ಹಾಸನ: ರಾಜ್ಯದಲ್ಲಿ ಕೊರೊನಾ(Corona) ಹೆಚ್ಚಳ ಹಿನ್ನೆಲೆಯಲ್ಲಿ ಹೇರಿರುವ ಕರ್ಫ್ಯೂ(Curfew) ನಡುವೆಯೂ ಕಾಂಗ್ರೆಸ್(Congress) ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಬಗ್ಗೆ ಆಡಳಿತಾರೂಢ ಬಿಜೆಪಿ(BJP) ಮಾತ್ರವಲ್ಲ, ಜೆಡಿಎಸ್ ಕೂಡ ಟೀಕಿಸಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ(HD Revanna) ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಗಂಭೀರ ಆರೋಪ ಮಾಡಿದರು. ಜನಕ್ಕೆ ಕಾಂಗ್ರೆಸ್ ಮೇಲೆ ಪ್ರೀತಿ ಇದ್ದರೆ ಸ್ವಯಂಪ್ರೇರಿತವಾಗಿ ಪಾದಯಾತ್ರೆಗೆ ಬರುತ್ತಿದ್ದರು. ಪಾದಯಾತ್ರೆಗೆ ಬಂದವರಿಗೆ 300 ರೂ. ಪೆಟ್ರೋಲ್ ಟೋಕನ್ ಏಕೆ ಕೊಡುತ್ತಿದ್ದಾರೆ. ಎಲ್ಲರಿಗೂ ಪೊಂಗಲ್, ಪಲಾವ್ ಏಕೆ ಮಾಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಜೆಡಿಎಸ್ ಅಂದರೆ ಭಯವಿದೆ, ಜೆಡಿಎಸ್ ಮುಗಿಸಲು ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಅದಕ್ಕಾಗಿ ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರುಚಿ ಕಂಡು ಆ ಹುದ್ದೆಯನ್ನು ಅವರೇ ಇಟ್ಟುಕೊಂಡಿದ್ದರು
ಮೇಕೆದಾಟು ಯೋಜನೆಗೆ ಜೆಡಿಎಸ್-ಬಿಜೆಪಿ ಎರಡು ಪಕ್ಷಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ರೇವಣ್ಣ ತಿರುಗೇಟು ಕೊಟ್ಟರು. ಈ ರಾಜ್ಯದಲ್ಲಿ ದೇವೇಗೌಡರು ನೀರಾವರಿ ಮಂತ್ರಿ ಆದ ಮೇಲೆ 30 ವರ್ಷಗಳು ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಆಳಿವೆ. ರಾಜ್ಯದಲ್ಲಿ ಹತ್ತು ವರ್ಷ ಬಿಜೆಪಿ, ಹತ್ತು ವರ್ಷ ಕಾಂಗ್ರೆಸ್ ಸರ್ಕಾರವಿತ್ತು. ಕೇಂದ್ರದಲ್ಲಿ ಹತ್ತು ವರ್ಷ ಯುಪಿಎ, ಎಂಟು ವರ್ಷ ಎನ್.ಡಿ.ಎ. ಸರ್ಕಾರವಿತ್ತು. ಸಮ್ಮಿಶ್ರ ಸರ್ಕಾರದಲ್ಲೂ ನೀರಾವರಿ ಮಂತ್ರಿ ಯಾರಿಗೂ ಕೊಟ್ಟಿರಲಿಲ್ಲ, ಅವರೇ ಗುತ್ತಿಗೆ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಈಗ ಮೆರವಣಿಗೆ ಹೊರಟಿರುವವರೇ ಜಲಸಂಪೂನ್ಮೂಲ ಸಚಿವರಾಗಿದ್ದರು. ಅದರಲ್ಲಿ ರುಚಿ ಕಂಡು ಆ ಹುದ್ದೆಯನ್ನು ಅವರೇ ಇಟ್ಟುಕೊಂಡಿದ್ದರು ಎಂದು ಡಿಕೆಶಿಗೆ ಮಾತಿನಲ್ಲೇ ತಿವಿದರು.
ಇದನ್ನೂ ಓದಿ: ಬೇಕಂತಲೇ ಸೋಂಕಿತನನ್ನು ನನ್ನ ಬಳಿ ಕಳುಹಿಸಿದ್ದಾರೆ, ನನ್ನನ್ನು ಪಾಸಿಟಿವ್ ಮಾಡಲು ಸಂಚು: DK Shivakumar
ಡಿಕೆಶಿಯದ್ದು ಉಪ್ಪಿನಕಾಯಿ ಪಾತ್ರ
ಬೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಬರುವ ಲೋಕನಾಥ್ ಅವರ ಉಪ್ಪಿನಕಾಯಿ ಪಾತ್ರಕ್ಕೆ ಡಿಕೆಶಿಯನ್ನು ಹೋಲಿಸಿ ರೇವಣ್ಣ ವ್ಯಂಗ್ಯ ಮಾಡಿದರು. ನಾಚಿಕೆಯಾಗಬೇಕು ಇವರಿಗೆ, ಇದು ದೊಂಬರಾಟ. ಈ ಹಿಂದೆ ನಮ್ಮನ್ನು ಕರೆದುಕೊಂಡು ಹೋಗಿ ದಸರಾ ನೋಡಿ, ಪ್ಯಾಲೇಸ್ ನೋಡಿ ಎನ್ನುತ್ತಿದ್ದರು. ಅದೇ ರೀತಿ ಇವರು ನಾವು ದುಡ್ಡು ಹೊಡೆಯುವುದು ನೋಡಿ, ಮೆರವಣಿಗೆ ನೋಡಿ ಎನ್ನುತ್ತಿದ್ದಾರೆ. ಸುಳ್ಳಿನಿಂದ ಜಾಸ್ತಿ ದಿನ ರಾಜಕೀಯ ನಡೆಯಲ್ಲ. ಈ ರಾಷ್ಟ್ರೀಯ ಪಕ್ಷದವರೇ ನೀರಾವರಿ ಮಂತ್ರಿಗಳಾಗಿದ್ದರು ಆಗ ಮಾಡಲಿಲ್ಲ. ಈಗ ನಮ್ಮ ಪಕ್ಷವನ್ನು ಎಳೆದು ತರುತ್ತಿದ್ದಾರೆ ಎಂದು ಕಡಿಕಾರಿದರು.
ಪೂಜೆ ಮಾಡಲು ಹೋಗಿ ದುಬುಕ್ ಅಂಥಾ ಬಿದ್ದಿದ್ದಾರೆ..
ಈ ಕಾಂಗ್ರೆಸ್ ಗೆ ಮಾನ-ಮರ್ಯಾದೆ ಇಲ್ಲ. ಯಾರೋ ಒಬ್ಬರು ಜ್ಯೋತಿಷಿ ನೀರಿನಲ್ಲಿ ಮುಳುಗಿ ಎಂದು ಹೇಳಿದ್ದಾರೆ. ಪೂಜೆ ಮಾಡಲು ಹೋಗಿ ದುಬುಕ್ ಅಂಥಾ ಬಿದ್ದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗೆ ಗ್ರಹಣ ಹಿಡಿದಿದೆ. ಈ ಪೂಜೆಯಿಂದನಾದರೂ ಗ್ರಹಣ ಹೋಗುತ್ತೆ ಅಂದುಕೊಂಡಿದ್ದಾನೆ ಎಂದು ವ್ಯಂಗ್ಯವಾಡಿದರು. ಜೆಡಿಎಸ್ ನೀರಾವರಿ ಯೋಜನೆಗಳಿಗೆ ತಡೆ ಒಡ್ಡಲ್ಲ ಇವರು ಕರೆದಾಗ ಪಾದಯಾತ್ರೆಗೆ ಹೋಗಲು ನಾವೇನು ಸುಮ್ಮನೆ ಕೂತಿಲ್ಲ. ನೀವು ಮಾಡಿರುವ ಕರ್ಮಕಾಂಡ, ನೀವು ರಾಜ್ಯಕ್ಕೆ ದ್ರೋಹ ಬಗೆದಿದ್ದೀರಿ. ನಮಗೆ ಚುನಾವಣೆ, ಅಧಿಕಾರ ಮುಖ್ಯವಲ್ಲ. ರಾಜ್ಯದ ನೀರಾವರಿ ಯೋಜನೆಗಳು, ನೆಲ, ಜಲ ಎಲ್ಲಾ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವುದೇ ನಮ್ಮ ಗುರಿ ಎಂದರು.
ಇದನ್ನೂ ಓದಿ: ನಾಳೆ ರಾಮನಗರಕ್ಕೆ ಸಚಿವ ಅಶ್ವತ್ಥ ನಾರಾಯಣ ಎಂಟ್ರಿ.. ಮತ್ತೆ DK Brothers ಜೊತೆ ಜಟಾಪಟಿ ಶುರುವಾಗುತ್ತಾ?
ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದ ಮಾದಪ್ಪನದೊಡ್ಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ರಾಜ್ಯ ಸರ್ಕಾರ, ನನ್ನ ಮೇಲೆ ಹಾಗೂ ಪಕ್ಷದ ಮೇಲೆ ದೊಡ್ಡ ಸಂಚು ರೂಪಿಸಿದೆ. ಹೇಗಾದರೂ ಮಾಡಿ ಈ ಪಾದಯಾತ್ರೆ ನಿಲ್ಲಿಸುವ ಸಂಚು ರೀಪಿಸಿದ್ದಾರೆ ಎಂದು ಆರೋಪಿಸಿದರು. ನಿನ್ನೆ ರಾತ್ರಿ ನನ್ನನ್ನು ಬಂದು ಭೇಟಿ ಮಾಡಿ, ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಹೇಳಿದ ಆರೋಗ್ಯ ಅಧಿಕಾರಿಗೆ ಪಾಸಿಟಿವ್ ಎಂದು ಹೇಳುತ್ತಿದ್ದಾರೆ. ಇವುಗಳ ಹಿಂದೆ ಬಿಜೆಪಿ ಸರ್ಕಾರದ ಷಢ್ಯಂತ್ರ ಇದೆ. ಕೋವಿಡ್ ಹೆಚ್ಚಾಗಿರುವುದು ರಾಜ್ಯ ಸರ್ಕಾರದಿಂದ, ಈ ಇರುವುದು ಬಿಜೆಪಿ ಓಮಿಕ್ರಾನ್. ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ನಂಬರ್ ಏರಿಕೆ ಮಾಡ್ತಿರುವ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ