ಬೆಂಗಳೂರು: ಇಂದು ಬೆಳಗ್ಗೆ ರಾಜ್ಯದ ಹಲವೆಡೆ ಕಾಂಗ್ರೆಸ್ ನಾಯಕರ (Congress Leaders) ಅತ್ಯಾಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ಮಂಡ್ಯ (Mandya), ಬಾಗಲಕೋಟೆ (Bagalkot), ಹಾವೇರಿಯಲ್ಲಿ (Haveri) ದಾಳಿ ನಡೆದಿದ್ದು, ಕೋಟಿ ಕೋಟಿ ಹಣ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ (Maddur) ಕಾಂಗ್ರೆಸ್ ಅಭ್ಯರ್ಥಿ ಉದಯ್ ಆಪ್ತ ಸುರೇಶ್ ಬಾಬು ಎಂಬುವರ ಮನೆಯಲ್ಲಿ ಎರಡು ಕೋಟಿ ನಗದು ಹಣ ಪತ್ತೆಯಾಗಿದೆ. ಚುನಾವಣಾ ಅಧಿಕಾರಿಗಳು (Election Officers) 2 ಕೋಟಿ ಹಣ ಜಪ್ತಿ ಮಾಡಿದ್ದು, ತಪಾಸಣೆ ಮುಂದುವರಿದಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜು ಬೋರಾ ಹಾಗೂ ನಗರಸಭೆ ಮಾಜಿ ಅಧ್ಯಕ್ಷ, ಉದ್ಯಮಿ ವೆಂಕಟೇಶ್ ಸಾಕಾ ಮನೆಗಳ ಮನೆಗಳ ಮೇಲೆ ದಾಳಿ ನಡೆದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿಯ ನೆಹರೂ ನಗರದಲ್ಲಿ ಚನ್ನಬಸಪ್ಪ ಹುಲ್ಲತ್ತಿ ಎಂಬುವವರ ಮನೆ ಮೇಲೆ ದಾಳಿ ನಡೆದಿದೆ. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷರಾಗಿರುವ ಚನ್ನಬಸಪ್ಪ ಹುಲ್ಲತ್ತಿ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.
ಕೋಟಿ ಕೋಟಿ ಹಣ ಪತ್ತೆ
ಚನ್ನಬಸಪ್ಪ ಹುಲ್ಲತ್ತಿ ಅವರ ನಿವಾಸದಲ್ಲಿ ಸುಮಾರು 2 ಕೋಟಿ 85 ಲಕ್ಷ ರೂ. ಹಣ ಪತ್ತೆಯಾಗಿರುವ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ. ಇಂದು ಬೆಳಗಿನ ಸುಮಾರು 5.30ಕ್ಕೆ ಚನ್ನಬಸಪ್ಪ ನಿವಾಸಕ್ಕೆ ಎಂಟ್ರಿ ಕೊಟ್ಟ ಅಧಿಕಾರಿಗಳು ಸಿಕ್ಕಿರುವ ಹಣದ ಮೂಲ ಏನು ಎಂಬಿತ್ಯಾದಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಲಬುರಗಿಯಲ್ಲಿಯೂ ಐಟಿ ದಾಳಿ
ಮಾಜಿ ಸಚಿವ, ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ (Priyank Kharge) ಬೆಂಬಲಿಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚವ್ಹಾಣ್ ಎಂಬವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅರವಿಂದ್ ಚವ್ಹಾಣ್ (Aravind Chavan) ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ: DK Shivakumar: ಚುನಾವಣಾ ಅಖಾಡದಲ್ಲಿ ಡಿಕೆ ಶಿವಕುಮಾರ್ ಪುತ್ರ; ತಂದೆಯ ಪರ ಆಕಾಶ್ ಭರ್ಜರಿ ಪ್ರಚಾರ
ಶನಿವಾರ ಸಾಯಂಕಾಲ ಮನೆ, ಹೋಟೆಲ್, ಸ್ಟೋನ್ ಕ್ರಷರ್ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ರಾತ್ರಿ ಹನ್ನೊಂದು ಗಂಟೆವರೆಗೆ ಪರಿಶೀಲನೆ ನಡೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ