ಬೆಂಗಳೂರು: ಎಲ್ಲಿಯವರೆಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ದಿನೇ, ದಿನೇ ಅಮಾಯಕರನ್ನು ನಂಬಿಸಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಎಷ್ಟೋ ಮಂದಿ, ಚೀಟಿ, ಲೋನ್, ಫಂಡ್ ಹೀಗಿ ನಾನಾ ರೀತಿಯ ವ್ಯವಹಾರಗಳಿಗೆ ಕೈ ಹಾಕಿ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದ್ದಾರೆ. ಹೀಗಿದ್ದರೂ ಜನ ಇವುಗಳ ಮೊರೆ ಹೋಗುವುದನ್ನು ಮಾತ್ರ ಬಿಟ್ಟಿಲ್ಲ. ಸದ್ಯ ಮೈಸೂರು (Mysuru) ರಾಜ ವಂಶಸ್ಥರ ಹೆಸರು ಹೇಳಿಕೊಂಡು ವ್ಯಕ್ತಿಯೋರ್ವ ಸಾಫ್ಟ್ವೇರ್ ಕಂಪನಿ (Software Company) ಮಾಲೀಕನಿಗೆ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ರಾಜ ವಂಶಸ್ಥರಂತೆ ಮೈ ತುಂಬಾ ಬಂಗಾರ, ರೇಷ್ಮೆ ಬಟ್ಟೆ, ಕೈಯಲ್ಲಿ ರಾಜರು ಹಿಡಿಯುವ ಕೋಲು ಹಿಡಿದುಕೊಂಡು ಪೋಸ್ ನೀಡುತ್ತಾ, ವ್ಯಕ್ತಿಯನ್ನು ನಂಬಿಸಿ ಪಂಗನಾಮ ಹಾಕಿದ್ದಾನೆ. ಲೋನ್ (Loan) ಬರುವ ಮುನ್ನವೇ ಆರೋಪಿ, ವ್ಯಕ್ತಿಯಿಂದ ಕಮೀಷನ್ ಪಡೆದಿದ್ದಾನೆ.
ಕಂಪನಿ ಡೆವಲಪ್ ಮಾಡಲು ಲೋನ್ ಮೊರೆ ಹೋಗಿದ್ದ ವ್ಯಕ್ತಿ
ವಂಚನೆಗೊಳಗಾದ ವ್ಯಕ್ತಿಯನ್ನು ಹೈದರಾಬಾದ್ ಮೂಲದ 51 ವರ್ಷದ ನಾಗರಮಣೇಶ್ವರ ಎಂದು ಗುರುತಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಪಟ್ಟಣ ಬಾಗಲೂರಿನಲ್ಲಿ ಪ್ರಕರಣ ವರದಿಯಾಗಿದೆ. ಸಾಫ್ಟ್ ವೇರ್ ಕಂಪನಿ ಮಾಲೀಕ ಆಗಿದ್ದ ನಾಗರಮಣೇಶ್ವರ ಅವರಿಗೆ ತಮ್ಮ ಕಂಪನಿಯನ್ನು ಡೆವಲಪ್ (ಅಭಿವೃದ್ದಿ) ಮಾಡಲು 10 ಕೋಟಿ ಲೋನ್ ಅಗತ್ಯವಿತ್ತು. ಹೀಗಾಗಿ ಲೋನ್ ಮೊರೆ ಹೋಗಲು ನಿರ್ಧರಿಸಿದ್ದರು.
ಮೈ ತುಂಬಾ ಬಂಗಾರ, ರೇಷ್ಮೆ ಬಟ್ಟೆಯಲ್ಲಿ ಆರೋಪಿ ಬಿಲ್ಡಪ್
ಈ ವೇಳೆ ಮೈಸೂರು ರಾಜವಂಶಸ್ಥರೆಂದು ಹೇಳಿಕೊಂಡು ಮನೋಜ್ ಎಂಬಾತ ನಾಗರಮೇಶ್ವರ ಅವರನ್ನು ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲದೇ ಯಾವುದೇ ಅನುಮಾನ ಬರದಂತೆ ರಾಜನ ವೇಷಭೂಷಣದಲ್ಲೇ ನಾಗರಮಣೇಶ್ವರ ಅನ್ನು ಮನೋಜ್ ಭೇಟಿ ಮಾಡಿದ್ದನು. ಮೈ ತುಂಬಾ ಬಂಗಾರ, ರೇಷ್ಮೆ ಬಟ್ಟೆ, ಕೈಯಲ್ಲಿ ರಾಜರು ಹಿಡಿಯುವ ಕೋಲು ಹಿಡಿದು ಬಿಲ್ಡಪ್ ನೀಡುವ ಮೂಲಕ ನಾಟಕ ಮಾಡಿದ್ದನು. ಅಲ್ಲದೇ ನಾಗರಮಣೇಶ್ವರ ಅವರಿಗೆ ಲೋನ್ ಕೊಡಿಸುವುದಾಗಿ ಭರವಸೆ ನೀಡಿದ್ದನು.
ಲೋನ್ ಬರೋ ಮುನ್ನವೇ 10 ಪರ್ಸೆಂಟ್ ಕಮೀಷನ್ ಪಡೆದಿದ್ದ ಆರೋಪಿ
ಈ ಎಲ್ಲವನ್ನು ಕಂಡು ಮನೋಜ್ ಅನ್ನು ನಾಗರಮಣೇಶ್ವರ ಕೂಡ ಆರೋಪಿಯನ್ನು ಸಂಪೂರ್ಭವಾಗಿ ನಂಬಿದ್ದರು. ಇನ್ನೂ ಲೋನ್ ಬರುವ ಮುನ್ನವೇ 10 ಪರ್ಸೆಂಟ್ ಕಮೀಷನ್ (1 ಕೋಟಿ) ಹಣವನ್ನು ನಾಗರಮಣೇಶ್ವರ ಅವರಿಂದ ಮನೋಜ್ ಪಡೆದುಕೊಂಡಿದ್ದನು.
ಬಳಿಕ ಎಷ್ಟು ದಿನವಾದರೂ ಲೋನ್ ಕೊಡಿಸದೇ ಇದ್ದಿದ್ದರಿಂದ ಕೊನೆಗೆ ತಾನು ನೀಡಿದ ಹಣವನ್ನು ವಾಪಸ್ ನೀಡುವಂತೆ, ನಾಗರಮಣೇಶ್ವರ್ ಮನೋಜ್ಗೆ ಒತ್ತಡ ಹೇರಿದ್ದಾರೆ. ಹೀಗಾಗಿ ಹಣ ಕೊಡುತ್ತೇವೆ ಆದರೆ ಬೆಂಗಳೂರಿಗೆ ಬಂದು ತೆಗೆದುಕೊಂಡು ಹೋಗಿ ಎಂದು ನಾಗರಮಣೇಶ್ವರ್ಗೆ ತಿಳಿಸಿದ್ದನು.
ಇದನ್ನೂ ಓದಿ: Education Loan: ನಿಮ್ಮ ಮಕ್ಕಳ ಭವಿಷ್ಯಕ್ಕೆ ಈ ರೀತಿ ಹಣಕಾಸಿನ ಯೋಜನೆ ರೂಪಿಸಿ
ಹಣ ವಾಪಸ್ ಪಡೆಯಲು ಬೆಂಗಳೂರಿಗೆ ಬಂದಿದ್ದ ವ್ಯಕ್ತಿ
ಹೀಗಾಗಿ ಬೆಂಗಳೂರಿಗೆ ಬಂದ ನಾಗರಮಣೇಶ್ವರ ಫೋರ್ ಸೆಂಟಮ್ ಹೋಟೆಲ್ ನಲ್ಲಿ ತಂಗಿದ್ದರು. ಬಳಿಕ ರಮಣೇಶ್ವರ ಅವರನ್ನು ದಲ್ಲಾಳಿ ಕುಮಾರ್ ಎಂಬಾತ ಬೂದಿಗೆರೆಗೆ ಬರಲು ಸೂಚಿಸಿದ್ದಾನೆ. ಅದರಂತೆ ಕ್ಯಾಬ್ ಬುಕ್ ಮಾಡಿ ರಮಣೇಶ್ವರ್ ದಲ್ಲಾಳಿ ಹೇಳಿದ ಸ್ಥಳಕ್ಕೆ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾರನ್ನು ಅಡ್ಡ ಹಾಕಿ ರಮಣೇಶ್ವರ್ ಮೇಲೆ ಆದಿತ್ಯ, ರಂಜಿತ್ ಹಾಗೂ ಶ್ರೀಕಾಂತ್ ರೆಡ್ಡಿಎಂಬ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: Software Engineering ಓದಿದವರು ಈ ಕೆಲಸಗಳನ್ನು ಮಾಡುವುದು ನಿಜಕ್ಕೂ ಲಾಭದಾಯಕ
ಘಟನೆ ಬಳಿಕ ಬಾಗಲೂರು ಪೊಲೀಸರು ದಲ್ಲಾಳಿ ಕುಮಾರ್, ರಾಜವಂಶಸ್ಥನೆಂದು ಹೇಳಿಕೊಂಡಿದ್ದ ಮನೋಜ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಸದ್ಯ ಮತ್ತೋರ್ವ ಆರೋಪಿ ದಲ್ಲಾಳಿ ಕುಮಾರ್ ಮಾತ್ರ ಹೈದರಾಬಾದ್ನಲ್ಲಿ ತಲೆಮರಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ