ಹಾಸನ: ಮುಂಬರುವ ಚುನಾವಣೆಯಲ್ಲಿ ಅರಕಲಗೂಡು (Arakalagoodu) ಕ್ಷೇತ್ರದ ಟಿಕೆಟ್ ಅನ್ನು ಎ.ಟಿ. ರಾಮಸ್ವಾಮಿ (AT Ramaswamy) ಅವರಿಗೆ ನೀಡಬಾರದು ಎಂದು ಆಗ್ರಹಿಸಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ನೂರಾರು ಜೆಡಿಎಸ್ (JDS) ಕಾರ್ಯಕರ್ತರು ಮಾಜಿ ಸಚಿವ ಎಚ್ಡಿ ರೇವಣ್ಣ (HD Revanna) ಅವರ ಮನೆಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆದಿದೆ. ಹೊಳೆ ನರಸೀಪುರದಲ್ಲಿ (Holenarasipura) ಇರುವ ಜೆಡಿಎಸ್ ನಾಯಕ ಎಚ್ಡಿ ರೇವಣ್ಣ ಅವರ ಮನೆಗೆ ಆಗಮಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು, ಎ.ಟಿ. ರಾಮಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಕಾರ್ಯಕರ್ತರು ಎಚ್ಡಿ ರೇವಣ್ಣ ಮನೆಗೆ ಮುತ್ತಿಗೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅರಕಲಗೂಡಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರಜ್ವಲ್ ರೇವಣ್ಣ, ಅರಕಲಗೂಡು ಟಿಕೆಟ್ ಯಾರಿಗೆಂದು ಇನ್ನೂ ಚರ್ಚೆ ಆಗಿಲ್ಲ. ನಿನ್ನೆ ಕಾರ್ಯಕರ್ತರು ಬಂದಿದ್ರು, ಕುಳಿತು ಮಾತನಾಡೋಣ ಎಂದಿದ್ದಾರೆ. ಹಿರಿಯರು, ಎಲ್ಲಾ ಮುಖಂಡರು ಅರಕಲಗೂಡು ಭಾಗದ ಎಲ್ಲಾ ಕಾರ್ಯಕರ್ತರನ್ನು ಕರೆಸಿ ಮಾತನಾಡೋಣ ಅಂತ ರೇವಣ್ಣ ಸಾಹೆಬ್ರು ಹೇಳಿ ಕಳುಹಿಸಿದ್ದಾರೆ. ಈ ವಾರದೊಳಗೆ ಎಲ್ಲರನ್ನೂ ಕರೆದು ಕುಳಿತು ಮಾತನಾಡೋಣ, ಏನು ತೊಂದರೆಯಿಲ್ಲ. ನಿನ್ನೆಯ ಈ ವಿಚಾರವನ್ನು ನಾವು ಇದುವರೆಗೆ ಚರ್ಚೆ ಮಾಡಿಲ್ಲ ಎಂದರು.
'ಯಾರೇ ಬಂದ್ರೂ 7 ಸ್ಥಾನ ಗೆಲ್ತೀವಿ'
ಇನ್ನು ಜೆಡಿಎಸ್ನ ಇಬ್ಬರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್, ಅವರ ಜೊತೆ ಇಬ್ಬರು, ಮೂವರು, ನಾಲ್ಕು ಜನ ಇದ್ದಾರೋ ನನಗೆ ಗೊತ್ತಿಲ್ಲ. ಅದನ್ನ ಅವರೇ ಹೇಳಬೇಕು. ಆದರೆ ನಿನ್ನೆಯ ವಾತಾವರಣ ನೋಡಿದ್ರೆ, ಮೂರು ದಿನದ ಹಿಂದೆ ಎರಡು ಲಕ್ಷ ಜನ ಸೇರಿಸಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡ್ತೇವೆ ಅಂತ ಪಕ್ಷದ ಜಿಲ್ಲಾಧ್ಯಕ್ಷರು ಹೇಳಿದ್ದರು. ಇಡೀ ಜಿಲ್ಲೆ ತಿರುಗಿ ನೋಡುವ ಕಾರ್ಯಕ್ರಮ ಮಾಡ್ತಿನಿ ಅಂದಿದ್ರು. ನಿನ್ನೆ ವಾತಾವರಣ ನೋಡಿದ್ರೆ ಕಾಂಗ್ರೆಸ್ ಇಲ್ಲಿ ಒಂದೇ ಒಂದು ಸೀಟು ಗೆಲ್ಲುವ ವಾತಾವರಣ ಕಾಣ್ತಿಲ್ಲ. ಏಕೆಂದರೆ ಜಿಲ್ಲಾ ಕಾರ್ಯಕ್ರಮದಲ್ಲಿ ಸುಮಾರು ಆರರಿಂದ ಏಳು ಸಾವಿರ ಸೇರ್ತಾರೆ ಅಂದ್ರೆ ನಾವು ಹೋಬಳಿ ಕಾರ್ಯಕ್ರಮ ಮಾಡಿದ್ರೆ ಹತ್ತು ಸಾವಿರ ಜನ ಸೇರ್ತಾರೆ. ಜೆಡಿಎಸ್ ಕಾರ್ಯಕರ್ತರು ಬಲವಾಗಿದ್ದಾರೆ. ಯಾರೇ ಬಂದ್ರೂ ಎದುರಿಸಿ ಏಳಕ್ಕೆ ಏಳೂ ಸ್ಥಾನಗಳನ್ನು ಗೆಲ್ಲುವ ಕೆಲಸ ಮಾಡ್ತೇವೆ ಎಂದರು.
'ಈ ಸಲ ಸೋಲೋಕೆ ಸಾಧ್ಯವಿಲ್ಲ'
ಇನ್ನು ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ಕಳೆದ ಬಾರಿ ಚುನಾವಣೆಗೂ ಈ ಬಾರಿ ಚುನಾವಣೆಗೂ ವ್ಯತ್ಯಾಸ ಇರುತ್ತೆ. ಹೋದ ಬಾರಿ ಚುನಾವಣೆಯಲ್ಲಿ ಎಚ್ಎಸ್ ಪ್ರಕಾಶ್ ಆರೂವರೆ ಸಾವಿರ ಮತಗಳಿಂದ ಸೋತಿದ್ರು. ಅದಾದ ಒಂದು ವರ್ಷಕ್ಕೆ ಎಂಪಿ ಚುನಾವಣೆಗೆ ನಾನು ನಿಂತಾಗ ಅದೇ ಕ್ಷೇತ್ರದಲ್ಲಿ ಹದಿನಾರು ಸಾವಿರ ಲೀಡ್ ತಗೊಂಡೆ. ಈ ಚುನಾವಣೆಯಲ್ಲಿ ಹಾಸನ ತಾಲ್ಲೂಕಿನ ಜನ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಖಂಡಿತವಾಗಿಯೂ ನೂರಕ್ಕೆ ನೂರು ಭಾಗ ಗೆಲ್ತೀವಿ ಎಂದರು ಹೇಳಿದರು.
ಇದನ್ನೂ ಓದಿ: Vijayapura: ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ಗೆ ಭಾರೀ ಆಘಾತ; ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಸಾವು
'ಜೆಡಿಎಸ್ ಬಿ ಟೀಂ ಹೇಳಿ ಬಿಜೆಪಿಗೆ ಪ್ಲಸ್ ಆಯ್ತು'
ಜೆಡಿಎಸ್ಗೆ ಓಟು ಹಾಕಿದ್ರೆ, ಬಿಜೆಪಿಗೆ ಓಟು ಹಾಕಿದಂತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆಯೂ ಮಾತನಾಡಿದ ಪ್ರಜ್ವಲ್, ಈ ತರ ಕಳೆದ ಬಾರಿ ಹೇಳಿ ಅವರೇ ಇನ್ಡೈರೆಕ್ಟಾಗಿ ಬಿಜೆಪಿ ಅಧಿಕಾರಕ್ಕೆ ಬರೋ ಹಾಗೆ ಮಾಡಿದ್ರು. ಹಾಗಾಗಿ ನಿಜವಾಗ್ಲೂ ಸೆಕ್ಯೂಲರ್ ಅಲ್ಲಾ ಕೋಮುವಾದಿನ ಅಂತ ಅವರಿಗೆ ಪ್ರಶ್ನೆ ಹಾಕಬೇಕು. ಕಳೆದ ಬಾರಿ ಹೀಗೆ ಹೇಳಿಲ್ಲ ಅಂದಿದ್ರೆ 35 ಸೀಟ್ ಹೆಚ್ಚು ಬರ್ತಿತ್ತು. ಬೀ ಟೀಂ, ಬೀ ಟಿಂ ಅಂತ ಹೇಳಿ ಹಾಸನದಲ್ಲಿ ಬಿಜೆಪಿ ಎಂಎಲ್ಎ ಬರಲು ಕಾರಣಕರ್ತರು ಯಾರು? ಪಾವಗಡದಲ್ಲಿ 300 ವೋಟಿನಿಂದ ಸೋಲಲು ಕಾರಣ ಯಾರು? ಮುಸಲ್ಮಾನ ಜನಾಂಗದವರು ಕೈಕೊಟ್ಟಿದ್ದಕ್ಕೆ 35-40 ಸೀಟ್ ನಾವು ಕಳೆದುಕೊಂಡೆವು. ಅದೆಲ್ಲಾ, ಬಿಜೆಪಿಗೆ ಪ್ಲಸ್ ಆಯ್ತು. ಇವರಿಗೆ ಒಂದು ಕಡೆ ಜೆಡಿಎಸ್ ತುಳಿಬೇಕು ಅಂತಿದ್ರೆ, ಎಲ್ಲೋ ಒಂದು ಕಡೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಆಸಕ್ತಿ ಇರಬಹುದು ಅನ್ಸುತ್ತೆ ಎಂದರು.
ಹಾಸನ ಜಿಲ್ಲೆಯಲ್ಲಿ ಏಳರಲ್ಲಿ ಆರು ಕ್ಷೇತ್ರಗಳನ್ನು ಗೆಲ್ತೀವಿ ಎಂಬ ಸಹೋದರ, ಎಂಎಲ್ಸಿ ಸೂರಜ್ರೇವಣ್ಣ ಹೇಳಿಕೆಗೆ ರಿಯಾಕ್ಟ್ ಮಾಡಿದ ಪ್ರಜ್ವಲ್, ಎಂಎಲ್ಸಿ ಆಗಿರುವುದರಿಂದ ಅವರು ಹೆಚ್ಚಾಗಿ ಒಂದು ಕಡೆ ಗಮನ ವಹಿಸ್ತಾರೆ. ಆದರೆ ಮೂರು, ನಾಲ್ಕು ತಿಂಗಳುಗಳಿಂದ ಅರಸೀಕೆರೆ ಜನ ನಮಗೆ ಒಲವು ತೋರಿಸುತ್ತಿದ್ದಾರೆ. ಒಂದೊಂದು ಸಮುದಾಯದ ಮುಖಂಡರು ಸಭೆ ನಡೆಸುತ್ತಿದ್ದಾರೆ. ಯಾರೇ ಅಭ್ಯರ್ಥಿ ಆದ್ರೂ ನಿಮ್ಮ ಜೊತೆ ಇರ್ತೇವೆ ಅಂತಿದ್ದಾರೆ. ನಾನು ಅರಸೀಕೆರೆಯನ್ನು ಹೆಚ್ಚಾಗಿ ಗಮನಿಸುತ್ತಿದ್ದೇನೆ. ಸೂರಜ್ಗೆ ಅರಸೀಕೆರೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಅನ್ಸುತ್ತೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ