HR RameshHR Ramesh
|
news18-kannada Updated:January 17, 2020, 5:28 PM IST
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯದ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ದೂರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹಮ್ಮಿಕೊಂಡ ಕಾರ್ಯಕ್ರಮವೇ ‘ಪರೀಕ್ಷಾ ಪೇ ಚರ್ಚಾ’. ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದಿರುವ ಈ ಸಂವಾದ ಕಾರ್ಯಕ್ರಮ ಇದೀಗ ಮೂರನೇ ವರ್ಷದ ಸಂವಾದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ.
ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ಪರೀಕ್ಷೆಯ ಭಯದಿಂದ ಪಾರು ಮಾಡುವಲ್ಲಿ ಈ ಕಾರ್ಯಕ್ರಮ ತಕ್ಕಮಟ್ಟಿಗೆ ಸಫಲವಾಗಿದೆ. ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಇರುವ ಆತಂಕ, ಭಯ ಇತ್ಯಾದಿ ಋಣಾತ್ಮಕ ಭಾವನೆಗಳನ್ನು ನೀಗಿಸಿ ಒತ್ತಡರಹಿತವಾಗಿ ಪರೀಕ್ಷಾ ಸವಾಲು ಎದುರಿಸುವ ಕೆಲ ವಿಧಾನಗಳನ್ನು ಪ್ರಧಾನಿ ಮೋದಿ ತಮ್ಮ ಅನುಭವದ ಆಧಾರದ ಮೇಲೆ ತಿಳಿಸಿಕೊಡುತ್ತಾರೆ.
ಜನವರಿ 20, ಸೋಮವಾರ ಬೆಳಗ್ಗೆ 11ಗಂಟೆಯಿಂದ ದೆಹಲಿಯ ತಲಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶಾದ್ಯಂತ ವಿವಿಧ ಶಾಲೆಗಳಿಂದ ಆಯ್ದ 2,000 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಿಂದ 42 ವಿದ್ಯಾರ್ಥಿಗಳು ಈ ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಒಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಪ್ರಬಂಧ ಮಂಡನೆ ಕೌಶಲ ಆಧರಿಸಿ, ಸಂವಾದಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಕರ್ನಾಟಕದಿಂದ ಒಟ್ಟು 15 ಸಾವಿರ ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಿದ್ದರು. ಅವರಲ್ಲಿ 42 ವಿದ್ಯಾರ್ಥಿಗಳನ್ನು ಪರೀಕ್ಷಾ ಪೇ ಚರ್ಚಾಗೆ ಆಯ್ಕೆ ಮಾಡಲಾಗಿದೆ. ಮತ್ತು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಜಂಬಲದಿನ್ನಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ಆಯ್ಕೆಯಾಗಿದ್ದಾರೆ. ಇವರು ಸೇರಿದಂತೆ ಒಟ್ಟು 42 ವಿದ್ಯಾರ್ಥಿಗಳು ಕರ್ನಾಟಕದಿಂದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನು ಓದಿ: ಜ. 20ರಂದು ಪ್ರಧಾನಿ ಮೋದಿಯಿಂದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಸರ್ಕಾರಿ ಪ್ರೌಢಶಾಲೆಯ ಗುಂಡಮ್ಮ ಹಾಗೂ ಜ್ಞಾನ ಸಂಜೀವಿನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಆಯ್ಕೆಯಾಗಿದ್ದಾರೆ. ಹಾಗೆಯೇ
ಗಡಿ ಜಿಲ್ಲೆ ಚಾಮರಾಜನಗರ ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ಹತ್ತನೆ ತರಗತಿ ವಿದ್ಯಾರ್ಥಿನಿ ಅಪೂರ್ವ ಹಾಗೂ ಯಳಂದೂರಿನ ಆದರ್ಶ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿ ಅರ್ಫತ್ ಆಯ್ಕೆಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಆರ್ಎಂಎಸ್ಎ ಶಾಲೆಯ ವಿದ್ಯಾರ್ಥಿನಿ ಶ್ವೇತಾ ಮಲ್ಲಿಕಾರ್ಜುನ ಅವರು ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
First published:
January 17, 2020, 5:28 PM IST