ಬೆಂಗಳೂರು; ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಆರೋಗ್ಯ ಸಚಿವ ಬಿ ಶ್ರೀರಾಮುಲು ನಡುವಿನ ಗೆಳೆತನ ಎಲ್ಲರಿಗೂ ಗೊತ್ತಿರುವುದೆ. ರಾಜಕೀಯವಾಗಿ ಎಷ್ಟೇ ಬೆಳೆದರು ಅದಕ್ಕಿಂತ ಹೆಚ್ಚು ಇವರಿಬ್ಬರು ಕುಚುಕು ಗೆಳೆಯರು. ಅವರಿಬ್ಬರ ಮಕ್ಕಳ ಮದುವೆಯನ್ನು ಮುಂದೆ ನಿಂತು ರಾಮುಲು-ಜನಾರ್ದನ ರೆಡ್ಡಿ ಅದ್ದೂರಿಯಾಗಿ ಮಾಡಿದ್ದರು. ಇಂದು ಸಚಿವ ಶ್ರೀರಾಮುಲು ಜನ್ಮ ದಿನಕ್ಕೆ ಸ್ನೇಹಿತ ಜನಾರ್ದನ ರೆಡ್ಡಿ ಭಾವನಾತ್ಮಕವಾಗಿ ಪತ್ರ ಬರೆದು ಶುಭಾಶಯ ಕೋರಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲ ಶ್ರೀರಾಮುಲು ಅವರಿಗಾಗಿ ಕವನ ಬರೆದು ಜನುಮ ದಿನದ ಶುಭಾಶಯ ತಿಳಿಸಿದ್ದಾರೆ.
ಭೂ ತಾಯಿಯ ಮಡಿಲಲ್ಲಿ ಆಡಿ ಬೆಳೆದ ಸ್ನೇಹ ನಮ್ಮದು. ಕನ್ನಡಮ್ಮನ ಮಣ್ಣಲ್ಲಿ ಹದವಾಗಿ ಬೆಳೆದ ಪವಿತ್ರ ಸ್ನೇಹ ನಮ್ಮದು. ಬಡತನ ಸಿರಿತನವನ್ನು ಮೆಟ್ಟಿ ನಿಂತ ಸ್ನೇಹ ನಮ್ಮದು. ರಕ್ತ ಸಂಬಂದವನ್ನು ಮೀರಿ ಬೆಳೆದ ಸ್ನೇಹ ನಮ್ಮದು. ಜಾತಿ, ಮತ, ಭೇದವನ್ನು ಮೀರಿದ ಸ್ನೇಹ ನಮ್ಮದು. ಸ್ವಾರ್ಥವನ್ನು ಹತ್ತಿರ ಸುಳಿಯಲು ಬಿಡದ, ನಿಸ್ವಾರ್ಥ ಸ್ನೇಹ ನಮ್ಮದು. ಅವನು ಜೀವಕ್ಕೆ ಜೀವ ಕೊಡುವ ಗೆಳೆಯ. ಅಧಿಕಾರದ ದಾಹವಿಲ್ಲ, ಸಿರಿ ಸಂಪತ್ತಿನ ಚಿಂತೆ ಇಲ್ಲ. ಇವೆಲ್ಲವನ್ನು ಮೀರಿದ್ದು, ನಮ್ಮ ಸ್ನೇಹ. ಹೇಗೆ ವರ್ಣಿಸಲಿ ಈ ನನ್ನ ಸ್ನೇಹಿತನ ಸ್ನೇಹವನ್ನು, ಅಕ್ಷರಗಳಲ್ಲಿ ಹೇಗೆ ಕಟ್ಟಿಹಾಕಲಿ ಈ ನನ್ನ ಗೆಳೆಯನ ಗೆಳೆತನವನ್ನು. ನನ್ನ ಕಷ್ಟ ಕಾಲದಲ್ಲಿ ಸ್ನೇಹವೆಂಬ ವಜ್ರದ ರಕ್ಷಾ ಕವಚ ನೀಡಿದವನು ನನ್ನ ಗೆಳೆಯ. ಗೆಳೆತನದಲ್ಲಿ ಸ್ವಾರ್ಥ ಬಯಸದೆ ಸದಾ ನನ್ನ ಬೆನ್ನ ಹಿಂದೆ ನೆರಳಾಗಿ ನಿಂತವನು ನನ್ನ ಗೆಳೆಯ. ನಮ್ಮ ನಿಸ್ವಾರ್ಥ, ನಿಷ್ಕಲ್ಮಶ, ನಿಷ್ಕಳಂಕ ಸ್ನೇಹಕ್ಕೆ ಸಾಕ್ಷಿಯಾದವನು ನನ್ನ ಗೆಳೆಯ. ಬಡವರ ಬಂಧು ನೀನು. ಬಡವ, ಬಲ್ಲಿದರ ಆದರ್ಶ ನಾಯಕ ನೀನು. ಕಷ್ಟದಲ್ಲಿರುವ ಜನರ ರಕ್ಷಕ ನೀನು. ಜನ ನಾಯಕನಾಗಿ ಜನರ ಮನದಾಳದಲ್ಲಿ ಬೇರೂರಿದ ನಾಯಕ ನೀನು. ಆಕಾಶದಲ್ಲಿನ ಸಹಸ್ರಾರು ತಾರೆಗಳಲ್ಲಿನ ಧ್ರುವ ತಾರೆ ನೀನು. ಇವನೇ ನನ್ನ ಪ್ರಾಣ ಸ್ನೇಹಿತ ಶ್ರೀರಾಮುಲು.
https://www.facebook.com/galijanardhanreddy/posts/999963347113825
ಇದನ್ನು ಓದಿ: ಮನೆ ಬಾಗಿಲಿಗೆ ಮದ್ಯ ಪೂರೈಸುವುದು ಅವಿವೇಕದ ನಿರ್ಧಾರ; ಸಿಎಂ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ