ಬೆಂಗಳೂರು (ಜನವರಿ 20); ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಈ ಭ್ರಷ್ಟಾಚಾರ ಆರೋಪ ಬಂದಿದ್ದು ಹೇಗೆ? ಇದು ಎಂಥ ದೌರ್ಬಲ್ಯ? ಆತ್ಮಹತ್ಯೆ ಮಾಡಿಕೊಳ್ಳುವ ರೈತರು ದುರ್ಬಲ ಮನಸ್ಸಿನವರು ಎನ್ನುವ ಕೃಷಿ ಸಚಿವ ಬಿ.ಸಿ. ಪಾಟೀಲರು, ತಮ್ಮ ಹಣದ ದೌರ್ಬಲ್ಯದ ಬಗ್ಗೆ ಏಕೆ ಮಾತಾಡುವುದಿಲ್ಲವೇಕೆ? ರೈತನ ಸಂಕಷ್ಟದ ಪರಿಸ್ಥಿತಿಯನ್ನು ಗೇಲಿ ಮಾಡುವ ಬಿ.ಸಿ. ಪಾಟೀಲ್ ವರ್ತನೆಯೇ ದುರ್ಬಲ ಮನಸ್ಸಿನ ಪ್ರತೀಕ. ಅವರ ವರ್ತನೆ ಅಕ್ಷಮ್ಯ ಹೀಗಾಗಿ ಈ ಕೂಡಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಬಿ.ಸಿ. ಪಾಟೀಲ್ ಅವರಿಗೆ ರಾಜೀನಾಮೆ ಪಡೆದು ಸಂಪುಟದಿಂದ ಹೊರಹಾಕಬೇಕು ಎಂದು ಜೆಡಿಎಸ್ ಶಾಸಕರು ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಹಾಗೂ ಸಾರಾ ಮಹೇಶ್ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
ಸಚಿವ ಬಿ.ಸಿ. ಪಾಟೀಲ್ ವಿರುದ್ದ ಕಿಡಿಕಾರಿರುವ ಮಾಜಿ ಸಚಿವ ಸಾರಾ ಮಹೇಶ್, "ಕೃಷಿ ಇಲಾಖೆಯಲ್ಲಿ ವರ್ಗಾವಣೆ ಹೆಸರಿನಲ್ಲಿ ಸಚಿವರು, ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಇಲಾಖೆ ಸಿಬ್ಬಂದಿಯೇ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಈ ಭ್ರಷ್ಟಾಚಾರ ಆರೋಪ ಬಂದಿದ್ದು ಹೇಗೆ...? ಇದು ಎಂಥ ದೌರ್ಬಲ್ಯ...? ಆತ್ಮಹತ್ಯೆ ಮಾಡಿಕೊಳ್ಳುವ ರೈತರು ದುರ್ಬಲ ಮನಸ್ಸಿನವರು ಎನ್ನುವ ಕೃಷಿ ಸಚಿವ ಬಿ.ಸಿ. ಪಾಟೀಲರು ತಮ್ಮ ಹಣದ ದೌರ್ಬಲ್ಯದ ಬಗ್ಗೆ ಏಕೆ ಮಾತಾಡುವುದಿಲ್ಲ..?
ರೈತನ ಸಂಕಷ್ಟದ ಪರಿಸ್ಥಿತಿಯನ್ನು ಗೇಲಿ ಮಾಡುವ ಬಿ.ಸಿ. ಪಾಟೀಲ್ ವರ್ತನೆಯೇ ದುರ್ಬಲ ಮನಸ್ಸಿನ ಪ್ರತೀಕ. ಅವರ ವರ್ತನೆ ಅಕ್ಷಮ್ಯ. ಕೈಲಾದರೆ ರೈತರಿಗೆ ಒಳ್ಳೆದು ಮಾಡಿ, ಆದರೆ ಹೀಗೆಲ್ಲ ಮಾತನಾಡಬೇಡಿ. ಅಲ್ಲದೆ, ಕೃಷಿ ಇಲಾಖೆಯ ಸಿಬ್ಬಂದಿಯೇ ಮಾಡಿರುವ ಲಂಚದ ಆರೋಪದ ಕುರಿತು ಸ್ಪಷ್ಟನೆ ನೀಡಿ ಮೊದಲು ರೈತರ ಬಳಿ ಕ್ಷಮೆ ಕೇಳಿ" ಎಂದು ಕಿಡಿಕಾರಿದ್ದಾರೆ.
ಸಮಸ್ಯೆಗಳಿಗೆ ಸಿಕ್ಕು ಮಾನಸಿಕವಾಗಿ ಕುಗ್ಗಿಹೋದ ರೈತನೇ ಆತ್ಮಹತ್ಯೆ ಮಾಡಿಕೊಳ್ಳುವುದು. ರೈತನ ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು, ಸಂಕಷ್ಟಗಳಿಂದ ಪಾರು ಮಾಡಬೇಕಾದ್ದು ಜನಪ್ರತಿನಿಧಿಗಳು ಎನಿಸಿಕೊಂಡ, ಅದರಲ್ಲೂ ಕೃಷಿ ಇಲಾಖೆ ನೇತೃತ್ವ ವಹಿಸಿಕೊಂಡವರ ಹೊಣೆ. ಅದು ಬಿಟ್ಟು ಜೀವ ತೊರೆದ ರೈತನನ್ನು ಸಾವಿನ ನಂತರವೂ ಗೇಲಿ ಮಾಡುವುದು ವಿಕೃತಿ.
1/3
— C S Puttaraju (@CS_Puttaraju_) January 20, 2021
ಕುಸಿದ ರೈತನಿಗೆ ಶಕ್ತಿ ತುಂಬುವುದು ಬಿಟ್ಟು ಅವನನ್ನು 'ಮಾನಸಿಕ ದುರ್ಬಲ' ಎಂದು ಅಣಕಿಸುವುದು ಕೂಡ ದುರ್ಬಲ ಮನಸ್ಸುಗಳ ವರ್ತನೆಯೇ. ಬಿ.ಸಿ. ಪಾಟೀಲರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೃಷಿ ರಂಗದ ಅಭಿವೃದ್ಧಿಯತ್ತ ಗಮನಹರಿಸಬೇಕೇ ಹೊರತು, ಸುಪ್ತವಾಗಿರುವ ತಮ್ಮ ಮಾನಸಿಕ ದೌರ್ಬಲ್ಯವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಹೋಗಬಾರದು. 2/3
— C S Puttaraju (@CS_Puttaraju_) January 20, 2021
ಬಿ.ಸಿ. ಪಾಟೀಲ್ ಈ ಹಿಂದೆಯೂ ರೈತರ ಬಗ್ಗೆ ಇದೇ ರೀತಿಯ ಕ್ಷುಲ್ಲಕ ಹೇಳಿಕೆಗಳನ್ನು ನೀಡಿದ್ದರು. ಈಗಲೂ ಹಾಗೇ ಮಾತಾಡಿದ್ದಾರೆ. ರೈತರ ಕುರಿತು ಲಘುವಾಗಿ ಮಾತಾಡುವ, ಅವರ ಕಷ್ಟಗಳನ್ನು ಗೇಲಿ ಮಾಡಿರುವ ಬಿ.ಸಿ. ಪಾಟೀಲ್ ಅವರು ಕೂಡಲೇ ರೈತನ ಕ್ಷಮೆ ಕೇಳಬೇಕು. ಇನ್ನು ಮುಂದೆ ತಮ್ಮ ವರ್ತನೆಗೆ ಕಡಿವಾಣ ಹಾಕಿಕೊಳ್ಳಬೇಕು. 3/3
— C S Puttaraju (@CS_Puttaraju_) January 20, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ