ಬಾಗಲಕೋಟೆ: ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ (Dr Sudha Murthy) ಅವರಿಗೆ ಪದ್ಮಭೂಷಣ (Padma Bhushan) ಪ್ರಶಸ್ತಿ ಸಿಕ್ಕಿರೋದು ಎಲ್ಲರಿಗೂ ಗೊತ್ತೇ ಇದೆ. ಕೇಂದ್ರ ಸರ್ಕಾರ (Central Govt) ಈ ಬಾರಿಯ ಗಣರಾಜ್ಯೋತ್ಸವದ (Republic Day) ಹಿನ್ನೆಲೆ ಕರ್ನಾಟಕದ ಡಾ ಸುಧಾಮೂರ್ತಿ, ಕಾದಂಬರಿಕಾರ ಡಾ ಎಸ್ಎಲ್ ಭೈರಪ್ಪ (Dr SL Bhyrappa) ಸೇರಿದಂತೆ ಹತ್ತಾರು ಮಂದಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ಇನ್ಫೋಸಿಸ್ ಮುಖ್ಯಸ್ಥೆ ಡಾ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದ ಹಿನ್ನೆಲೆ ಅವರ ಹುಟ್ಟೂರಿನಲ್ಲಿ ಕುಟುಂಬಸ್ಥರು ಸಂಭ್ರಮಾಚರಣೆ ಮಾಡಿದರು.
ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಸಂಬಂಧಿಕರಲ್ಲಿ ಸಂಭ್ರಮ ಮನೆಮಾಡಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕೆಎಚ್ಬಿ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಸುಧಾಮೂರ್ತಿ ಅವರಿಗೆ ಕುಟುಂಬದ ಸದಸ್ಯರು ಆರತಿ ಬೆಳಗಿ ಕುಂಕುಮ ಹಚ್ಚಿ ಶುಭಾಶಯ ಸಲ್ಲಿಸಿದ್ದಾರೆ. ಸುಧಾಮೂರ್ತಿ ಅವರ ಅಣ್ಣನ ಮಗ ನಾರಾಯಣ ಕುಲಕರ್ಣಿ, ಪತ್ನಿ ವನಜಾ ಕುಲಕರ್ಣಿ ಹಾಗೂ ಮಗಳು ಶ್ರೇಯಾ ಕುಲಕರ್ಣಿ ಅವರು ಸುಧಾಮೂರ್ತಿ ಅವರಿಗೆ ಆರತಿ ಬೆಳಗಿದ್ದು, ಈ ವೇಳೆ ಆರತಿ ತಟ್ಟೆಗೆ ಹಣ ಹಾಕಿದ ಸುಧಾಮೂರ್ತಿ ಕುಟುಂಬ ಸದಸ್ಯರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.
ಸುಧಾಮೂರ್ತಿ ಸರಳತೆಗೆ ಮೆಚ್ಚುಗೆ
ಕುಟುಂಬದ ಸದಸ್ಯರು ಆರತಿ ಬೆಳಗಿ ಕುಂಕುಮ ಹಚ್ಚಿ ಶುಭಾಶಯ ಸಲ್ಲಿಸುವ ವೇಳೆ ಸಾಮಾನ್ಯ ಮಹಿಳೆಯಂತೆ ನೆಲದ ಮೇಲೆ ಕುಳಿತುಕೊಂಡ ಆರತಿ ಮಾಡಿಸಿಕೊಂಡ ಡಾ ಸುಧಾಮೂರ್ತಿ ಅವರ ಸರಳತೆಗೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ಧಾರೆ. ಸುಧಾಮೂರ್ತಿ ಅವರು ಜಮಖಂಡಿ ನಗರಕ್ಕೆ ಬಂದಿದ್ದ ವೇಳೆಯೇ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದ್ದಕ್ಕೆ ಸಂಬಂಧಿಕರಿಗೆ ಸಂತಸವಾಗಿದೆ. ನಿನ್ನೆ ಸುಧಾಮೂರ್ತಿ ಅವರು ಬಾಗಲಕೋಟೆಗೆ ಭೇಟಿ ನೀಡಿದ್ದರು. ಬಳಿಕ ನಂತರ ಜಮಖಂಡಿಯಲ್ಲಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಸದ್ಯ ಅವರು ಪಂಡರಪುರಕ್ಕೆ ತೆರಳಿದ್ದಾರೆ.
106 ಮಂದಿಗೆ ಪದ್ಮ ಗೌರವ
ಕೇಂದ್ರ ಸರಕಾರ ಬುಧವಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಪ್ರಕಟಿಸಿದ್ದು, ಒಟ್ಟು 106 ಮಂದಿ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದರೆ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ಸಾಹಿತಿ ಎಸ್ಎಲ್ ಬೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಲ್ಲದೆ ಕರ್ನಾಟದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.
ಯಾರ್ಯಾರಿಗೆ ಸಿಕ್ಕಿದೆ ಪದ್ಮ ಗೌರವ?
ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಪಸರಿಸಲು ಶ್ರಮಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ , ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ದಿಂದ ಡಾ. ಖಾದರ್ ವಲ್ಲಿ ದುಡೆ ಕುಲ್ಲಾ, ತಮಟೆಯ ತಂದೆಯೆಂದು ಪ್ರಖ್ಯಾತರಾದ ಚಿಕ್ಕಬಳ್ಳಾಪುರದ ಪಿಂಡಿ ಪಾಪನಹಳ್ಳಿ ಮುನಿ ವೆಂಕಟಪ್ಪ, ಬೀದರ್ನ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ, ಪುರಾತತ್ವ ಶಾಸ್ತ್ರಜ್ಞ ಎಸ್. ಸುಬ್ಬರಾಮನ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು. ಹೀಗೆ ಕರ್ನಾಟಕದ ಒಟ್ಟು ಎಂಟು ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ