ಶರತ್ ಶರ್ಮ ಕಲಗಾರು
"ಪ್ರತಿ ನಿಮಿಷವೂ, ಎಲ್ಲಾ ಪರಿಸ್ಥಿತಿ ಅವರ ಹಿಡಿತದಲ್ಲಿದೆ ಎಂದು ನಮಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಗುತ್ತಲೇ ಇತ್ತು. ನಾವು ಅಧಿಕೃತ ಮಾಹಿತಿಗಾಗಿ ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಇದ್ದೆವು, ಏಕೆಂದರೆ ಇಲ್ಲಿಂದ ಬರುವ ಸಂದೇಶಕ್ಕೆ ಕಾಯುತ್ತಿದ್ದೆವು. ಸಿಬ್ಬಂದಿಯನ್ನು ಕರೆದೊಯ್ಯುವುದು ನಮ್ಮ ಜವಾಬ್ದಾರಿಯಾಗಿತ್ತು, ಇಂತಹ ಸಂದರ್ಭದಲ್ಲಿ ಒಂದು ನಿಮಿಷದ ತಪ್ಪು ಕೂಡ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ ಎನ್ನುವ ಅರಿವು ನಮಗಿತ್ತು. ಆದರೆ ನಮ್ಮ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎನ್ನುವುದು ನಮಗಿರುವ ಸಮಾಧಾನ"ಎಂದು ಯುದ್ಧ ಪೀಡಿತ ಅಫ್ಘಾನಿಸ್ತಾನದಿಂದ ಮರಳಿದ ಕಮಾಂಡೊ ತಮ್ಮ ಅನುಭವ ಹಂಚಿಕೊಂಡರು.
ದಸ್ತಗೀರ್ ಮುಲ್ಲಾ, ಬಾಗಲಕೋಟೆಯ ಮಂಜುನಾಥ್ ಮಾಲಿ ಮತ್ತು ಕರ್ನಾಟಕದ ಗದಗ ಜಿಲ್ಲೆಯ ರವಿ ನೀಲಗಾರ್, 2019 ರಿಂದ ಕಾಬೂಲ್ನಲ್ಲಿ ಕೆಲಸ ಮಾಡುತ್ತಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಕಮಾಂಡೋಗಳು. ಇವರು ಅಫ್ಘನ್ನಲ್ಲಿ ಇರುವ ಭಾರತೀಯ ರಾಯಭಾರ ಸಿಬ್ಬಂದಿಗೆ ಬೆಂಗವಲಾಗಿ ಕೆಲಸ ಮಾಡುತ್ತಿದ್ದರು, ಪ್ರಸ್ತುತ ಭಾರತಕ್ಕೆ ಎಲ್ಲರೂ ಮರಳಿದ್ದಾರೆ.
ಈ ಧೈರ್ಯಶಾಲಿ ಭಾರತೀಯ ಕಮಾಂಡೋಗಳು ತಾವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ನೋಡಿದ ಭಯಾನಕ ದೃಶ್ಯಗಳನ್ನು ನ್ಯೂಸ್ 18 ಜೊತೆ ಹಂಚಿಕೊಂಡರು.
"ಅಫ್ಘಾನಿಸ್ತಾನವು ಬದುಕಲು ಅಥವಾ ಜೀವನ ನಡೆಸಲು ಅಷ್ಟು ಅಪಾಯಕಾರಿಯಾದ ಸ್ಥಳವೇನಲ್ಲ, ಅತ್ಯಂತ ಆರಾಮಾಗಿ ಜೀವನ ಸಾಗಿಸಬಹುದು. ಅಫ್ಘಾನಿಸ್ತಾನದ ಜನರು ಸ್ನೇಹಪರರು, ಭಾರತೀಯರನ್ನು ತುಂಬಾ ಗೌರವಿಸುತ್ತಾರೆ. ನಮ್ಮ ರಾಯಭಾರ ಕಚೇರಿಯಲ್ಲಿ ಇಂತಹ ಭಯಾನಕ ಮತ್ತು ಸಾವಿನ ಬೆದರಿಕೆಯನ್ನು ನಾವು ಮುಂದೊಂದು ದಿನ ನೋಡುತ್ತೇವೆ ಎಂದು ಎಂದಿಗೂ ಭಾವಿಸಿರಲಿಲ್ಲ" ಎಂದು ಕಮಾಂಡೋ ದಸ್ತಗೀರ್ ಮುಲ್ಲಾ ತಮ್ಮ ಮತ್ತು ಅಫ್ಘಾನಿಸ್ತಾನದಲ್ಲಿದ್ದ ಅವನ ಸಹ ಕಮಾಂಡೋಗಳ ಪರಿಸ್ಥಿತಿಯು ಹೇಗೆ ಇತ್ತು ಎನ್ನುವ ಕೊನೆಯ ಕೆಲವು ದಿನಗಳ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ.
ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಿಗೆ ಮತ್ತು ಐಟಿಪಿಬಿ ಕಮಾಂಡೋಗಳಿಗೆ ಆಗಸ್ಟ್ 13 ರಂದು ಇಡೀ ಭೂಮಿಯೇ ನರಕದಂತೆ ಕಾಣಲು ಪ್ರಾರಂಭಿಸಿತು ಎಂದು ಅವರು ಹೇಳಿದರು.
"ಕಾಬೂಲ್ ಸುತ್ತಲೂ ಅವ್ಯವಸ್ಥೆ ತಾಂಡವವಾಡುತ್ತಿತ್ತು. ನಮ್ಮ ಸಿಬ್ಬಂದಿಯನ್ನು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಕ್ಷಿಸಿ ಕರೆದೊಯ್ಯುವಂತೆ ಆದೇಶಿಸಲಾಯಿತು. ನಮ್ಮ ರಾಯಭಾರ ಕಚೇರಿ ವಿಮಾನ ನಿಲ್ದಾಣದಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದೆ. ಆದರೆ ನಮ್ಮ ಸಿಬ್ಬಂದಿಯನ್ನು ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಕರೆದೊಯ್ಯಲು ಎಷ್ಟು ಸಮಯ ತೆಗೆದುಕೊಂಡಿರಬಹುದು ಎಂದು ನೀವು ಊಹಿಸುತ್ತೀರಾ? ಸುಮಾರು 5 ಗಂಟೆಗಳ ಕಾಲ ನಾವು ಪರದಾಡಿದ್ದೇವೆ. ನಾವು ತಾಲಿಬಾನ್ ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು, ಕೆಲವು ಸಲ ನಾವು ಸಹ ಕೌಂಟರ್ ನೀಡಬೇಕಾಯಿತು. ಅಲ್ಲದೇ ಸಾವಿರಾರು ಅಫ್ಘಾನಿಸ್ತಾನದ ನಾಗರಿಕರು ಜೀವ ಉಳಿಸಿಕೊಳ್ಳುವ ಸಲುವಾಗಿ ತಮ್ಮ ದೇಶವನ್ನು ತೊರೆಯಲು ವಿಮಾನ ನಿಲ್ದಾಣಕ್ಕೆ ದೌಡಯಿಸುತ್ತಿದ್ದ ದೃಶ್ಯ ಮಾತ್ರ ಮರೆಯಲು ಸಾಧ್ಯವಿಲ್ಲ "ಎಂದು ಮುಲ್ಲಾ ಕ್ಲಿಷ್ಟಕರ ಸಂದರ್ಭವನ್ನು ವಿವರಿಸಿದರು.
ಮುಲ್ಲಾ ಅವರು ಎಲ್ಲ ವಿವರಗಳನ್ನು ನ್ಯೂಸ್ 18 ಮುಂದೆ ಹೇಳಲಿಲ್ಲ, ಅಫ್ಘಾನಿಸ್ತಾನದಲ್ಲಿ ಅನೇಕ ಭಾರತೀಯರನ್ನು ರಕ್ಷಿಸಿದ ಕಥೆಯನ್ನು ಸೈನಿಕ ಪ್ರೋಟೋಕಾಲ್ಗಳು ಮತ್ತು ರಕ್ಷಣಾ ಸಿಬ್ಬಂದಿಯಾಗಿ ಕಾಪಾಡ ಬೇಕಾದ ಗೌಪ್ಯತೆಯನ್ನು ಉಲ್ಲೇಖಿಸಿ ಸಂಪೂರ್ಣ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.
"ನಾವು ವಿಮಾನದ ದಾರಿಯಲ್ಲಿ ಹೋಗುವಾಗ ಗುಂಡಿನ ಮೊರೆತದ ಶಬ್ದವನ್ನು ಕೇಳುತ್ತಿದ್ದೆವು, ರಾಕೆಟ್ ಲಾಂಚರ್ಗಳು ಪ್ರತಿಧ್ವನಿಸುತ್ತಿದ್ದವು. ನಮ್ಮ ಸಿಬ್ಬಂದಿಯನ್ನು ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಮಾತ್ರ ನಮ್ಮ ಗಮನದಲ್ಲಿತ್ತು ಬಿಟ್ಟರೆ, ಬೇರೆ ಯಾವ ಸಂಗತಿಯೂ ನಮ್ಮ ಎದುರಿಗೆ ಇರಲಿಲ್ಲ. ನಮ್ಮ ಜೀವನದ ಬಗ್ಗೆ ಯಾವುದೇ ಭರವಸೆ ಇರಲಿಲ್ಲ, ನಮ್ಮ ಏಕೈಕ ಉದ್ದೇಶ ರಾಯಭಾರ ಸಿಬ್ಬಂದಿಯನ್ನು ಉಳಿಸುವುದು, "ಎಂದು ಮುಲ್ಲಾ ರೋಚಕ ಸಂದರ್ಭವನ್ನು ವಿವರಿಸಿದರು.
ಎಲ್ಲಾ ಭಾರತೀಯ ರಾಜತಾಂತ್ರಿಕರು ಮತ್ತು ಭದ್ರತಾ ಸಿಬ್ಬಂದಿಗಳು ಕಾಬೂಲ್ನಿಂದ ಗುಜರಾತ್ಗೆ ಮತ್ತು ದೆಹಲಿಯ ಮೂಲಕ ರಸ್ತೆ ಮಾರ್ಗವಾಗಿ ವಾಪಸ್ಸಾಗಿದ್ದು, ಪ್ರಸ್ತುತ ಅವರೆಲ್ಲರೂ ಕ್ವಾರಂಟೈನ್ನಲ್ಲಿದ್ದಾರೆ.
ಐಟಿಬಿಪಿಯ ಮತ್ತೊಬ್ಬ ಹೀರೋ ಮಂಜುನಾಥ ಮಾಲಿ ನ್ಯೂಸ್ 18 ಜೊತೆ ಮಾತನಾಡುತ್ತಾ, 8 ತಿಂಗಳ ಗರ್ಭಿಣಿಯಾಗಿರುವ ತನ್ನ ಪತ್ನಿಯನ್ನು ಹೇಗೆ ಸಮಾಧಾನಪಡಿಸಬೇಕು ಎಂಬುದೇ ಗೊತ್ತಾಗಲಿಲ್ಲ. ಪರಿಸ್ಥಿತಿ ಬಿಗಡಾಯಿಸಲು ಆರಂಭಿಸಿದಾಗ, ಕಾಬೂಲ್ನಲ್ಲಿ ಪೋಸ್ಟಿಂಗ್ ಆದವರ ಕುಟುಂಬಗಳು ಸಾಕಷ್ಟು ಚಿಂತಿಸತೊಡಗಿದವು.
"ನಾನು ಸುರಕ್ಷಿತವಾಗಿದ್ದೇನೋ ಇಲ್ಲವೋ ಎಂದು ತಿಳಿದುಕೊಳ್ಳು ನನ್ನ ಹೆಂಡತಿ ನನಗೆ ಕರೆ ಮಾಡಿದಳು. ಆದರೆ ನಾನು ಸುರಕ್ಷಿತವಾಗಿಲ್ಲ. ಆದರೆ ಅವಳು 8 ತಿಂಗಳ ಗರ್ಭಿಣಿ ಈ ಸಂದರ್ಭದಲ್ಲಿ ನಾನು ಅವಳನ್ನು ಭಯಪಡಿಸಬಾರದು ಎನ್ನುವ ಅರಿವು ನನಗಿತ್ತು.
ನಾನು ಸಮಾಧಾನದಿಂದಲೇ ಕಾಬೂಲ್ನಲ್ಲಿನ ದಿನಚರಿಯ ಪರಿಸ್ಥಿತಿ ಹೇಳಿದೆ, ಕೇವಲ ಮಾಧ್ಯಮದ ಪ್ರಚೋದನೆಯಿಂದ ಹೀಗೆ ಆಗುತ್ತಿದೆ ಏನೂ ಇಲ್ಲ ನೀನು ಆರಾಮಾಗಿರು ಎಂದು ಅವಳನ್ನು ಸಮಾಧಾನ ಪಡಿಸಿದೆ. ನಾನು ಅವಳನ್ನು ಸಮಾಧಾನ ಪಡಿಸುವ ಏಕೈಕ ಮಾರ್ಗ ಇದೊಂದೆ ಆಗಿತ್ತು ಎಂದು ಮಾಲಿ ತಮ್ಮ ಅನುಭವ ಹೇಳುತ್ತಾ ಹೋದರು.
ದಿನೇಶ್ ರೈ (53), ಜಗದೀಶ್ ಪೂಜಾರಿ (52) ಕಾಬೂಲ್ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರಾಗಿದ್ದು ಭಾನುವಾರ ಭಾರತವನ್ನು ತಲುಪಿದ್ದಾರೆ. ಅವರನ್ನು ವಿಮಾನದ ಮೂಲಕ ಕತಾರ್ಗೆ ನಂತರ ಭಾರತಕ್ಕೆ ಕಳುಹಿಸಲಾಯಿತು.
ಜಗದೀಶ್ ಪೂಜಾರಿ ಒಬ್ಬ ಮೆಕ್ಯಾನಿಕ್ ಆಗಿದ್ದು, ಪ್ರತಿಷ್ಠಿತ ಉತ್ತರ ಅಟ್ಲಾಂಟಿಕ್ ಸಂಸ್ಥೆಯಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಪೂಜಾರಿ ಅವರು ಒಂದು ದಶಕದಿಂದ ಅಫ್ಘಾನಿಸ್ತಾನದಲ್ಲಿದ್ದೇನೆ, ಈ ರೀತಿಯ ಪರಿಸ್ಥಿತಿಯನ್ನು ಬರುತ್ತದೆ ಎಂದು ಊಹಿಸಿರಲಿಲ್ಲ ಎಂದರು.
"ನಾವು ಯುಎಸ್ ನೌಕಾಪಡೆಯ ಭದ್ರತೆಯಲ್ಲಿದ್ದೆವು, ಆದರೆ ನಮ್ಮ ಸುತ್ತಮುತ್ತಲಿನ ಅವ್ಯವಸ್ಥೆಗಳನ್ನು ನೋಡಿದರೆ ನಮಗೆ ನಮ್ಮ ಜೀವದ ಮೇಲೆ ಯಾವುದೇ ಗ್ಯಾರಂಟಿ ಇರಲಿಲ್ಲ. ನಾನು ಭಾರತಕ್ಕೆ ಮರಳಲು ಮತ್ತು ನನ್ನ ಕುಟುಂಬವನ್ನು ಭೇಟಿ ಮಾಡಲು ಪ್ರತಿ ಕ್ಷಣವೂ ಪ್ರಾರ್ಥಿಸುತ್ತಿದ್ದೆ" ಎಂದು ಪೂಜಾರಿ ಹೇಳುತ್ತಾರೆ.
ಯುಎಸ್ ನೌಕಾಪಡೆಯವರು ನೀಡಿದ ಭರವಸೆ ಮತ್ತು ಅವರು ನಮಗೆ ಮಾಡಿದ ಸಹಾಯ ಮರೆಯುವಂತಿಲ್ಲ ಎಂದು ದಿನೇಶ್ ರೈ ಹೇಳಿದರು. "ಅವರಿಂದಾಗಿ ನಾವು ಇಂದು ಸುರಕ್ಷಿತವಾಗಿದ್ದೇವೆ ಮತ್ತು ಉಸಿರಾಡುತ್ತಿದ್ದೇವೆ" ಎಂದರು ರೈ.
ಇದನ್ನು ಓದಿ: Assam- Taliban :ತಾಲಿಬಾನ್ಗೆ ನನ್ನ ಬೆಂಬಲ ಎಂದ ವ್ಯಕ್ತಿ; ಅಸ್ಸಾಂ ರಾಜ್ಯವೊಂದರಲ್ಲೆ 16ಕ್ಕೆ ಏರಿದ ಬಂಧಿತರ ಸಂಖ್ಯೆ
ಜಗದೀಶ್ ಮತ್ತು ದಿನೇಶ್ ಅವರನ್ನು ಆಗಸ್ಟ್ 16 ರಂದು ವಿಮಾನದ ಮೂಲಕ ಕತಾರ್ಗೆ ಕರೆದೊಯ್ದು ಸೋಮವಾರ ದೆಹಲಿಗೆ ಕರೆತರಲಾಯಿತು. ಸೋಮವಾರ ರಾತ್ರಿ ಇಬ್ಬರೂ ತಮ್ಮ ಮನೆಗೆ ಮರಳಿದ್ದಾರೆ. ಸೋಮವಾರದ ವೇಳೆಗೆ, ಕರ್ನಾಟಕದವರು 10 ಜನ ಇದ್ದಾರೆ ಎಂದು ಕಾಬೂಲ್ನಲ್ಲಿ ಗುರುತಿಸಲಾಗಿತ್ತು. 10 ಜನರಲ್ಲಿ ಒಬ್ಬರು ಇಟಲಿಗೆ ತೆರಳಲು ನಿರ್ಧರಿಸಿದರು, ಇತರರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ