ಹುಬ್ಬಳ್ಳಿ: ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ಅನ್ನು ರಾಜ್ಯಕ್ಕೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಆಕ್ಸಿಜನ್ ದೊಡ್ಡ ಸಮಸ್ಯೆಯಾಗಿತ್ತು. ಆಕ್ಸಿಜನ್ ಹಂಚಿಕೆ ಕೇಂದ್ರ ಸರ್ಕಾರದ ಮೇಲಿದ್ದು, ಆಯಾ ರಾಜ್ಯಗಳಿಗೆ ಅದೇ ಹಂಚಿಕೆ ಮಾಡುತ್ತದೆ. ಮೊದಲು ಕರ್ನಾಟಕ ರಾಜ್ಯಕ್ಕೆ 300 ಮೆಟ್ರಿಕ್ ಟನ್ ನಿಗದಿಯಾಗಿತ್ತು. ಸತತ ಪ್ರಯತ್ನದ ನಂತರ ನಂತರದಲ್ಲಿ ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಹಂಚಿಕೆ ಆಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲದಿದ್ದರೂ, ಭವಿಷ್ಯದ ದೃಷ್ಟಿಯಿಂದ 1500 ಮೆಟ್ರಿಕ್ ಟನ್ ಹಂಚಿಕೆ ಅವಶ್ಯಕತೆಯಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಮ್ಮ ರಾಜ್ಯಕ್ಕೆ ಮೀಸಲಿಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ರಾಜ್ಯಕ್ಕೆ ದೂರದ ಒರಿಸ್ಸಾ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳಿಂದ ಆಕ್ಸಿಜನ್ ತರಿಸಲಾಗುತ್ತಿದೆ. ಇಲ್ಲಿ ಉತ್ಪಾದಿಸುವ ಆಕ್ಸಿಜನ್ ಬೇರೆ ಕಡೆ ಪೂರೈಕೆ ಮಾಡಿ, ಬೇರೆ ಕಡೆ ಉತ್ಪಾದಿಸುವ ಆಮ್ಲಜನಕ ಇಲ್ಲಿಗೆ ತರಿಸುವುದರಿಂದ ಅನಗತ್ಯ ಸಮಯ, ವೆಚ್ಚ ಹೆಚ್ಚಾಗಲಿದೆ. ಸದ್ಯ ರಾಜ್ಯದಲ್ಲಿ 1100 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಇದನ್ನು ಕರ್ನಾಟಕ ರಾಜ್ಯಕ್ಕೆ ಮೀಸಲಿಡುವಂತೆ ಶೆಟ್ಟರ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು ನಂತರದ ದೊಡ್ಡ ಸಿಟಿ ಹುಬ್ಬಳ್ಳಿ - ಧಾರವಾಡ ಅವಳಿ ನಗರವಾಗಿದೆ. ಒಂದು ಅಕ್ಸಿಜನ್ ಟ್ಯಾಂಕರ್ ಪ್ರತ್ಯೇಕವಾಗಿ ಹುಬ್ಬಳ್ಳಿ - ಧಾರವಾಡಕ್ಕೆ ಬೇಕು. ಬಳ್ಳಾರಿಯಿಂದ ನೇರವಾಗಿ ಹುಬ್ಬಳ್ಳಿ - ಧಾರವಾಡಕ್ಕೆ ಆಕ್ಸಿಜನ್ ಟ್ಯಾಂಕರ್ ಕಳಿಸುವ ವ್ಯವಸ್ಥೆಯಾಗಬೇಕು. ಮೇ 16 ರಿಂದ ಈ ವ್ಯವಸ್ಥೆಯಾಗಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಕೆಲಸ ನಾವು ಮಾಡ್ತಿದ್ದೇವೆ. ಕೋವಿಡ್ ವಿಷಯದಲ್ಲಿ ಕೋರ್ಟ್ ಡೈರೆಕ್ಷನ್ ವರೆಗೂ ನಾವು ಕಾದು ಕುಳಿತಿಲ್ಲ ಎಂದ ಜಗದೀಶ್ ಶೆಟ್ಟರ್, ಕೊರೋನಾ ಎರಡನೆಯ ಎಲೆ ಏಕಾಏಕಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಆರಂಭದಲ್ಲಿ ನಿಯಂತ್ರಣಕ್ಕೆ ಒಂದಷ್ಟು ತೊಡಕಾಗಿದ್ದರು, ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ಸರಿಯಾಗಿಯೇ ನಿಭಾಯಿಸುತ್ತಿದೆ. ನ್ಯಾಯಾಲಯದ ನಿರ್ದೇಶನ ನಿಮಿತ್ತ ಮಾತ್ರ. ಕೋರ್ಟ್ ನಿರ್ದೇಶದನ ಮೇಲೆಯೇ ನಮ್ಮ ಸರ್ಕಾರ ನಡೆಯುತ್ತಿಲ್ಲ. ಆಡಳಿತ ನಡೆಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ನ್ಯಾಯಾಲಯ ಅದರ ಕೆಲಸ ಅದು ಮಾಡ್ತಿದೆ. ನ್ಯಾಯಾಲಯ ಅಬ್ಸರ್ ವೇಶನ್ ಮಾಡಿದ ಅನ್ವಯ ನಿರ್ದೇಶನ ನೀಡಿದೆ. ನ್ಯಾಯಾಲಯದ ನಿರ್ದೇಶನದ ಬಗ್ಗೆ ಗೌರವ ಇದೆ. ನ್ಯಾಯಾಲಯದ ನಿರ್ದೇಶನಗಳನ್ನು ನಾವು ಪಾಲನೆ ಮಾಡ್ತೇವೆ. ಸರ್ಕಾರಕ್ಕೆ ಕೋರ್ಟ್ ಚಾಟಿ ಎಂಬುದು ಮಾಧ್ಯಮ ಸೃಷ್ಟಿ ಎಂದು ಶೆಟ್ಟರ್ ಹೇಳಿದರು.
ಇದನ್ನು ಓದಿ: ಆಕ್ಸಿಜನ್ ದುರಂತ ಪ್ರಕರಣ: ಸತ್ತವರು 24 ಅಲ್ಲ 36, ತನಿಖಾ ಸಮಿತಿಯ ವರದಿಯಲ್ಲಿ ಬಹಿರಂಗ
ಧಾರಾವಾಡ ಜಿಲ್ಲೆಯಲ್ಲಿ ಎರಡು ಕಡೆ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುತ್ತಿರೋದಾಗಿ ಶೆಟ್ಟರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಪಿ ಆ್ಯಂಡ್ ಟಿ ಕಂಪನಿಯಿಂದ ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲಾಗುತ್ತಿದೆ. ದೇಶಪಾಂಡೆ ಫೌಂಡೇಶನ್ ವತಿಯಿಂದ ಜಿಲ್ಲೆಗೆ 70 ಕಾನ್ಸಂಟ್ರೇಟರ್ಸ್ ಕೊಡುಗೆ ನೀಡಲಾಗಿದೆ. ಹೆಚ್ಚುವರಿಯಾಗಿ ಸಿಎಸ್ಆರ್ ಫಂಡ್ ನಿಂದ 30 ಕಾನ್ಸಂಟ್ರೇಟರ್ಸ್ ತರಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚವರಿಯಾಗಿ 80 ಕಾನ್ಸಂಟ್ರೇಟರ್ಸ್ ಬರಲಿವೆ ಎಂದರು.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ