ಹಾಸನ(ಸೆ.29): ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಶಾಲೆ ಆರಂಭಿಸುವ ವಿಚಾರವಾಗಿ ಆತುರದ ನಿರ್ಧಾರ ಬೇಡ. ಇದಕ್ಕೆ ನನ್ನ ವಿರೋಧವಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಇಂದು ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಶಾಲಾ ಆರಂಭಿಸುವ ವಿಚಾರವಾಗಿ ಸೂಕ್ತವಾಗಿ ಪರಾಮರ್ಶೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಕೊರೋನಾ ಭಯ ಎಲ್ಲರಿಗೂ ಇದೆ. ಬಡಜನರ ಬಗ್ಗೆಯೂ ಸರ್ಕಾರ ಚಿಂತನೆ ಮಾಡಲಿ. ಮುಂಜಾಗ್ರತೆ ವಹಿಸದೆ ಯಾವುದೇ ತೀರ್ಮಾನ ಕೈಗೊಂಡರೆ ಅದು ದುಡುಕಿನ ನಿರ್ಧಾರವಾಗಲಿದೆ. ಪೋಷಕರು ಶಿಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರವಷ್ಟೇ ಕ್ರಮಕೈಗೊಳ್ಳುವುದು ಸೂಕ್ತ. ಆದರೆ ಖಾಸಗಿಯವರ ಒತ್ತಡದಿಂದ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸಿದರೆ ಅದಕ್ಕೆ ನನ್ನ ವಿರೋಧವಿದೆ.ಕೊರೋನಾದಂತಹ ಸಂಕಷ್ಟ ಸಮಯ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ 3 ಕಾಯ್ದೆಗಳನ್ನು ಜಾರಿ ಮಾಡಿರುವುದು ಅಗತ್ಯ ಇರಲಿಲ್ಲ. ಸರ್ಕಾರ ಯಾವ ವಿಚಾರದಲ್ಲಿ ವಿಪಕ್ಷಗಳ ಸಲಹೆ-ಸೂಚನೆಗಳನ್ನು ಪಡೆದಿದೆ ಎಂದು ಪ್ರಶ್ನಿಸಿದರು.
ಶಾಲಾ, ಕಾಲೇಜುಗಳಿಗೆ ನಿಯಮಾವಳಿ ಹೇಗೆ ಎಂಬುದರ ಬಗ್ಗೆ ತಿಳಿದು ಆರಂಭಿಸಬೇಕೆ ಹೊರತು ಖಾಸಗಿಯವರ ಒತ್ತಡದಿಂದ ಶಾಲಾ ಕಾಲೇಜು ಪ್ರಾರಂಭಿಸುವುದಕ್ಕೆ ನನ್ನ ವಿರೋಧ ಇದೆ ಎಂದರು.
ಇಂದು ಕೊರೋನಾ ಎಂಬ ಮಹಾಮಾರಿ ಆವರಿಸಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಆರಂಭವ ಮೊದಲು ಸ್ಥಿತಿ-ಗತಿ ಎಲ್ಲವನ್ನೂ ತಿಳಿದ ಬಳಿಕ ತರಗತಿ ಆರಂಭಿಸಬೇಕು. ಶಾಲೆ ಆರಂಭಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟದ್ದು, ಆದರೆ ಸರಿಯಾದ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅವೈಜ್ಞಾನಿಕ ನಿರ್ಧಾರದಲ್ಲಿ ಆತುರದ ನಡೆಯಲಾಗಲಿದೆ ಎಂದು ಆತಂಕವ್ಯಕ್ತಪಡಿಸಿದರು.
ಸರ್ಕಾರವು ಕೊರೋನಾ ಬಗ್ಗೆ ಎಷ್ಟು ಗಂಭೀರವಾಗಿ ನಿರ್ಧಾರ ಕೈಗೊಳ್ಳಲಿದೆ ಎಂಬುದು ಪ್ರಮುಖವಾಗಿದೆ. ಕೊರೋನಾ ಲಕ್ಷಣವುಳ್ಳವರ ಬಗ್ಗೆಯೂ ಗಮನ ಹರಿಸಿ. ಯೋಚಿಸಿ, ಚರ್ಚಿಸಿ ಮುಂದಿನ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಶಾಲಾ-ಕಾಲೇಜು ವಿಚಾರವಾಗಿ ಆಡಳಿತ ಪಕ್ಷದವರು ನನ್ನ ಸಲಹೆ ಕೇಳಿದರೆ, ಇದೆ ಉತ್ತರ ಕೊಡಲಾಗುವುದು. ಶಾಲಾ ಆರಂಭದ ವಿಚಾರದಲ್ಲಿ ಅವರ ನಿರ್ಧಾರ ನನಗೆ ಗೊತ್ತಿಲ್ಲ. ಮುಂಜಾಗ್ರತಾವಹಿಸದೇ ತೀರ್ಮಾನ ಕೈಗೊಂಡರೆ ಮುಂದೆ ಸಂಭವಿಸುವ ಅನಾಹುತಗಳಿಗೆ ಅದು ದುಡುಕಿನ ನಿರ್ಧಾರ ತೆಗೆದುಕೊಂಡಂತೆ ಎಂದು ಎಚ್ಚರಿಸಿದರು. ಸರಕಾರವು ಬಡ ಜನರ ಬಗ್ಗೆಯೂ ಚಿಂತನೆ ಮಾಡಬೇಕೆ ವರತು ಆತುರದ ನಿರ್ಧಾರ ಮಾಡಿದರೇ ಅದು ಮೂರ್ಖತನವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾ, ಕಾಲೇಜುಗಳಿಗೆ ನಿಯಮಾವಳಿ ಹೇಗೆ ಎಂಬುದು ಮೊದಲು ನಿರ್ಧಾರವಾಗಬೇಕು. ಇದನ್ನು ಪರಿಶೀಲಿಸಲು ಕಮಿಟಿ ಮಾಡುತ್ತಾರಾ ಎಂಬುದು ಮೊದಲು ಚರ್ಚೆಯಾಗಬೇಕು ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕೊರೋನಾ ಸಂದರ್ಭದಲ್ಲಿ ಸುಗ್ರಿವಾಜ್ಞೆ ಮೂಲಕ 3 ಬಿಲ್ ಪಾಸ್ ಮಾಡುವ ಅಗತ್ಯ ಇರಲಿಲ್ಲ. ಸರ್ಕಾರ ಯಾವ ವಿಚಾರದಲ್ಲಿ ವಿಪಕ್ಷಗಳ ಸಲಹೆ ಪಡೆದಿದ್ದರಾ ಎಂದು ಪ್ರಶ್ನೆ ಮಾಡಿದ ಅವರು ಖಾಸಗಿಯವರ ಒತ್ತಡದಿಂದ ಶಾಲಾ ಕಾಲೇಜು ಆರಂಭಿಸುವುದಕ್ಕೆ ನನ್ನ ಪೂರ್ಣ ವಿರೋಧ ಇದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ