• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಆಪರೇಷನ್ ಕಮಲ ವಿಚಾರವಾಗಿ ವಿಧಾನಸಭೆಯಲ್ಲಿ ಹಾಲಿ, ಮಾಜಿ ಸಿಎಂಗಳ ನಡುವೆ ಬಿಸಿ ಬಿಸಿ ಚರ್ಚೆ!

ಆಪರೇಷನ್ ಕಮಲ ವಿಚಾರವಾಗಿ ವಿಧಾನಸಭೆಯಲ್ಲಿ ಹಾಲಿ, ಮಾಜಿ ಸಿಎಂಗಳ ನಡುವೆ ಬಿಸಿ ಬಿಸಿ ಚರ್ಚೆ!

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ.

ಜೆಡಿಎಸ್ ಯಾವತ್ತೂ ಡಿಮ್ಯಾಂಡ್ ಇರುವ ಪಕ್ಷ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದೇ ಇದ್ದಾಗ ಡಿಮ್ಯಾಂಡ್ ನಲ್ಲಿ ಇರಲೇ ಬೇಕು ಎಂದು ಸಿದ್ದರಾಮಯ್ಯ ಹೇಳಿದಾಗ ರಾಜ್ಯದಲ್ಲಿ ಜೆಡಿಎಸ್ ಡಿಮ್ಯಾಂಡ್ ಇರುವ ಪಕ್ಷ, ದೇಶದಲ್ಲಿ ಕಾಂಗ್ರೆಸ್ ಡಿಮ್ಯಾಂಡ್ ಇರುವ ಪಕ್ಷ ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದರು.

ಮುಂದೆ ಓದಿ ...
  • Share this:

    ಬೆಂಗಳೂರು: ರಾಜ್ಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಇಂದು ವಿಧಾನಸಭೆಯಲ್ಲಿ ಹಾಲಿ ಹಾಗೂ ಮಾಜಿ ಸಿಎಂಗಳ ನಡುವೆ ವಾಕ್ಸಮರವೇ ನಡೆಯಿತು. ಆಪರೇಷನ್ ಕಮಲ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು.


    ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದು, ಆಪರೇಷನ್ ಬರ್ಬಾದ್ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದಾಗ ಆಪರೇಷನ್​ಗೆ ನೀವೇ ಅಲ್ವಾ ಶಾಸಕರನ್ನು ಕಳುಹಿಸಿದ್ದು ಎಂದು ಬಿಎಸ್​ವೈ ಹೇಳಿದರು. ಆಗ ಸಿದ್ದರಾಮಯ್ಯ ಅವರು, ನಾನು ಕಳುಹಿಸಿದ್ದಾ..? ಸರಿ ಹಾಗಾದರೆ ಅವರನ್ನು ವಾಪಸ್ಸು ಕಳುಹಿಸಿಬಿಡಿ ಎಂದರು. ಮುಂದುವರೆದು, ಅಸೆಂಬ್ಲಿ ವಿಸರ್ಜನೆ ಮಾಡಿ ಬನ್ರಿ, ಎಲೆಕ್ಸನ್ ಗೆ ಹೋಗೋಣ. ಜನರು ಯಾರಿಗೆ ಆಶೀರ್ವಾದ ಮಾಡ್ತಾರೆ ನೋಡೋಣ. ವಿಧಾನಸಭೆ ವಿಸರ್ಜನೆ ಆದರೆ ನಾವು ಏನು ಹಿಂದೆ ಬೀಳಲ್ಲ. ನಾವು ಎಲೆಕ್ಷನ್ ಫೇಸ್ ಮಾಡೋಕೆ ಸಿದ್ದರಿದ್ದೇವೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಅದಕ್ಕೆ ಬಿಜೆಪಿ ಸದಸ್ಯರೆಲ್ಲರೂ ನಾವೆಲ್ಲರೂ ರೆಡಿ ಇದ್ದೇವೆ ಎಂದು ಹೇಳಿದರು.ಈ ವೇಳೆ ಇದಕ್ಕೆ ನೀವಿಬ್ಬರೂ ಒಪ್ಕೊಂಡ್ರೆ ನಾವು ರೆಡಿ ಇದ್ದೇವೆ ಎಂದು ಜೆಡಿಎಸ್​ನ ರೇವಣ್ಣ ಹೇಳಿದರು. ಇದಕ್ಕೂ ಮುನ್ನ ಉಪ ಚುನಾವಣೆ ಗೆಲುವಿನ ಬಗ್ಗೆ ಸಿಎಂ ಪ್ರಸ್ತಾಪ ಮಾಡಿದ್ದರು.


    ಕಳೆದ ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗ ನಾನು ಮಂಡಿಸಿರುವ ಬಜೆಟ್ ಮೇಲೆ ಚುನಾವಣೆಗೆ ಹೋಗ್ತೇವೆ. ನೀವು ಚುನಾವಣೆಗೆ ಬನ್ನಿ ನಾವು ಚುನಾವಣೆಗೆ ಬರ್ತೇವೆ. ಅಂತಿಮವಾಗಿ ಅಲ್ಲಿ ಗೆದ್ದು ಮತ್ತೆ ಇಲ್ಲಿ ಈ‌ ಬಗ್ಗೆ ಚರ್ಚೆ ಮಾಡೋಣ ಎಂದ ಸಿಎಂ ಹೇಳಿದಾಗ ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ ಅವರು ಉಪ ಚುನಾವಣೆ ಬಿಡಿ, ವಿಧಾನಸಭೆ ವಿಸರ್ಜನೆ ಮಾಡಿ ಬನ್ನಿ ಎಂದು ಸಿಎಂಗೆ ಸವಾಲು ಹಾಕಿದರು.


    ಹಿಂದೆ ನಾನೇ ಸಿಎಂ ಅಂತಿದ್ರಿ, ಆದರೆ ಅಂತಿಮವಾಗಿ ಜನರು ನಿಮ್ಮನ್ನು ಸೋಲಿಸಿದ್ರು ಎಂದು ಈಶ್ವರಪ್ಪ ಹೇಳಿದರು. ಅದಕ್ಕೆ ಆಪರೇಷನ್ ಕಮಲ ಮಾಡಿ ನೀವು ಅಧಿಕಾರಕ್ಕೆ ಬಂದಿದ್ದಿರಾ ಎಂದು ಕೈ ಶಾಸಕ ಕೆ.ಜೆ. ಜಾರ್ಜ್ ತಿರುಗೇಟು ನೀಡಿದರು. ನಿಮ್ಮ ಶಾಸಕರನ್ಮು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳೋಕೆ ಆಗಿಲ್ಲ ಎಂದು ಈಶ್ವರಪ್ಪ ಪ್ರತಿಯಾಗಿ ಹೇಳಿದರು. ಎಲ್ಲಾ ಕಡೆ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದೀರಾ. ಮಧ್ಯಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಎಲ್ಲಿ ಜನರಿಂದ ಗೆದ್ದು ಬಂದು ಅಧಿಕಾರಕ್ಕೆ ಬಂದಿದ್ದೀರಿ ಎಂದು ಕೈ ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.


    ಈ ವೇಳೆ ನಿಮಗೆ ಇಚ್ಛೆ ಇದ್ರೆ ವಿಧಾನಸಭೆ ಚುನಾವಣೆಗೆ ಬನ್ನಿ. ಇಲ್ಲ ಅಂದರೆ ಉಪ ಚುನಾವಣೆಗೆ ಹೋಗೋಣ ಎಂದು ಕೈ ಶಾಸಕ ರಮೇಶ್ ಕುಮಾರ್ ಹೇಳಿದರು. ಈ ಚರ್ಚೆ ಮುಗಿಯುವ ಹೊತ್ತಿಗೆ ಜೆಡಿಎಸ್ ಶಾಸಕ ಸಾ ರಾ ಮಹೇಶ್ , ಎಂಎಲ್ ಗಳನ್ನು ಸಿದ್ದರಾಮಯ್ಯ ಕಳುಹಿಸಿದ್ರಿ ಅಂತಾ ಸಿಎಂ ಹೇಳ್ತಿದ್ರು. ಅದು ನಿಜನಾ ಇಲ್ವಾ ಅಂತಾ ಹೇಳಬೇಕು ಎಂದರು. ಆಗ ಸಿದ್ದರಾಮಯ್ಯ ಅವರು, ನಾನು ನಿಜವಾಗಿಯೂ ಯಾರನ್ನು ಇನ್ನೊಂದು ಪಕ್ಷಕ್ಕೆ ಕಳುಹಿಸುವ ಮಟ್ಟಕ್ಕೆ ಇನ್ನೂ ಹೋಗಿಲ್ಲ. ಅಂತಹ ದಾರಿದ್ರ್ಯ ವ್ಯವಸ್ಥೆ ಗೆ ಇನ್ನೂ ನಾನು ಹೋಗಿಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಾಗಿದೆ. ಅಲ್ಲಿ ಇಲ್ಲಿ ಮಾತಾಡ್ತಾರೆ ಅಂತಾ ತಾವು ಹೇಳ್ತೀರಿ. ನನ್ನ ರಾಜಕೀಯ ಜೀವನದಲ್ಲಿ ಅಂತಹ ಪಾಪದ ಕೆಲಸ ಮಾಡಲ್ಲ. ನಾನು ನೇರವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಇದನ್ನು ಕೊನೆಯ ತನಕ ನಾನು ಮುಂದುವರೆಸಿಕೊಂಡು ಹೋಗ್ತೇನೆ ಎಂದು ಹೇಳಿದರು.


    ಇದನ್ನು ಓದಿ: ಇದೆಂಥಾ ಬಜೆಟ್ ರೀ, ನಿಮ್ಮ ಕುರ್ಚಿಯಲ್ಲಿ ನಾವು ಕೂರುವ ದಿನ ದೂರ ಇಲ್ಲ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಗುಡುಗು


    ಈ ವೇಳೆ ಮುಂದೆ ಎಲೆಕ್ಷನ್​ಗೆ ನಿಲ್ತೀರಾ ಎಂಬ ಅನುಮಾನ ಇದೆ, ಅದರ ಬಗ್ಗೆ ಸ್ಪಷ್ಟಪಡಿಸಿ ಎಂದ ಸ್ಪೀಕರ್ ಕಾಗೇರಿ ಕಾಲೆಳೆದರು. ಅದಕ್ಕೆ ರಮೇಶ್ ಕುಮಾರ್ ಅವರು, ಇದನ್ನು ಅವರು ತೀರ್ಮಾನ ಮಾಡೋದಲ್ಲ, ಮುಂದೆ ಅವರು ನಿಲ್ತಾರೆ, ಮುಂದೆ ಆಮೇಲೆ ಆಗುವ ಬದಲಾವಣೆ ನೋಡಿ ಎಂದರು. ನಂತರ ಮಾತನಾಡಿದ ಸಿದ್ದರಾಮಯ್ಯ, ನಾನು ಮುಂದೆ ಸ್ಪರ್ಧೆ ಮಾಡೇ ಮಾಡ್ತೇನೆ. ನಾನು ಎಲ್ಲಿಯೂ ಓಡಿ ಹೋಗಲ್ಲ ಎಂದು ಸ್ಪೀಕರ್ ಗೆ ಸ್ಪಷ್ಟನೆ ನೀಡಿದರು. ಆಗ ಸಚಿವ ಆರ್. ಅಶೋಕ್ ಅವರು, ಯಾವ ಕ್ಷೇತ್ರದಲ್ಲಿ ನಿಲ್ಲುತ್ತಿದ್ದೀರಿ ಅಂತಾ ಹೇಳಿ ಎಂದರು. ಅದಕ್ಕೆ ಸಿದ್ದರಾಮಯ್ಯ ಅವರು ಪದ್ಮನಾಭನಗರ ಎಂದರು ಕಿಚಾಯಿಸಿದರು.  ಬೇಡ ಸಾರ್, ಅಲ್ಲಿ ದೊಡ್ಡ ದೊಡ್ಡವರಿದ್ದಾರೆ ಎಂದು ಅಶೋಕ್ ಹೇಳಿದರು.  ನೀವು ಎಲ್ಲಿ ನಿಲ್ಲುತ್ತೇನೆ ಅಂತಾ ಹೇಳ್ತೀರಿ, ಮತ್ತು ನಮ್ಮ ಪಕ್ಷದ ಕ್ಯಾಂಡಿಡೇಟ್ ಗಳನ್ನೇ ಕರ್ಕೊಂಡು ಹೋಗ್ತೀರಿ. ಸಿಂಧಗಿಯಲ್ಲಿ ಕರ್ಕೊಂಡು ಹೋದ್ರಿ, ಈಗ ಶಿವಮೊಗ್ಗದಲ್ಲಿ ಕರ್ಕೊಂಡು ಹೋದ್ರಿ, ನಮ್ಮ ಕಥೆ ಏನಾಗಬೇಕು ಎಂದು ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಮಾತು ಸೇರಿಸಿದರು.


    ಜೆಡಿಎಸ್ ಯಾವತ್ತೂ ಡಿಮ್ಯಾಂಡ್ ಇರುವ ಪಕ್ಷ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದೇ ಇದ್ದಾಗ ಡಿಮ್ಯಾಂಡ್ ನಲ್ಲಿ ಇರಲೇ ಬೇಕು ಎಂದು ಸಿದ್ದರಾಮಯ್ಯ ಹೇಳಿದಾಗ ರಾಜ್ಯದಲ್ಲಿ ಜೆಡಿಎಸ್ ಡಿಮ್ಯಾಂಡ್ ಇರುವ ಪಕ್ಷ, ದೇಶದಲ್ಲಿ ಕಾಂಗ್ರೆಸ್ ಡಿಮ್ಯಾಂಡ್ ಇರುವ ಪಕ್ಷ ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದರು.

    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು