ಹುಬ್ಬಳ್ಳಿ: ಈ ಬಾರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಅವರಿಗೆ ಚುನಾವಣೆ ಟಿಕೆಟ್ ಸಿಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿರುವಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ. ಈ ಬಾರಿ ಸಕ್ರಿಯ ರಾಜಕಾರಣದಿಂದ ಜಗದೀಶ್ ಶೆಟ್ಟರ್ ಅವರಿಗೆ ಕೊಕ್ ಕೊಡಲಾಗುತ್ತೆ ಅನ್ನೋ ಮಾತುಗಳಿಗೆ ಪೂರಕ ಎಂಬಂತೆ ಪ್ರಹ್ಲಾದ್ ಜೋಶಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇದೀಗ ಪ್ರಹ್ಲಾದ್ ಜೋಶಿ ಅವರ ಈ ಮಾತುಗಳು ರಾಜಕೀಯ ಅಂಗಳದಲ್ಲಿ ಹೊಸ ಹೊಸ ಚರ್ಚೆಗಳಿಗೆ ಕಾರಣವಾಗಿದೆ. ಇತ್ತ ಜೋಶಿಯವರ ಹೇಳಿಕೆಗೆ ಜಗದೀಶ್ ಶೆಟ್ಟರ್ ತಿರುಗೇಟು ಸಹ ನೀಡಿದ್ದಾರೆ. ಇಬ್ಬರ ನಡುವಿನ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ.
ಜಗದೀಶ್ ಶೆಟ್ಟರ್ ಎಲ್ಲ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕನಾಗಿ ಮುಖ್ಯಮಂತ್ರಿಯಾಗಿ ಎಲ್ಲವನ್ನು ನಿಭಾಯಿಸಿದ್ದಾರೆ. ರಾಜ್ಯಪಾಲರೊಂದೇ ಆಗುವುದು ಬಾಕಿ ಇದೆ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ರಾಜಕೀಯ ನಿವೃತ್ತಿ ಸಂದೇಶನಾ?
ಪ್ರಹ್ಲಾದ್ ಜೋಶಿ ಮಾತು ತೀವ್ರ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಚುನಾವಣೆಯಲ್ಲಿ ಶೆಟ್ಟರಿಗೆ ಟಿಕೆಟ್ ತಪ್ಪುವುದು ಖಚಿತ. ರಾಜ್ಯಪಾಲ ಹುದ್ದೆ ಅಲಂಕರಿಸಿ ಇಲ್ಲವೇ ರಾಜಕೀಯದಿಂದ ನಿವೃತ್ತಿ ಹೊಂದಿ ಅಂತ ಸಂದೇಶ ಕೊಟ್ಟರಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶೆಟ್ಟರ್ ಅತ್ಯಂತ ಸರಳ ವ್ಯಕ್ತಿ ಅಂತ ಹೇಳುತ್ತಲೇ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ. ಜೋಶಿ ಪರೋಕ್ಷವಾಗಿ ಶೆಟ್ಟರ್ ಅವರ ರಾಜಕೀಯ ಭವಿಷ್ಯ ನುಡಿದಿದ್ದಾರೆ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಶೆಟ್ಟರ್ ತಿರುಗೇಟು
ಇನ್ನು ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿರುವ ಜಗದೀಶ್ ಶೆಟ್ಟರ್, ಅವರು ಕೇವಲ ರಾಜ್ಯಪಾಲ ಹುದ್ದೆ ಬಗ್ಗೆ ಮಾತನಾಡಿದ್ದಾರೆ. ಆದರೆ ಅದಕ್ಕೆ ಬೇರೆ ಮಾತಿನ ಅರ್ಥ ಕಲ್ಪಿಸುವುದು ಬೇಡ. ಈ ಹಿಂದೆಯೂ ರಾಜ್ಯಪಾಲ ಹುದ್ದೆ ಬಗ್ಗೆ ಕೇಳಿದಾಗ ನಿರಾಕರಿಸಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ರಾಜ್ಯಪಾಲ ಹುದ್ದೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲ್ಲ
ರಾಜ್ಯಪಾಲರ ಹುದ್ದೆ ನನಗೆ ಇಷ್ಟವಾಗಲ್ಲ. ಸಕ್ರಿಯ ರಾಜಕಾರಣದಿಂದಲೂ ದೂರ ಸರಿಯಲ್ಲ. ಮುಂದಿನ ಚುನಾವಣೆಯಲ್ಲಿಯೂ ನಾನೇ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಎಂದು ನ್ಯೂಸ್ 18ಗೆ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಒಟ್ಟಾರೆ ಜೋಶಿ - ಶೆಟ್ಟರ್ ಜುಗಲ್ಬಂದಿ ಜೋರಾಗಿದೆ. ರಾಜ್ಯಪಾಲ ಹುದ್ದೆ ಗುಮ್ಮದಿಂದ ಹೊರ ಬರೋಕೆ ಶೆಟ್ಟರ್ ಕಸರತ್ತು ನಡೆಸಿದ್ದಾರೆ. ಶೆಟ್ಟರ್ ಗೆ ಟಿಕೆಟ್ ತಪ್ಪಿಸಲು ಕೆಲವರಿಂದ ಮಸಲತ್ತು ಮುಂದುವರಿದಿದೆ.
‘ಕಲ್ಲೆಸೆಯೋಕೂ ಭಯ ಬೀಳ್ತಿದ್ದಾರೆ’
ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಪುತ್ತೂರು ತಾಲೂಕಿನ ಅಮರಗಿರಿಗೆ ಆಗಮಿಸಿದ ಅಮಿತ್ ಷಾ, ಭಾರತ ಮಾತಾ ಮಂದಿರವನ್ನು ಉದ್ಘಾಟಿಸಿದ್ದಾರೆ. ಹನುಮಗಿರಿ ಪಂಚಮುಖಿ ಅಂಜನೇಯ ಕ್ಷೇತ್ರದ ಪಕ್ಕದಲ್ಲೇ ಇರುವ ಭಾರತ ಮಾತಾ ಮಂದಿರವನ್ನು ಸುಮಾರು ಎರಡೂವರೆ ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.
ಅದಕ್ಕೂ ಮುನ್ನ ಹನುಮಗಿರಿಯ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾತಾಡಿದ ಅಮಿತ್ ಶಾ, 370 ರದ್ದು ಮಾಡೋವಾಗ ಕಾಂಗ್ರೆಸ್ ಜೆಡಿಎಸ್ನವ್ರು ಬೇಡ ಅಂದ್ರು. ರಕ್ತದ ಕೋಡಿ ಹರಿಯುತ್ತದೆ ಎಂದಿದ್ರು. ಆದರೆ, ರಕ್ತದ ಕೋಡಿ ಹರಿಸುವುದು ಬೇರೆ ಮಾತು. ಕಲ್ಲೆಸೆಯೋಕೂ ಭಯಪಡೋ ಸ್ಥಿತಿ ಬಂದಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ