ಹುಬ್ಬಳ್ಳಿ: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಶಾಂತಿಯುತವಾಗಿ ಇದ್ದ ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಶಾಂತಿಗೆ ಭಂಗ ಬಂದಿದ್ದು, ಅನ್ಲಾಕ್ ಆದ ನಂತರ ಅಪರಾಧ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ.
ಅದರಲ್ಲಿಯೂ ಹುಬ್ಬಳ್ಳಿಯಲ್ಲಿ ಅಧಿಕ ಅಪರಾಧ ಪ್ರಕರಣಗಳು ನಡೆಯಲಾರಂಭಿಸಿವೆ. ಕೊಲೆ, ಕೊಲೆ ಯತ್ನ, ಹಲ್ಲೆ, ದರೋಡೆ ಇತ್ಯಾದಿ ಪ್ರಕರಣಗಳು ನಿರಾತಂಕವಾಗಿ ನಡೆದಿದ್ದು, ಜನರ ನಿದ್ದೆಗೆಡಿಸುವಂತೆ ಮಾಡಿವೆ. ಈ ಹಿನ್ನೆಲೆಯಲ್ಲಿ ರೌಡಿ ಪಡೆಗೆ ಬಿಸಿ ಮುಟ್ಟಿಸೋ ಕೆಲಸಕ್ಕೆ ಖಾಕಿ ಪಡೆ ಕೈ ಹಾಕಿದೆ.
ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಅಪರಾಧ ಕೃತ್ಯಗಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ರೌಡಿಶೀಟರ್ ಗಳಿಗೆ ಬಿಸಿ ಮುಟ್ಟಿಸೋ ಕೆಲಸ ನಡೆಸಿದ್ದಾರೆ. ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್, ಡಿಸಿಪಿ ಕೆ. ರಾಮರಾಜನ್ ರೌಡಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.
ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧೆಡೆ ದಾಳಿ ಕೈಗೊಳ್ಳಲಾಗಿತ್ತು. ನೂರಾರು ರೌಡಿಗಳಿಗೆ ಲಾಬೂರಾಮ್ ನೀಡಿದ್ದಾರೆ.
ಬೆಳಿಗ್ಗೆಯಿಂದಲೇ ವಿವಿಧೆಡೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ದಾಳಿ ವೇಳೆ ಕೆಲವೆಡೆ ಹರಿತವಾದ ಆಯುಧಗಳು ಪತ್ತೆಯಾಗಿವೆ. 9 ರೌಡಿಗಳ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಮಾರಕಾಸ್ತ್ರ ಹೊಂದಿದ್ದ ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 600 ಕ್ಕೂ ಹೆಚ್ಚು ರೌಡಿಗಳಿಗೆ ಪೊಲೀಸ್ ಕಮೀಷನರ್ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರತಿ ಪ್ರದೇಶದಲ್ಲಿಯೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮನೆ ಮನೆ ತಪಾಸಣೆ ಮಾಡಲಾಗಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಕಮೀಷನರ್ ಮುಂದಾಗಿದ್ದಾರೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡನ ಸಂಬಂಧಿಕನ ಕೊಲೆಯಾಗಿತ್ತು. ಕೊರೋನಾ ಅನ್ ಲಾಕ್ ನಂತರ ಅಪರಾಧ ಕೃತ್ಯಗಳ ಹೆಚ್ಚಳವಾಗಿದ್ದವು.
ಮೂವರು ದರೋಡೆಕೋರರ ಬಂಧನ
ಹುಬ್ಬಳ್ಳಿ ನಾಗರೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ನಗರದ ವಿವಿಧೆಡೆ ಹಾಗೂ ನಗರದ ಹೊರವಲಯದಲ್ಲಿ ಸುಲಿಗೆ, ದರೋಡೆಗಳ ಕೃತ್ಯಗಳನ್ನು ಎಸಗುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ರವಿಚಂದ್ರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳ್ನು ಹಳೇ ಹುಬ್ಬಳ್ಳಿಯ ಈಶ್ವರ ನಗರದ ಅಬೀದ್ ಅಜಗರ್ ಅಲಿ ಕಲಾಸಿ, ಹಳೇ ಹುಬ್ಬಳ್ಳಿಯ ಜಿದ್ದಿ ಇಮ್ರಾನ್ ಅಲಿಯಾಸ್ ಕಟಗಾ ಇಮ್ತಿಯಾಜ್ ಮನಿಯಾರ್, ಮಂಟೂರ ರಸ್ತೆಯ ನಿವಾಸಿ ಜೈಲಾನಿ ಬಾಷಾಸಾಬ್ ಶೇರಖಾನ್ ಎಂದು ಗುರುತಿಸಲಾಗಿದೆ.
ಈ ಮೂವರು ಆರೋಪಿಗಳು ನಗರದ ವಿವಿಧ ಕಡೆಗಳಲ್ಲಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ನಾಗರಿಕರಿಗೆ ದೊಡ್ಡ ತಲೆನೋವಾಗಿದ್ದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಉಪನಗರ ಠಾಣೆಯ ಇನ್ಸ್ಪೆಕ್ಟರ್ ರವಿಚಂದ್ರ ಅವರ ನೇತೃತ್ವದ ತಂಡ ಕೊನೆಗೂ ಬಂಧಿಸಿದೆ. ದರೋಡೆಗೆ ಬಳಸುತ್ತಿದ್ದ ಆಯುಧಗಳನ್ನು ಹಾಗೂ ದರೋಡೆ ಮಾಡಿದ ವಸ್ತುಗಳನ್ನೂ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀಮಂತ ದೇಶಗಳು ಲಸಿಕೆ ವಿಷಯದಲ್ಲಿ ಬಡದೇಶಗಳಿಗೆ ಅನ್ಯಾಯ ಎಸಗುತ್ತಿವೆಯೇ? ವಿಶ್ವ ಆರೋಗ್ಯ ಸಂಸ್ಥೆಯ ನಿಲುವೇನು?
ಬಂಧಿತರು ಹುಬ್ಬಳ್ಳಿಯಲ್ಲದೆ ಧಾರವಾಡದ ವಿವಿಧೆಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಮಾಂಗಲ್ಯ ಸರ ಕಳ್ಳತನ, ಮೊಬೈಲ್ ದರೋಡೆ ಪ್ರಕರಣ, ಕಲಘಟಗಿ ಠಾಣೆಯಲ್ಲಿ ಬೈಕ್ ಕಳ್ಳತನ, ವಿದ್ಯಾನಗರ ಠಾಣೆಯ ಸುಲಿಗೆ ಮತ್ತು ಕಳ್ಳತನ ಪ್ರಕರಣ ಮಾಡಿರೋದು ಬೆಳಕಿಗೆ ಬಂದಿದೆ. ಬಂಧಿತರಿಂದ ಕಳುವಾದ ಸಮಾಗ್ರಿ ವಶಪಡಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ