1.ಅಮೆರಿಕ ಅಧ್ಯಕ್ಷರಾದ ನಂತರ ಭಾರತಕ್ಕೆ ಟ್ರಂಪ್ ಮೊದಲ ಭೇಟಿ
ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.23 ರಂದು ಗುಜರಾತಿನ ಅಹಮದಾಬಾದ್ ನಗರಕ್ಕೆ ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಸಾಬರ ನದಿ ದಡಕ್ಕೂ ತೆರಳಿ ನದಿಯ ಹರಿವನ್ನು ವೀಕ್ಷಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ನ್ಯೂಸ್ 18ಗೆ ತಿಳಿಸಿವೆ.
2. ಕೇರಳದ ವಿದ್ಯಾರ್ಥಿಯಲ್ಲಿ ಮಹಾಮಾರಿ ಕರೋನಾ ವೈರಸ್ ಪತ್ತೆ; ಹೆಚ್ಚಿದ ಭೀತಿ
ಚೀನಾದಲ್ಲಿ ಆತಂಕ ಹುಟ್ಟಿಸಿರುವ ಮಹಾಮಾರಿ ಕರೋನಾ ವೈರಸ್ ಭೀತಿ ಭಾರತದಲ್ಲಿಯೂ ಮೂಡಿದೆ. ದೇಶದಲ್ಲಿ ಈ ಸೋಂಕಿನ ಬಗ್ಗೆ ಕಟ್ಟೆಚ್ಚರವಹಿಸಿದ್ದು, ವಿದೇಶದಿಂದ ಆಗಮಿಸುವವರ ಆರೋಗ್ಯದ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಈ ನಡುವೆ, ಕೇರಳದ ವಿದ್ಯಾರ್ಥಿಯೊಬ್ಬರನ್ನು ತಪಾಸಣೆ ನಡೆಸಿರುವ ವೈದ್ಯರು ಕರೋನಾ ವೈರಸ್ ಸೋಂಕಿಗೆ ತುತ್ತಾಗಿರುವುದು ದೃಢಪಡಿಸಿದ್ದಾರೆ.
3.ನಾಥೂರಾಮ್ ಗೋಡ್ಸೆ ಮತ್ತು ನರೇಂದ್ರ ಮೋದಿ ಈ ಇಬ್ಬರದ್ದೂ ಒಂದೇ ಸಿದ್ಧಾಂತ; ರಾಹುಲ್ ಗಾಂಧಿ ವಾಗ್ದಾಳಿ
ಮಹಾತ್ಮ ಗಾಂಧಿಯನ್ನು ಕೊಂದ ಕೊಲೆಗಾರ ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರೂ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಆದರೆ, ಇಬ್ಬರ ನಡುವಿನ ಏಕೈಕ ವ್ಯತ್ಯಾಸ ಎಂದರೆ ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳುವ ಧೈರ್ಯ ನರೇಂದ್ರ ಮೋದಿಗೆ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇಂದು ವಾಗ್ದಾಳಿ ನಡೆಸಿದ್ದಾರೆ.
4.ದೆಹಲಿಯ ಜಾಮಿಯಾ ನಗರ್ ಬಳಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಫೈರಿಂಗ್; ವಿದ್ಯಾರ್ಥಿ ಕಾಲಿಗೆ ಗಂಭೀರ ಗಾಯ
ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಯ ವಿರುದ್ಧ ನಿರಂತರವಾಗಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇಂದೂ ಸಹ ದೆಹಲಿಯ ಜಾಮಿಯ ನಗರ್ ಬಳಿ ಸಿಎಎ ವಿರೋಧಿ ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಈ ಪ್ರತಿಭಟನೆ ವೇಳೆ ವ್ಯಕ್ತಿಯೋರ್ವ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಆತಂಕ ಸೃಷ್ಟಿಸಿದ್ದಾನೆ.
5.ದೆಹಲಿ ಚುನಾವಣೆ: ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಪ್ರಚಾರಕ್ಕೆ ಆಯೋಗ ನಿಷೇಧ
ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸದ ಪರ್ವೇಶ್ ವರ್ಮಾಗೆ ದೆಹಲಿಯಲ್ಲಿ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಅನುರಾಗ್ ಠಾಕೂರ್ ಮೂರು ದಿನ ಮತ್ತು ಪರ್ವೇಶ್ ವರ್ಮಾ ನಾಲ್ಕು ದಿನಗಳ ಕಾಲ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಬಾರದು ಎಂದು ಕೇಂದ್ರ ಚುನಾವಣೆ ಆಯೋಗವೂ ಖಡಕ್ ಆದೇಶ ಹೊರಡಿಸಿದೆ.
6.ಗ್ರಾಹಕರಿಗೆ ಶಾಕ್: ಫೆ.1ರಿಂದ ಹಾಲಿನ ದರ ಏರಿಕೆ; ಲೀಟರ್ಗೆ 2 ರೂ. ಹೆಚ್ಚಳ
ಹಾಲಿನ ದರವನ್ನು ಹೆಚ್ಚಿಸುವ ಕುರಿತು ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಫೆ.1ರಿಂದ ಪ್ರತಿ ಲೀಟರ್ಗೆ 2 ರೂ ಏರಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, 14 ಹಾಲು ಒಕ್ಕೂಟಗಳ ವತಿಯಿಂದ ಹಾಲಿನ ದರ ಹೆಚ್ಚಳಕ್ಕಾಗಿ ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರತೀ ಲೀಟರ್ ಗೆ ಎರಡರಿಂದ ಮೂರು ರೂ ಹೆಚ್ಚಳ ಮಾಡುವಂತೆ ಬೇಡಿಕೆ ಬಂದಿತ್ತು. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಕೂಡ ಚರ್ಚಿಸಿ ತೀರ್ಮಾನ ಕೈ ಗೊಳ್ಳಲಾಗಿತ್ತು ಎಂದರು.
7.ನನಗೆ ತೊಂದ್ರೆ ಕೊಡೋದ್ರಲ್ಲಿ ಕೆಲವರಿಗೆ ಖುಷಿಯಿದೆ - ನೋವು ಎಲ್ಲಿರುತ್ತೋ ಅಲ್ಲಿ ಲಾಭ ಇರುತ್ತೆ; ಡಿಕೆ ಶಿವಕುಮಾರ್
ನನಗೆ ತೊಂದ್ರೆ ಕೊಡೋದೆ ಕೆಲವರಿಗೆ ಹವ್ಯಾಸವಾಗಿದೆ ಎಂದು ವಿರೋಧಿಗಳಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಗಾಣಗಾಪುರ ದತ್ತ ಮಂದಿರ ಭೇಟಿಯ ನಂತರ ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಜೀವನ ಅಂದ ಮೇಲೆ ಕಷ್ಟ-ಸುಖ ಎರಡೂ ಇರುತ್ತೆ. ಆದರೆ ನನಗೆ ತೊಂದರೆ ಕೊಟ್ರೆ ಮಾತ್ರ ಕೆಲವರಿಗೆ ಸಮಾಧಾನವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
8.ಪರಮೇಶ್ವರ್, ಎಚ್.ಡಿ ರೇವಣ್ಣ, ಡಿಕೆಶಿ, ಜಾರ್ಜ್, ಎಂ.ಬಿ ಪಾಟೀಲ್ ಭದ್ರತೆ ಕಡಿತಕ್ಕೆ ತುರ್ತು ಆದೇಶ
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ 27 ಮಂದಿ ಮಾಜಿ ಸಚಿವರಿಗೆ ನೀಡಲಾಗಿದ್ದ ಅಂಗರಕ್ಷಕ ಭದ್ರತೆ ಹಾಗೂ ನಿವಾಸದ ಗಾರ್ಡ್ ಭದ್ರತೆ ಹಿಂಪಡೆಯುವಂತೆ ಆದೇಶ ಹೊರಡಿಸಲಾಗಿದೆ. ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ಮಾಜಿ ಸಚಿವರಾದ ಎಚ್.ಡಿ ರೇವಣ್ಣ, ಡಿ.ಕೆ ಶಿವಕುಮಾರ್, ಕೆ.ಜೆ ಜಾರ್ಜ್, ಎಂ. ಬಿ ಪಾಟೀಲ್ ಸೇರಿದಂತೆ ಹಲವರ ಭಧ್ರತೆ ಕಡಿತಕ್ಕೆ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ತುರ್ತು ಆದೇಶ ಹೊರಡಿಸಿದ್ದಾರೆ.
9.ಫೆ.10ಕ್ಕೆ ರೇವತಿ ಜೊತೆ ನಡೆಯಲಿದೆ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ..!
ಸ್ಯಾಂಡಲ್ವುಡ್ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾಗಿಂತ ಹೆಚ್ಚಾಗಿ ಮದುವೆ ವಿಷಯ ಹರಿದಾಡುತ್ತಿದೆ. ನಿಖಿಲ್ ತಮ್ಮ ಕುಟುಂಬ ಸಮೇತರಾಗಿ ಇತ್ತೀಚೆಗಷ್ಟೆ ಜ್ಞಾನಭಾರತಿಯಲ್ಲಿರುವ ಹುಡುಗಿ ರೇವತಿ ಅವರ ಮನೆ ಹೋಗಿ ಹೆಣ್ಣು ನೋಡುವ ಶಾಸ್ತ್ರ ಮಾಡಿದ್ದರು. ಫೆಬ್ರುವರಿ 10 ಕ್ಕೆ ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ನಡೆಯಲಿದೆ. ಈ ಕುರಿತು ಮಾತನಾಡಲು ಇಂದು ನಿಖಿಲ್ ಮನೆಗೆ ರೇವತಿ ಕಟುಂಬದವರು ಭೇಟಿ ನೀಡಲಿದ್ದು, ನಿಶ್ಚಿತಾರ್ಥಕ್ಕೂ ಮುಂಚೆ ಮಾಡುವ ಶಾಸ್ತ್ರ ಹಾಗೂ ಸಂಪ್ರದಾಯ ನಡೆಸಲಿದ್ದಾರೆ
10.ರಣಜಿ ಟ್ರೋಫಿ: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ 10 ವಿಕೆಟ್ ಜಯಭೇರಿ
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಕ್ರಿಕೆಟ್ ತಂಡ ತನ್ನ 6ನೇ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ 10 ವಿಕೆಟ್ಗಳಿಂದ ಜಯಭೇರಿ ಭಾರಿಸಿದೆ. ಮೂರನೇ ದಿನಾಂತ್ಯದ ಬಳಿಕ ಡ್ರಾನತ್ತ ಸಾಗುತ್ತಿದ್ದಂತಿದ್ದ ಈ ಪಂದ್ಯ ಕೊನೆಯ ದಿನದಂದು ನಾಟಕೀಯ ತಿರುವುಗಳನ್ನ ಕಂಡು ಕರುನಾಡಿನ ತಂಡಕ್ಕೆ ಗೆಲುವಿನಲ್ಲಿ ಅಂತ್ಯ ಕಂಡಿದೆ. ಗೆಲ್ಲಲು 51 ರನ್ಗಳ ಅಲ್ಪ ಮೊತ್ತದ ಗುರಿ ಪಡೆದ ಕರ್ನಾಟಕ 9ನೇ ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ ಗೆದ್ದು ಕೇಕೆ ಹಾಕಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ