CD Politics: ಆಕ್ಷೇಪಾರ್ಹ ಸಿಡಿ ಇದ್ದರೆ ಮೊದಲ ಬಹಿರಂಗಪಡಿಸಿ ಆನಂತರ ಮಾತನಾಡಿ; ಯತ್ನಾಳ್ಗೆ ಶಾಸಕಿ ಹೆಬ್ಬಾಳ್ಕರ್ ಸವಾಲು
ಇವೆಲ್ಲ ಸುಳ್ಳು. ಸತ್ಯಕ್ಕೆ ದೂರವಾದ ವಿಚಾರ. ಒಂದು ವೇಳೆ ಅವರ ಬಳಿ ಅಂತಹ ಸಿಡಿ ಇದ್ದರೆ ದಯವಿಟ್ಟು ಅದನ್ನು ಬಹಿರಂಗಪಡಿಸಲಿ. ಅದನ್ನು ಎದುರಿಸಲು ನಾವೆಲ್ಲರೂ ಸಜ್ಜಾಗಿಯೇ ಇದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ತಿಳಿಸಿದ್ದಾರೆ.
ಬೆಂಗಳೂರು (ಜನವರಿ 15); ಶಾಸಕ ಬಸನಗೌಡ ಪಾಟೀಲ್ ಅವರ ಬಳಿ ಆಕ್ಷೇಪಾರ್ಹ ಸಿಡಿ ಇದ್ದರೆ ಮೊದಲು ಅವರು ಅದನ್ನು ಬಹಿರಂಗಪಡಿಸಲಿ. ಬಹಳ ದಿನಗಳಿಂದ ಅವರು ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಮೊದಲ ಸಿಡಿ ಬಹಿರಂಗವಾಗಲಿ. ಅದನ್ನು ಎದುರಿಸಲು ಎಲ್ಲರೂ ತಯಾರಾಗಿದ್ದೇವೆ. ಅದರಲ್ಲಿ ತಪ್ಪುಗಳಿದ್ದರೆ ನಮ್ಮ ನಾಯಕರು ಕ್ರಮ ತಗೆದುಕೊಳ್ಳುತ್ತಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.. ಯಡಿಯೂರಪ್ಪ ವಿರುದ್ಧ ಆಗಿಂದಾಗ್ಗೆ ಕಿಡಿಕಾರುತ್ತಲೇ ಇರುವ ಯತ್ನಾಳ್ ಗುರುವಾರ ಹೊಸ ಬಾಂಬ್ ಸಿಡಿಸಿದ್ದರು. ಸ್ಪೋಟಕ ಹೇಳಿಕೆ ನೀಡಿದ್ದ ಅವರು "ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಆ ಸಿಡಿಯನ್ನು ಮಾಡಿದ್ದೇ ಅವರ ಮೊಮ್ಮಗ. ಹಿಂದೆ ಇದ್ದದ್ದೇ ಆ ಸಿಡಿ, ಯಾರೊಂದಿಗೆ ಇದೆ ಅಂತ ತಮಗೆಲ್ಲಾ ಅದು ಗೊತ್ತೇ ಇದೆ. ನಾನು ಆ ಬಗ್ಗೆ ಏನು ಹೇಳಬೇಕಿಲ್ಲ. ಈ ಸಿಡಿಯನ್ನು ಮುಂದಿಟ್ಟು ಯಡಿಯೂರಪ್ಪನವರನ್ನು ಬ್ಲ್ಯಾಕ್ಮೇಲ್ ಮಾಡಿ ಹಲವರು ಸಚಿವರಾಗುತ್ತಿದ್ದಾರೆ" ಎಂದು ಆರೋಪಿಸಿದ್ದರು.
ಯತ್ನಾಳ್ ಅವರ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಬಿಜೆಪಿ ಪಕ್ಷವನ್ನು ಮುಜುಗುರಕ್ಕೂ ಈಡುಮಾಡಿದೆ. ಹೀಗಾಗಿ ಈ ಸಂಬಂಧ ಹೇಳಿಕೆ ನೀಡದಂತೆ ಬಿಜೆಪಿ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಸಹ ಎಲ್ಲಾ ನಾಯಕರಿಗೂ ಸೂಚನೆ ನೀಡಿದ್ದಾರೆ. ಈ ನಡುವೆಯೂ ಯತ್ನಾಳ್ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, "ವಿಜಯಪುರ ಶಾಸಕ ಯತ್ನಾಲ್ ಹಲವು ದಿನಗಳಿಂದ ಈ ಸಿಡಿ ವಿಚಾರವನ್ನು ಮಾತನಾಡುತ್ತಲೇ ಇದ್ದಾರೆ.
ಇವೆಲ್ಲ ಸುಳ್ಳು. ಸತ್ಯಕ್ಕೆ ದೂರವಾದ ವಿಚಾರ. ಒಂದು ವೇಳೆ ಅವರ ಬಳಿ ಅಂತಹ ಸಿಡಿ ಇದ್ದರೆ ದಯವಿಟ್ಟು ಅದನ್ನು ಬಹಿರಂಗಪಡಿಸಲಿ. ಅದನ್ನು ಎದುರಿಸಲು ನಾವೆಲ್ಲರೂ ಸಜ್ಜಾಗಿಯೇ ಇದ್ದೇವೆ. ಆ ಸಿಡಿಯಲ್ಲಿ ತಪ್ಪಾದ ವಿಚಾರ ಏನೇ ಇದ್ದರೂ ಆ ಕುರಿತು ಹಿರಿಯ ನಾಯಕರು ಮತ್ತು ಪಕ್ಷದ ವರಿಷ್ಠರು ಸೂಕ್ತ ಕ್ರಮ ಜರುಗಿಸುತ್ತಾರೆ" ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಅವರು, "ಸಚಿವ ಸಂಪುಟದಲ್ಲಿ ಎಲ್ಲರಿಗೂ ಮಂತ್ರಿಗಿರಿ ಕೊಡುವುದಕ್ಕೆ ಆಗಲ್ಲ. ನಮ್ಮ ಸರ್ಕಾರ ಬರಲಿಕ್ಕೆ ಕಾಂಗ್ರೆಸ್ ನಿಂದ ನಮ್ಮ ಪಕ್ಷಕ್ಕೆ ಬಂದು ಮತ್ತೆ ಚುನಾವಣೆ ಎದುರಿಸಿದವರಿಗೆ ಗೆದ್ದವರಿಗೆ ನ್ಯಾಯ ಕೊಡಿಸಬೇಕು. ಅನೇಕ ಶಾಸಕರಿಗೆ ಅಸಮಾಧಾನ ಇದ್ದರೂ ಕೂಡ ನಮ್ಮ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ನಾಯಕರು ಅವರೆಲ್ಲರನ್ನು ಸಮಾಧಾನಪಡಿಸಿ ಯೋಗ್ಯ ಸಮಯ ಬಂದಾಗ ಯೋಗ್ಯ ಅವಕಾಶ ಒದಗಿಸುತ್ತಾರೆ.
ನಮ್ಮ ಮುಖ್ಯಮಂತ್ರಿ ನುಡಿದಂತೆ ನಡೆಯುವ ನಾಯಕರು. ಯಾರಿಗೂ ಅನ್ಯಾಯ ಮಾಡಲು ಅವರು ಪ್ರಯತ್ನ ಪಟ್ಟಿಲ್ಲ. ಎಲ್ಲರನ್ನು ನಿಭಾಯಿಸಿಕೊಂಡು ಹೋಗುವ ಪರಿಸ್ಥಿತಿ ಇದೆ. ಅದನ್ನು ಅವರು ನಿಭಾಯಿಸುತ್ತಿದ್ದಾರೆ. ಅಸಮಾಧಾನಗೊಂಡವರಿಗೆ ಸಮಾಧಾನ ಮಾಡುವ ಪ್ರಯತ್ನವನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಮಾಡುತ್ತಾರೆ" ಎಂದು ತಿಳಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ