರಸ್ತಾಪಿಸಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾ. ಲಹೋಟಿ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳಿಬ್ಬರಿಗೂ ಏಕರೂಪದ ನಿವೃತ್ತಿ ವಯಸ್ಸು ಘೋಷಿಸಬೇಕು. “ಇದರಿಂದ ಅನಗತ್ಯ ಸ್ಪರ್ಧೆ ತಪ್ಪಿ ದಿನೇ ದಿನೇ ಕಳೆದು ಹೋಗುತ್ತಿರುವ ಹೈಕೋರ್ಟ್‌ ನ್ಯಾಯಮೂರ್ತಿಗಳ ಘನತೆ ಮರಳಿ ದೊರೆಯುತ್ತದೆ” ಎಂದರು.


    ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಅವರು ಏಕರೂಪದ ನಿವೃತ್ತಿ ವಯಸ್ಸು ನಿಗದಿಪಡಿಸುವುದರಿಂದ ಈಗ ಇರುವ ಅನೀತಿ ದೂರವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲಿ ಸ್ವಾತಂತ್ರ್ಯದ ಮನೋಭಾವ ಮೂಡುತ್ತದೆ ಎಂಬುದಾಗಿ ತಿಳಿಸಿದರು.


    ಇದನ್ನು ಓದಿ: ಕಾಂಗ್ರೆಸ್‌ನಲ್ಲಿ ಉದಯವಾಯ್ತು ಥರ್ಡ್ ಫ್ರಂಟ್; ಸಿಎಂ ಗಾದಿಗಾಗಿ ದಲಿತ‌ ಅಸ್ತ್ರ..!


    ನ್ಯಾ. ರವೀಂದ್ರನ್ ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡರು. ಆದರೆ ನಿವೃತ್ತಿ ವಯಸ್ಸು ಹೆಚ್ಚಳ ಮಾಡುವುದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮಾತ್ರ ಸೀಮಿತವಾಗಬಾರದು. ಬದಲಿಗೆ ಅಧೀನ ನ್ಯಾಯಾಲಯಗಳಿಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನೀಡಿದಂತೆ ಅಲ್ಲದಿದ್ದರೂ ಅವರ ನಿವೃತ್ತಿ ವಯೋಮಿತಿಯನ್ನು 62 ವರ್ಷಗಳಿಗೆ ಸಲೀಸಾಗಿ ಹೆಚ್ಚಿಸಬಹುದು ಎಂದರು.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: