ಕೊಪ್ಪಳ : ಗಾಲಿ ಜನಾರ್ದನ ರಡ್ಡಿ (Janardhana Reddy) ಬಿಜೆಪಿಯಿಂದ ಹೊರಗುಳಿದು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪಿಸಿಕೊಂಡು ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಭರ್ಜರಿ ಚುನಾವಣ ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ವಿಧಾನಸಭೆ ಚುನಾವಣೆಗೆ (Assembly election) ಅಗತ್ಯವಾಗಿರುವ ಪ್ರಣಾಳಿಕೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತರಾಗಿರುವ ರೆಡ್ಡಿಯವರಿಗೆ ಚುನಾವಣೆಗೂ ಮುನ್ನವೇ ದೇವರ ಆಶೀರ್ವಾದ ಸಿಕ್ಕಿದೆ. ಗಂಗಾವತಿ ತಾಲೂಕಿನ ಬೂದಗುಂಪ ಗ್ರಾಮದ ಆಂಜನೇಯ (Anjaneya) ದೇವರಿಗೆ ಪೂಜೆ ಸಲ್ಲಿಸುವಾಗ ಜನಾರ್ದನ ರೆಡ್ಡಿಗೆ ಹೂವಿನ ಪ್ರಸಾದ ಸಿಕ್ಕಿದೆ. ಬಲಭಾಗದಿಂದ ಹೂವಿನ ಹಾರದ ಪ್ರಸಾದ ಒಲಿದು ಬಂದ ಹಿನ್ನಲೆ ಹಾರ ಸ್ವೀಕರಿಸಿ ದೇವರಿಗೆ ನಮಸ್ಕರಿಸಿ ರೆಡ್ಡಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕೆಆರ್ಪಿಪಿ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ ನಂತರ ಕಾಲಿಗೆ ಚಕ್ರ ಕಟ್ಟುಕೊಂಡಂತೆ ಕಲ್ಯಾಣ ಕರ್ನಾಟಕದ ಹಲವುಭಾಗಗಳಲ್ಲಿ ಸುತ್ತಾಡುತ್ತಿರುವ ರೆಡ್ಡಿ ಈಗಾಗಲೆ ಮುಂಬರುವ ಚುನಾವಣೆಯಲ್ಲಿ 40 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಗೆಲ್ಲುವ ವರ್ಚಸ್ಸನ್ನು ನೋಡಿ ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ.
ಪಕ್ಷಕ್ಕೆ ಉತ್ತಮ ಸ್ಪಂದನೆ
ಕೆಆರ್ಪಿಪಿ ಪಕ್ಷಕ್ಕೆ ಕೇವಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಬೆಂಬಲ ಸಿಗುತ್ತಿದೆ. ಜನರ ಬೆಂಬಲವೇ ನಮಗೆ ಚುನಾವಣೆಯಲ್ಲಿ ಮತ್ತಷ್ಟು ಹುರುಪಿನಿಂದ ಕೆಲಸ ಮಾಡುವಂತೆ ಮಾಡಿದೆ. ಬೆಂಗಳೂರಿನಲ್ಲೂ ಕೆಲವು ದೊಡ್ಡ ಮನೆತನದವರೇ ನಮ್ಮ ಪಕ್ಷಕ್ಕೆ ಸೇರುವುದಕ್ಕೆ ಸಿದ್ಧರಾಗಿದ್ದಾರೆ. ಸದ್ಯಕ್ಕೆ ಅವರ ಬಗ್ಗೆ ಈಗ ಹೇಳಲ್ಲ, ಮುಂಬರುವ ದಿನಗಳಲ್ಲಿ ತಿಳಿಸುತ್ತೇನೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದರು.
ಇದನ್ನೂ ಓದಿ: Janardhana Reddy: ಶೀಘ್ರವೇ 40 ಅಭ್ಯರ್ಥಿಗಳ ಲಿಸ್ಟ್ ರಿಲೀಸ್, ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲ ಎಂದ ಜನಾರ್ದನ ರೆಡ್ಡಿ
30 ಹೆಚ್ಚು ಕ್ಷೇತ್ರಗಳಲ್ಲಿ ಸಮೀಕ್ಷೆ
ಪಕ್ಷದ ಯಶಸ್ಸಿನ ಭಾಗವಾಗಲು ಬರುವವರನ್ನು ನಾವು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಆದರೆ ಟಿಕೆಟ್ ಘೋಷಣೆ ಮಾಡುವಾಗ ಅವರವರ ವರ್ಚಸ್ಸನ್ನು ನೋಡಿ ನೀಡಲಾಗುತ್ತದೆ. ಈಗಾಗಲೆ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ನಮ್ಮ ತಂಡ ಸಮೀಕ್ಷೆ ನಡೆಸುತ್ತಿದೆ. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ.
ಎಲ್ಲೆಲ್ಲಿಂದ ಸ್ಪರ್ಧೆ
ತಮ್ಮನ್ನು ತಾವೂ ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತೇವೆ. ಪ್ರಸ್ತುತ ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಯಾದಗಿರಿ, ಕಲಬುರಗಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಯಾರಾಗಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.
ಒತ್ತಾಯ ಪೂರ್ವಕ ಆಹ್ವಾನವಿಲ್ಲ
ಕೆಆರ್ಪಿಪಿ ಪಕ್ಷಕ್ಕೆ ಬನ್ನಿ ಎಂದು ಬೇರೆ ಪಕ್ಷದವರನ್ನೂ ಆಹ್ವಾನಿಸುವುದಿಲ್ಲ. ನನ್ನ ಕಾರ್ಯವನ್ನು ಮೆಚ್ಚಿ, ಭವಿಷ್ಯದಲ್ಲಿ ನಾನು ಏನಾದರೂ ಸಾಧನೆ ಮಾಡಬಹುದು ಎನ್ನುವ ನಂಬಿಕೆಯಿಂದ ಯಾರೇ ಬಂದರೂ ಪ್ರೀತಿಯಿಂದ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ. ಬೇರೆ ಪಕ್ಷಗಳ ಟಿಕೆಟ್ ಘೋಷಿಸಿದ ಬಳಿಕ ಅವಕಾಶ ಸಿಗದವರಿಗೆ ಅಥವಾ ಅಸಮಾಧಾನಿತರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಇಚ್ಛಿಸುವುದಿಲ್ಲ. ಹೊಸ ಅಭ್ಯರ್ಥಿಗಳು, ಅದರಲ್ಲೂ ತಮ್ಮ ವರ್ಚಸ್ಸಿನ ಮೂಲಕ ಗುರುತಿಸಿಕೊಂಡಿರುವವರು, ಯುವ ಉತ್ಸಾಹಿಗಳಿಗೆ ಅವಕಾಶ ನೀಡುತ್ತೇನೆ ಎಂದು ರೆಡ್ಡಿ ಹೇಳಿದ್ದಾರೆ.
ಬೇರೆ ಪಕ್ಷವನ್ನು ಸೋಲಿಸುವುದು ನಮ್ಮ ಉದ್ದೇಶವಲ್ಲ
ಚುನಾವಣೆಯಲ್ಲಿ ಬೇರೆ ಪಕ್ಷಗಳನ್ನು ಸೋಲಿಸುವ ಯಾವುದೇ ಉದ್ದೇಶ ನನಗಿಲ್ಲ, ಮುಂದಿನ ಚುನಾವಣೆಯಲ್ಲಿ ಕೆಆರ್ಪಿಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ ಎಂದು ತಾವೂ ಬಿಜೆಪಿ ಮೇಲಿನ ಕೋಪಕ್ಕೆ ಪಕ್ಷ ಕಟ್ಟಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ