ಕಲಬುರಗಿ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ (Assembly Election) ಜೆಡಿಎಸ್ (JDS) ಅಧಿಕಾರಕ್ಕೆ ಬರಲಿದ್ದು, ಎಚ್ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾಗಲಿದ್ದಾರೆ. ಒಂದು ವೇಳೆ ಅವರು ಮುಖ್ಯಮಂತ್ರಿಯಾಗದಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಕಲಬುರಗಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ. ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಮರದ ಹಕ್ಕಿಗಳು. ಎರಡೂ ಪಕ್ಷದಲ್ಲಿ ಹಲವು ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಯಾರು ಜೈಲಿಗೂ ಹೋಗಿಲ್ಲ, ಬೇಲ್ ಮೇಲೂ ಹೊರಬಂದಿಲ್ಲ ಎಂದು ರಾಷ್ಟ್ರೀಯ ಪಕ್ಷಗಳ ಕಾಲೆಳೆದಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಇಬ್ರಾಹಿಂ, ಕಾಂಗ್ರೆಸ್ ನಾಯಕರು ಎಸಿ ಬಸ್ನಲ್ಲಿ ತಿರುಗುತ್ತಿದ್ದರೆ, ಬಿಜೆಪಿ ಪಕ್ಷದವರು ಹೆಲಿಕಾಪ್ಟರ್ ಮೂಲಕ ತಿರುಗಾಡುತ್ತಿದ್ದಾರೆ. ಎರಡೂ ಪಕ್ಷದವರು ತಮ್ಮ ಬಳಿಗೆ ಜನರನ್ನು ಕರೆಸಿಕೊಳ್ಳುತ್ತಾರೆ. ಆದರೆ ನಾವು ಜನರ ಬಳಿಗೆ ಹೋಗುತ್ತಿದ್ದೇವೆ. ಅವರಿಗೆ ಜನರ ಹಿತ ಬೇಕಾಗಿಲ್ಲ, ಅವರಿಗೆ ಕೇವಲ ಸಿ.ಡಿ.ಗಳು ಬೇಕಾಗಿವೆ. ಇದನ್ನೆಲ್ಲಾ ಹೇಳುವುದಕ್ಕೆ ನನಗೆ ನಾಚಿಕೆ ಆಗುತ್ತದೆ ಎಂದು ವ್ಯಂಗ್ಯವಾಗಿಡಿದರು.
ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಟೀಕಿಸುವುದರಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ಆರಿಸಿ ತಂದಿದ್ದೇ ನಾನು. ಆದರೆ ಇಂದು ಅವರು ಸರಿಯಾದ ಕ್ಷೇತ್ರ ಇಲ್ಲದೆ ಪರದಾಡುವಂತಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮೊದಲು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಭದ್ರ ಮಾಡಿಕೊಳ್ಳಲಿ. ತಮ್ಮ ಸ್ವ ಪ್ರಯತ್ನದಿಂದ ಗೆದ್ದು ತೋರಿಸಲಿ, ನಂತರ ಮತ್ತೊಬ್ಬರ ಬಗ್ಗೆ ಟೀಕಿಸಲಿ ಎಂದು ಕಿಡಿಕಾಡಿದರು.
13 ಶಾಸಕರನ್ನು ಮುಂಬೈಗೆ ಕಳುಹಿಸಿದ್ದು ಯಾರು?
ಸಮ್ಮಿಶ್ರ ಸರ್ಕಾರ ಬೀಳಲು ಕಾರಣ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾಂಗ್ರೆಸ್ಸಿನ 13 ಜನ ಶಾಸಕರನ್ನು ಮುಂಬೈಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ. ಬಿಜೆಪಿಯ ಬಿ ಟೀಮ್ ಯಾರು ಎಂಬುದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಅಧಿಕಾರದಲ್ಲಿದ್ದಾರೆ ಭಾಗ್ಯಗಳನ್ನ ಏಕೆ ಕೊಡಲಿಲ್ಲ?: ಎಚ್ಡಿಕೆ
ಪಂಚರತ್ನ ರಥಯಾತ್ರೆಯ ಪ್ರಯುಕ್ತ ರಾಯಚೂರಿಗೆ ಆಗಮಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಿಸುತ್ತಿರುವ ಭಾಗ್ಯಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈಗ ಕಾಂಗ್ರೆಸ್ನವರು ಚುನಾವಣೆಗೂ ಮುನ್ನ 200 ಯುನಿಟ್ ಉಚಿತ, ಮಹಿಳೆಯರಿಗೆ 2000 ರೂ. ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಕೊಡಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ನನಗೆ ಯಾವುದೇ ನಿರ್ಣಯ ತಗೆದುಕೊಳ್ಳುವ ಸ್ವತಂತ್ರ ಇರಲಿಲ್ಲ. ಅದಕ್ಕಾಗಿ ಈಗ ಬಡವರ ಕಷ್ಟವನ್ನು ನೋಡಿಯೇ ಈ ಪಂಚರತ್ನ ಯಾತ್ರೆ ಶುರು ಮಾಡಿದ್ದೇನೆ. ಈಗ ಜನತೆಯಲ್ಲಿ ಐದು ವರ್ಷದ ಸರ್ಕಾರ ನೀಡಲು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಸುಮಲತಾ ಹೇಳಿಕೆಗೆ ಎಚ್ಡಿಕೆ ತಿರುಗೇಟು
ತಮ್ಮ ಮೂಲಕ ಡಿಕೆಶಿ, ಹೆಚ್ಡಿಕೆ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಸಂಸದೆ ಸುಮಲತಾ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಾ ನಾನು. ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಮಾರ್ಮಿಕವಾಗಿ ನುಡಿದರು. ಅವರು ಆಕಾಶದಲ್ಲಿರೋರು, ನಾನು ಭೂಮಿಯಲ್ಲಿರೋನು. ಅವರ ಬಗ್ಗೆ ಮಾತನಾಡಿ ನಾನು ಪಬ್ಲಿಸಿಟಿ ತೆಗೆದುಕೊಳ್ಳಲು ಆಗುತ್ತಾ. ಅವರ ಬಗ್ಗೆ ನಾನು ಏಕೆ ಚರ್ಚೆ ಮಾಡಲಿ, ಅಂತಹ ಯೋಗ್ಯತೆ ನನಗಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ