ಹುಬ್ಬಳ್ಳಿ: ಆ ತಾಯಿ ಬಡತನದ ಕುಟುಂಬದಿಂದ (Poor Family) ಬಂದವಳು. ದುಡಿದು ಚಿನ್ನಾಭರಣ (Gold Jewellery) ಮಾಡಿಸಿಕೊಂಡಿದ್ದ ಆ ಮಹಿಳೆ, ಮನೆಯ ಆರ್ಥಿಕ ಸಮಸ್ಯೆ ಸರಿದೂಗಿಸಲು ಮಣಪ್ಪುರಂ ಗೋಲ್ಡ್ ಲೋನ್ ನಲ್ಲಿ (Manappuram Gold Loan) ಬಂಗಾರವನ್ನು ಅಡ ಇಟ್ಟು ಸಾಲ ಪಡೆದಿದ್ದಾಳೆ. ಆದರೆ ಸಾಲವನ್ನು ಮರುಪಾವತಿಸಿ ಬಂಗಾರವನ್ನು ಪಡೆಯಲು ಹೋದ ಅವರಿಗೆ ಶಾಕ್ ಆಗಿದೆ. ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಯ ಸಿಬ್ಬಂದಿಯ ಜೊತೆಗೆ ಮಾತಿನ ಚಕಮಕಿ ನಡೆಸಿದ ಮಹಿಳೆ ಕೆಲ ದಿನಗಳ ಹಿಂದೆಯಷ್ಟೇ 37 ಗ್ರಾಂ ಬಂಗಾರವನ್ನು ಅಡ ಇಟ್ಟು ಸಾಲ ಪಡೆದಿದ್ದರು. ಆದರೆ ಈ ರೀತಿ ಲೋನ್ ಪಡೆಯಲೆಂದು ಅಡವಿಟ್ಟಿದ್ದ ಚಿನ್ನಾಭರಣ ಬೇರೆಯವರ ಪಾಲಾಗಿರೋ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಮಣಪ್ಪುರಂ ಗೋಲ್ಡ್ ಲೋನ್ ನ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಒಬ್ಬರು ಅಡವಿಟ್ಟಿದ್ದ ಬಂಗಾರವನ್ನು ಸಿಬ್ಬಂದಿ ಬೇರೆಯವರಿಗೆ ಕೊಟ್ಟಿರೋದ್ರಿಂದ ಯಡವಟ್ಟಾಗಿದೆ.
ಇದನ್ನೂ ಓದಿ: Kidnap Case: ವಿಜಯಪುರದಲ್ಲಿ ಬೇಕರಿ ಮಾಲೀಕನ ಅಪಹರಣ; 50 ಲಕ್ಷಕ್ಕೆ ಬೇಡಿಕೆ
ನಿಮ್ಮ ಬಂಗಾರ ನಮ್ಮ ಬಳಿ ಇಲ್ಲ..!
37 ಗ್ರಾಂ ಚಿನ್ನಾಭರಣ ಬೇರೆಯವರ ಪಾಲಾಗಿದೆ. ಗೋಲ್ಡ್ ಲೋನ್ ಸಂಸ್ಥೆಯ ಸಿಬ್ಬಂದಿ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತವಾಗಿದೆ. ಚಿನ್ನ ಅಡ ಇಟ್ಟಿದ್ದ ಮಹಿಳೆ 1.29 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಹೀಗೆ ಚಿನ್ನದ ಸಾಲ ಪಡೆದ ಮಹಿಳೆಯನ್ನು ಹುಬ್ಬಳ್ಳಿಯ ಜಗದೇವಿ ಮಾಳಿ ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದೆ ಸಾಲ ಪಡೆದಿದ್ದ ಮಹಿಳೆ, ಪ್ರತಿ ತಿಂಗಳು ನಿಯಮಿತವಾಗಿ ಬಡ್ಡಿ ಕಟ್ಟುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸದ ನಿಮಿತ್ತ ಸೊಲ್ಲಾಪುರ ಹೋಗಿದ್ದ ಈ ಕುಟುಂಬ ಬಡ್ಡಿ ಹಾಗೂ ಸಾಲದ ಪಾವತಿ ಮಾಡಿರಲಿಲ್ಲ. ಈಗ ಹಳೆಯ ಸಾಲವನ್ನು ವಜಾ ಮಾಡಿ ಬಂಗಾರ ಪಡೆಯಲು ಬಂದರೇ ನಿಮ್ಮ ಬಂಗಾರ ಈಗಾಗಲೇ ಯಾರೋ ಬಿಡಿಸಿಕೊಂಡು ಹೋಗಿದ್ದಾರೆ ಎಂಬ ಸಿಬ್ಬಂದಿಯ ಹೇಳಿಕೆ ಈ ಕುಟುಂಬಕ್ಕೆ ಶಾಕ್ ಕೊಟ್ಟಿದೆ.
ಬೇರೆ ಯಾರಿಗೋ ಚಿನ್ನ ಕೊಟ್ಟು ಫಜೀತಿ
ಇವರ ಹೆಸರಿನಲ್ಲಿ ಇದ್ದ ಬಂಗಾರವನ್ನು ಯಾರಿಗೋ ಅಪರಿಚಿತರಿಗೆ ಕೊಟ್ಟಿದ್ದು, ಬಡ ಕುಟುಂಬಕ್ಕೆ ಬರ ಸಿಡಿಲು ಬಂದೆರಗಿದಂತಾಗಿದೆ. ದೂರವಾಣಿಯಲ್ಲಿ ನೀವು ಕೊಡು ಎಂದು ಹೇಳಿದ ನಂತರವೇ ಕೊಟ್ಟಿರೋದಾಗಿ ಸಿಬ್ಬಂದಿ ಹೇಳುತ್ತಿದೆ. ಯಾರದ್ದೋ ಬಂಗಾರವನ್ನು ಯಾರಿಗೊ ಕೊಟ್ಟಿರುವ ಸಿಬ್ಬಂದಿಯ ವಿರುದ್ಧ ಚಿನ್ನದ ಸಾಲ ಪಡೆದ ಜಗದೇವಿ ಗುಂಡಪ್ಪ ಮಾಳಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಬಂಗಾರವನ್ನು ಯಾರಿಗೋ ಕೊಟ್ಟಿರುವ ಸಿಬ್ಬಂದಿ ನಡೆಗೆ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಮಾತ್ರವಲ್ಲದೆ ನಮ್ಮ ಬಾಂಡ್ ನಮ್ಮ ಹತ್ತಿರ ಇದ್ದರೂ ಅದು ಹೇಗೆ ನಮ್ಮ ಬಂಗಾರವನ್ನು ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: Special Marriage: ಕುಬ್ಜ ವರ, ಎತ್ತರದ ವಧು ಅಪರೂಪದ ಮದುವೆಗೆ ಸಾಕ್ಷಿಯಾದ ಬಾದಾಮಿಯ ನೀಲಗುಂದ ಗ್ರಾಮ
ಜಾಹೀರಾತು ನೋಡಿ ಮರುಳಾಗುವ ಮುನ್ನ ಎಚ್ಚರ..!
ಈ ಕುರಿತು ಸಿಬ್ಬಂದಿ ವಿಚಾರಿಸಿದಾಗ ಈ ಹಿಂದೆ ಇದ್ದ ಮ್ಯಾನೇಜರ್ ಅವರ ಅಧಿಕಾರ ಅವಧಿಯಲ್ಲಿ ಆಗಿದ್ದು, ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದು ಕೈ ಚೆಲ್ಲುತ್ತಿದ್ದಾರೆ. ಆದರೆ ನಮ್ಮ ಬಂಗಾರ ನಮಗೆ ಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.ಒಟ್ಟಿನಲ್ಲಿ ಜಾಹೀರಾತು ನೋಡಿ ಮನೆಯಲ್ಲಿ ಇದ್ದ ಬಂಗಾರವನ್ನು ಅಡವಿಟ್ಟ ಕುಟುಂಬದವರು ಈಗ ಪರಿತಪಿಸುವಂತೆ ಆಗಿದೆ. ಕೂಡಲೇ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸಿ ಕುಟುಂಬಸ್ಥರ ನೆರವಿಗೆ ಬರುವ ಕಾರ್ಯವನ್ನು ಮಾಡಬೇಕಿದೆ. ಜನಸಾಮಾನ್ಯರು ಚಿನ್ನವನ್ನು ಕಂಡಕಂಡಲ್ಲಿ ಅಡವಿಡುವ ಮುನ್ನ ಎಚ್ಚರಿಕೆ ವಹಿಸಬೇಕು ಇಲ್ಲವಾದರೆ, ಇದೇ ರೀತಿ ಮೋಸ ಹೋಗುವುದು ಖಚಿತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ