ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ (Mandya) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು (Bengaluru Mysuru Expressway) ಉದ್ಘಾಟಿಸಿದರು. ಆದರೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ್ದಾರೆ ಅಂತ ವಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬಿಜೆಪಿ (BJP) ನಾಯಕರು ಮಾತ್ರ ಇಂದು ಅದ್ದೂರಿಯಾಗಿದೆಯೇ ಲೋಕಾರ್ಪಣೆ ಕಾರ್ಯಕ್ರಮ ನಡೆಸಿದ್ದರು. ಆದರೆ ಕಳೆದ ಆರು ತಿಂಗಳಿನಿಂದ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿದ್ದ ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂಬ ವರದಿ ಲಭ್ಯವಾಗಿದೆ. ಕಳೆದ ಸೆಪ್ಟೆಂಬರ್ನಿಂದ ಹೊಸ ಹೆದ್ದಾರಿಯಲ್ಲಿ (New Expressway) ಸಂಚಾರ ಆರಂಭವಾದ ಬಳಿಕ ಇದುವರೆಗೂ ಸಂಭವಿಸಿದ ವಿವಿಧ ಅಪಘಾತಗಳಲ್ಲಿ (Accident) 84ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದುವರೆಗೂ ಹೊಸ ಹೆದ್ದಾರಿಯಲ್ಲಿ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರು ತಿಂಗಳೊಳಗೆ ಅಪಘಾತ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ
ಹೆದ್ದಾರಿ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಹೀಗಾಗಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ಗಮನಿಸಿದರೆ ಹೆದ್ದಾರಿ ಸಾವಿನ ಹೆದ್ದಾರಿ ಆಗಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಹೌದು, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವಾಹನ ಸಂಚಾರ ಆರಂಭವಾಗಿ ಆರು ತಿಂಗಳೊಳಗೆ ಅಪಘಾತ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ. ಅದರಲ್ಲೂ ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದ ಡಿಸೆಂಬರ್, ಜನವರಿ ತಿಂಗಳಲ್ಲೇ ಹೆಚ್ಚು ಅಪಘಾತಗಳು ಸಂಭವಿಸಿದೆ.
ಇದನ್ನೂ ಓದಿ: Bengaluru: ಹಿಂದಿ ಮಾತನಾಡಿ ಎಂದ ಯುವತಿಗೆ ಚಳಿ ಬಿಡಿಸಿದ ಆಟೋ ಚಾಲಕ; ಕನ್ನಡ ಪ್ರೇಮಿಯ ಭಾಷಾ ಪ್ರೇಮದ ವಿಡಿಯೋ ವೈರಲ್
ರಾಮನಗರದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ 110ಕ್ಕೂ ಹೆಚ್ಚು ಅಪಘಾತ
ದಶಪಥ ಹೆದ್ದಾರಿಯ ಕುಂಬಳಗೋಡಿನಿಂದ ನಿಡಘಟ್ಟವರೆಗಿನ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಇದುವರೆಗೂ 110ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದೆ. ಈ ಅಪಘಾತಗಳಲ್ಲಿ 41ಕ್ಕೂ ಹೆಚ್ಚು ಮಂದಿ ಸಾವು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಪ್ರಾಯಾಣಿಕರು ಗಾಯಗೊಂಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಒಟ್ಟು 51 ಕಿ.ಮೀ ದೂರ ದಶಪಥ ಮಾರ್ಗ ಸಾಗುತ್ತದೆ. ಅದರಲ್ಲೂ ಬಿಡದಿ, ರಾಮನಗರ, ಚನ್ನಪಟ್ಟಣ ಬೈಪಾಸ್ಗಳಲ್ಲಿ ವಾಹನಗಳ ವೇಗ ಹೆಚ್ಚಾಗಿದೆ. ಈ ಮಾರ್ಗಗಳಲ್ಲಿ ಗಂಟೆಗೆ 120-140 ಕಿ.ಮೀ. ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಇದರೊಂದಿಗೆ ಸರ್ವೀಸ್ ರಸ್ತೆಗಳಲ್ಲಿಯೂ ವಾಹನ ಓಡಾಟ ಹೆಚ್ಚಿದೆ.
ಮಂಡ್ಯ ವ್ಯಾಪ್ತಿಯಲ್ಲಿ 225ಕ್ಕೂ ಹೆಚ್ಚು ಅಪಘಾತ
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 225 ಅಪಘಾತಗಳು ಸಂಭವಿಸಿದೆ. ಇದರಲ್ಲಿ ಒಟ್ಟು 43 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯ ಲಕ್ಷ್ಮೀಪುರ ಗೇಟ್ನಿಂದ ಮಣಿಪಾಲ್ ಆಸ್ಪತ್ರೆವರೆಗಿನ 5 ಕಿ.ಮೀ. ಹೆದ್ದಾರಿಯಲ್ಲಿ 6 ತಿಂಗಳಿಂದ ಸುಮಾರು 30 ಅಪಘಾತ ಸಂಭವಿಸಿದ್ದು, ಈ ಅಪಘಾತಗಳಲ್ಲಿ 8 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು, ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ 40 ಅಪಘಾತಗಳಲ್ಲಿ 9 ಮಂದಿ ಸಾವನ್ನಪ್ಪಿದ್ದರೆ, ಜನವರಿಯಲ್ಲಿ 55 ಅಪಘಾತಗಳಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಕಳೆದ ಎರಡು ತಿಂಗಳಿಂದ ಈಚೆಗೆ 150ಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತಗಳು ಹೆಚ್ಚಾಗಲು ಕಾರಣವೇನು?
ಹೊಸದಾಗಿ ನಿರ್ಮಾಣವಾಗಿರುವ ಬೆಂಗಳೂರು- ಮೈಸೂರು ದಶಪಥದಲ್ಲಿ ವಾಹನಗಳ ವೇಗ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಬೇಗ ತಲುಪುವ ವಾಹನ ಸವಾರರ ಧಾವಂತದಿಂದ ಅಪಘಾತಗಳು ಹೆಚ್ಚಾಗುತ್ತಿದೆಯಂತೆ. ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟದವರೆಗೂ ಕಾಮಗಾರಿ ಪೂರ್ಣಗೊಂಡಿದ್ದು, ನಿಡಘಟ್ಟದಿಂದ ಮೈಸೂರುವರೆಗೆ ಕಾಮಗಾರಿ ಪ್ರಗತಿಯಲ್ಲಿದೆ.
ಸದ್ಯ ವಾಹನ ಓಡಾಟಕ್ಕೆ ಮಾತ್ರ ಹೆದ್ದಾರಿ ಸಿದ್ಧಗೊಂಡಿದ್ದು, ವಾಹನ ಸಂಚಾರಕ್ಕೆ ಅಗತ್ಯವಿರುವ ವ್ಯವಸ್ಥೆ ಇನ್ನೂ ಸಿದ್ಧಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ವಾಹನ ಸವಾರರು 90 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ತಲುಪಬೇಕು ಎಂಬ ಧಾವಂತ ಹೆಚ್ಚಾಗಿದೆ. ಅಗತ್ಯ ಕಡೆ ಸೂಕ್ತ ಸೂಚನಾ ಫಲಕ ಇಲ್ಲದಿರುವುದು, ವೇಗ ಮಿತಿ ಸೂಚಿಸುವ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಹೆದ್ದಾರಿಯಲ್ಲಿ ಸೂಚನಾ ಫಲಕಗಳು ಇಲ್ಲದಿರುವುದು ಅಪಘಾತ ಹೆಚ್ಚಳವಾಗಲು ಕಾರಣವಾಗುತ್ತಿದೆಯಂತೆ.
ದಶಪಥದಲ್ಲಿ ವಾಹನ ವೇಗಕ್ಕೆ ಮಿತಿ ಇಲ್ಲ!
ಇನ್ನು, ಮಂಡ್ಯ ಮತ್ತು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚು ಸೇತುವೆಗಳು ನಿರ್ಮಾಣ ಮಾಡಲಾಗಿದೆ. ಮೇಲ್ ಸೇತುವೆ ಹಾಗೂ ಕೆಳಸೇತುವೆಗಳು ಹೆಚ್ಚು ತಿರುವುಗಳಿಂದ ಕೂಡಿದ ರಸ್ತೆ ಹೊಂದಿದ್ದು, ಜೊತೆಗೆ ಸೇತುವೆ ಮಾರ್ಗದಿಂದ ರಸ್ತೆಗೆ ಸ್ಪರ್ಶಿಸುವ ಸ್ಥಳದಲ್ಲಿ ವಾಹನಗಳು ಜಾರುವ ಪರಿಸ್ಥಿತಿ ಇದೇ ಎಂಬ ಮಾತು ಕೇಳಿ ಬಂದಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣ ಆರೋಪ ಕೇಳಿ ಬಂದಿದೆ. ಅಲ್ಲದೆ ದಶಪಥದಲ್ಲಿ ವಾಹನ ವೇಗಕ್ಕೆ ಮಿತಿ ಇಲ್ಲದಿರುವುದು ಕೂಡ ಪ್ರಮುಖ ಕಾರಣವಾಗಿದೆ.
ಸದ್ಯ ಎಕ್ಸ್ಪ್ರೆಸ್ ವೇ ಹಾಗೂ ಬೈಪಾಸ್ ರಸ್ತೆ ನಡುವೆ ಏಳು ಅಡಿ ಎತ್ತರದ ಬೇಲಿ ನಿರ್ಮಾಣ ಮಾಡಲಾಗಿದೆ. ಇದರ ನಡುವೆ ಆಂಬುಲೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆ ವಾಹನಗಳ ಓಡಾಟಕ್ಕೂ ಅವಕಾಶ ನೀಡಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೈಪಾಸ್ ರಸ್ತೆಗಳಲ್ಲಿ ಸುರಕ್ಷತೆ ಕೊರತೆ ಹಾಗೂ
ವೈದ್ಯಕೀಯ ಸೇವೆ ಕೊರತೆ ಹೆಚ್ಚಿದೆ.
ಇದನ್ನೂ ಓದಿ: Bengaluru-Mysuru Expressway: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ; ಡಬಲ್ ಇಂಜಿನ್ ಸಾಧನೆ ಜಪಿಸಿದ ಪ್ರಧಾನಿ
ಉದ್ಘಾಟನೆಯ ದಿನವೇ ದಶಪಥ ರಸ್ತೆಯಲ್ಲಿ ಅಪಘಾತ
ಇಂದು ಪ್ರಧಾನಿ ಮೋದಿ ಅವರು ದಶಪಥ ರಸ್ತೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರ ನಡುವೆಯೇ ಇಂದು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಂಡ್ಯದ ಮದ್ದೂರಿನ ಬಳಿಯ ಶಿಂಷಾ ನದಿಯ ಮೇಲ್ ಸೇತುವೆ ಮೇಲೆ ಕಾರು ಪಲ್ಟಿಯಾಗಿದೆ.
ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೈಸೂರಿನ ಮೂಲದ ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಚಾಲಕ ನಿದ್ದೆ ಮಂಪರಲ್ಲಿ ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
(ಮಾಹಿತಿ: ಸುನೀಲ್, ನ್ಯೂಸ್18 ಕನ್ನಡ, ಮಂಡ್ಯ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ